ಸಾರಾಂಶ
ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಜಿಲ್ಲಾ ಘಟಕದ ಕಟ್ಟಡವನ್ನು ಶುಕ್ರವಾರ ಲೋಕಾರ್ಪಣೆ ಮಾಡಲಾಯಿತು. ನಗರದ ವಿವೇಕಾನಂದನಗರದಲ್ಲಿ ನೂತನವಾಗಿ ನಿರ್ಮಿಸಿರುವ ಸಂಘಮಿತ್ರ ಎಂದು ನಾಮಕರಣವಾಗಿರುವ ಕಟ್ಟಡ ಧಾರ್ಮಿಕ ವಿಧಿವಿಧಾನಗಳೊಂದಿಗೆ ನೆರೆವೇರಿತು.
ಕನ್ನಡಪ್ರಭ ವಾರ್ತೆ ರಾಮನಗರ
ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಜಿಲ್ಲಾ ಘಟಕದ ಕಟ್ಟಡವನ್ನು ಶುಕ್ರವಾರ ಲೋಕಾರ್ಪಣೆ ಮಾಡಲಾಯಿತು. ನಗರದ ವಿವೇಕಾನಂದನಗರದಲ್ಲಿ ನೂತನವಾಗಿ ನಿರ್ಮಿಸಿರುವ ಸಂಘಮಿತ್ರ ಎಂದು ನಾಮಕರಣವಾಗಿರುವ ಕಟ್ಟಡ ಧಾರ್ಮಿಕ ವಿಧಿವಿಧಾನಗಳೊಂದಿಗೆ ನೆರೆವೇರಿತು.ರಾಮನಗರದ ನಿವಾಸಿ ಎಚ್.ರಾಮಚಂದ್ರಪ್ಪ ದಾನ ನೀಡಿದ 11 ಸಾವಿರ ಚದರಡಿ ಭೂಮಿಯಲ್ಲಿ ಎರಡು ಅಂತಸ್ತಿನ ಕಟ್ಟಡ ನಿರ್ಮಾಣವಾಗಿದೆ. ದಾನಿಗಳು, ಹಿತೈಷಿಗಳು ಹಾಗೂ ರಾಷ್ಟ್ರೀಯ ಸ್ವಯಂ ಸೇವಾ ಸಂಘದ ಕಾರ್ಯಕರ್ತರು ನೀಡಿದ ದೇಣಿಗೆಯಲ್ಲಿ ಜನಕಲ್ಯಾಣ ಟ್ರಸ್ಟ್ವತಿಯಿಂದ ಈ ಕಟ್ಟಡ ನಿರ್ಮಾಣವಾಗಿದೆ. ನೂತನ ಕಟ್ಟಡದಲ್ಲಿ ಆರ್.ಎಸ್.ಎಸ್ನ ಜಿಲ್ಲಾ ಕಚೇರಿ ಸ್ಥಾಪನೆಯಾಗಿದೆ. ಇಷ್ಟೂ ದಿನ ಜಿಲ್ಲಾ ಘಟಕಕ್ಕೆ ಸ್ವಂತ ಕಟ್ಟಡ ಇರಲಿಲ್ಲ.
ಕಟ್ಟಡದ ಉದ್ಘಾಟನೆ ಸಂಬಂಧ ನಡೆದ ಪೂಜಾ ಕಾರ್ಯದಲ್ಲಿ ಪ್ರಕಾಶ್ ದಂಪತಿ ಮತ್ತು ಸುದರ್ಶನ್ ಜೈನ್ ದಂಪತಿ ಭಾಗವಹಿಸಿದ್ದರು. ಶಿವಾಚಾರ್ಯ ಮಧು ದೀಕ್ಷಿತ್ ಮತ್ತು ಅರ್ಚಕರ ತಂಡ ಧಾರ್ಮಿಕ ವಿಧಿ ವಿಧಾನಗಳ ಆಚರಣೆಯ ನೇತೃತ್ವ ವಹಿಸಿದ್ದರು.ಸಂಘಮಿತ್ರ ಕಾರ್ಯಾಲಯದ ಲೋಕಾರ್ಪಣೆಯ ಬೌದ್ದಿಕ್ ವರ್ಗ ನಗರದ ಆರ್.ವಿ.ಸಿ.ಎಸ್ ಕಲ್ಯಾಣ ಮಂಟಪದಲ್ಲಿ ಬೌದ್ಧಿಕ ವರ್ಗ ನಡೆಯಿತು. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸರಸಂಘ ಕಾರ್ಯವಾಹ ಸಿ.ಆರ್.ಮುಕುಂದ ನಡೆಸಿಕೊಟ್ಟರು. ಈ ವೇಳೆ ಅವರು ಸಮಾಜದಲ್ಲಿ ಸಾಮರಸ್ಯ, ನಾಗರಿಕ ಕರ್ತವ್ಯ, ಕುಟುಂಬ ಪ್ರಬೋಧನೆ, ಪರ್ಯಾವರಣ ಮತ್ತು ಸ್ವದೇಶಿ ಗುಣಗಳ ಬಗ್ಗೆ ಸಂದೇಶ ನೀಡಿದರು.
ತುಮಕೂರು ವಿಭಾಗದ ಸಂಘ ಚಾಲಕ ನಾಗೇಂದ್ರ ಪ್ರಸಾದ್, ದಕ್ಷಿಣ ಮಧ್ಯ ಕ್ಷೇತ್ರಿಯ ಕಾರ್ಯವಾಹ ತಿಪ್ಪೇಸ್ವಾಮಿ, ಕರ್ನಾಟಕಕ ದಕ್ಷಿಣ ಪ್ರಾಂತ ಕಾರ್ಯವಾಹ ಡಾ.ಜಯಪ್ರಕಾಶ್, ಕರ್ನಾಟಕ ದಕ್ಷಿಣ ಪ್ರಾಂತ ಪ್ರಚಾರಕ್ ಗುರುಪ್ರಸಾದ್, ತುಮಕೂರು ವಿಭಾಗ ಪ್ರಚಾರಕ ಶಿವರಾಜ, ರಾಮನಗರ ಜಿ ಪ್ರಚಾರಕ ನವೀನ, ಜಿ ಕಾರ್ಯವಾಹ ಸಂದೀಪ್, ಚೇತನ್ ಹಾಗೂ ಸಂಘ ಪರಿವಾರದ ಕಾರ್ಯಕರ್ತರು ಉಪಸ್ಥಿತರಿದ್ದರು.