ಕನ್ನಡಪ್ರಭ ವಾರ್ತೆ ಕೆ.ಆರ್.ನಗರ

ಪಟ್ಟಣದಲ್ಲಿ ನಿರ್ಮಾಣ ಹಂತದಲ್ಲಿರುವ ಡಾ.ಬಾಬು ಜಗಜೀವನರಾಮ್ ಅವರ ಸಮುದಾಯ ಭವನದ ಕಾಮಗಾರಿಯನ್ನು ಪೂರ್ಣಗೊಳಿಸಿ ಉದ್ಘಾಟನೆ ಮಾಡಬೇಕಾದ್ದುದ್ದು ನನ್ನ ಜವಾಬ್ದಾರಿ ಆಗಿದ್ದು ಮುಂದಿನ ವರ್ಷದ ಜಯಂತಿ ಆಚರಣೆಯನ್ನು ಆ ಸಮುದಾಯ ಭವನದಲ್ಲೇ ಮಾಡಲಾಗುತ್ತದೆ ಎಂದು ಶಾಸಕ ಡಿ.ರವಿಶಂಕರ್ ಹೇಳಿದರು.

ಪಟ್ಟಣದ ಬಾಬೂಜಿ ಅವರ ಪ್ರತಿಮೆ ಬಳಿ ಭಾನುವಾರ ತಾಲೂಕು ಆಡಳಿತ, ಪುರಸಭೆ, ತಾಲೂಕು ಪಂಚಾಯಿತಿ, ಸಮಾಜ ಕಲ್ಯಾಣ ಇಲಾಖೆ ಮತ್ತು ಮಾದಿಗ ಸಂಘಟನೆಗಳ ವತಿಯಿಂದ ಆಯೋಜಿದ್ದ ಹಸಿರು ಕ್ರಾಂತಿಯ ಹರಿಕಾರ, ಮಾಜಿ ಉಪ ಪ್ರಧಾನಿ ಡಾ. ಬಾಬು ಜಗಜೀವನ ರಾಮ್ ಅವರ 119ನೇ ವರ್ಷದ ಜನ್ಮ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಭವನಕ್ಕೆ 2013 ರಿಂದ 2018 ರವರೆಗೆ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರ ವಿಶೇಷ ಅನುದಾನ ಸೇರಿ ಈವರೆಗೆ 2.50 ಕೋಟಿ ರು. ಅನುದಾನ ಕೊಡಿಸಲಾಗಿದೆ. ಅಲ್ಲದೆ ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ಭರವಸೆ ನೀಡಿದರು.

ಕಾರ್ಮಿಕ ಮತ್ತು ರೈಲ್ವೆ ಸಚಿವರಾಗಿ ನೌಕರರಿಗೆ 12 ಗಂಟೆಗಳ ಕಾಲ ಇದ್ದ ಕೆಲಸದ ಸಮಯವನ್ನು 8 ಗಂಟೆಗೆ ನಿಗದಿಪಡಿಸಿ ದುಡಿಯುವ ನೌಕರರಿಗೆ ಸರ್ಕಾರದ ವತಿಯಿಂದ ಎಲ್ಲಾ ರೀತಿಯ ಸೌಲಭ್ಯ ದೊರೆಯಲು ಕಾರಣರಾದರು. ಇದರ ಜೊತೆಗೆ ರೈಲ್ವೆ ಇಲಾಖೆಯಲ್ಲಿ ಸಾಕಷ್ಟು ಸುಧಾರಣೆ ತಂದು ದೇಶಕ್ಕೆ ತಮದೇ ಆದ ಅಮೂಲ್ಯ ಕೊಡುಗೆ ನೀಡಿದ ಮಹಾ ನಾಯಕ ಎಂದು ನುಡಿದರು.

ಕೇವಲ ಸರ್ಕಾರದ ಸವಲತ್ತುಗಳ ಮೇಲೆ ಅವಲಂಬಿತರಾಗದೆ ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಿ ಸಮಾಜದ ಮುನ್ನೆಲೆಗೆ ತರುವ ಮೂಲಕ ಸಂಘಟಿತರಾಗಿ ತಮ್ಮ ಹಕ್ಕುಗಳಿಗಾಗಿ ಹೋರಾಟ ಮಾಡಿ. ಆಗ ಮಾತ್ರ ಸಮುದಾಯ ಅಭಿವೃದ್ಧಿ ಹೊಂದಲು ಸಾಧ್ಯ. ಇಂದಿನ ಮಹನೀಯರೆಲ್ಲಾ ವಿದ್ಯಾವಂತರಾದ್ದರಿಂದಲೇ ಸಮಾಜದಲ್ಲಿ ಸುಧಾರಣೆ ಸಾಧ್ಯವಾಗಿದೆ ಎಂದರು.


ತಹಸೀಲ್ದಾರ್ ಜಿ. ಸುರೇಂದ್ರಮೂರ್ತಿ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಎಚ್.ಎಲ್. ಶಂಕರ್‌ ಮೂರ್ತಿ, ತಾಪಂ ಮಾಜಿ ಅಧ್ಯಕ್ಷ ಎಂ.ಎಚ್. ಸ್ವಾಮಿ, ಆದಿಜಾಂಬವ ಸಂಘದ ತಾಲೂಕು ಅಧ್ಯಕ್ಷ ಲೋಕೇಶ್, ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಎಂ.ಎಸ್. ಮಹದೇವ ಮಾತನಾಡಿದರು.

ಈ ವೇಳೆ ಎಸ್‌ಐ ಎಸ್. ಶಿವಪ್ರಕಾಶ್, ಜಿಪಂ ಮಾಜಿ ಸದಸ್ಯ ಜಿ.ಆರ್. ರಾಮೇಗೌಡ, ಪುರಸಭಾ ಮಾಜಿ ಅಧ್ಯಕ್ಷ ಕೋಳಿ ಪ್ರಕಾಶ್, ಮಾಜಿ ಸದಸ್ಯ ಮಿಕ್ಸರ್ ಶಂಕರ್, ಮುಖ್ಯಾಧಿಕಾರಿ ರಮೇಶ್, ನಗರಯೋಜನ ಪ್ರಾಧಿಕಾರದ ಅಧ್ಯಕ್ಷ ಗಡ್ಡ ಮಹೇಶ್, ನಿರ್ದೇಶಕ ಸೈಯದ್ ಜಾಬೀರ್, ಎಂಎಸ್ ಎಸ್ ತಾಲೂಕು ಅಧ್ಯಕ್ಷ ಎಂ.ಎಸ್. ರವಿಕುಮಾರ್, ಪ್ರಧಾನ ಕಾರ್ಯದರ್ಶಿ ಬಿ.ಎಚ್. ಕುಮಾರ್, ಖಜಾಂಚಿ ಎಚ್.ಎಂ. ಮಂಜು, ಮಾದಿಗ ದಂಡೋರ ತಾಲೂಕು ಅಧ್ಯಕ್ಷ ಎಂ.ಎಸ್. ನಂಜುಂಡಸ್ವಾಮಿ, ದಸಂಸ ತಾಲೂಕು ಅಧ್ಯಕ್ಷ ಎಂ.ಎಸ್. ಮಲ್ಲೇಶ್, ಮುಖಂಡರಾದ ಎಂ.ಜೆ. ಕುಮಾರ್, ಕಲ್ಲಹಳ್ಳಿ ಶ್ರೀನಿವಾಸ್, ನವೀದ್, ಎಂ.ಟಿ. ರಾಜೇಶ್, ಆದರ್ಶ, ವೆಂಕಟೇಶ್, ಈರಯ್ಯ, ಕರ್ಣಕುಮಾರ್, ನಾಗೇಂದ್ರ, ರಮೇಶ್, ತಿರುಮಲ, ವಜ್ರೇಶ್, ಕುಮಾರ್ ಮೊದಲಾದವರು ಇದ್ದರು.