ಸಾರಾಂಶ
50 ಪ್ರೌಢಶಾಲಾ ಚಿತ್ರಕಲಾ ಶಿಕ್ಷಕರು ಈ ಶಿಬಿರದಲ್ಲಿ ಪಾಲ್ಗೊಂಡು ತಮ್ಮದೇ ಆದ ವಿಭಿನ್ನ ಪರಿಕಲ್ಪನೆಗಳಲ್ಲಿ ರಚಿಸಿರುವ ಚಿತ್ರಕಲಾ ಕೃತಿಗಳನ್ನು ಅವಲೋಕನ ಮಾಡಿದ ಮಧು ಬಂಗಾರಪ್ಪ.
ಧಾರವಾಡ:
ನಮ್ಮ ಶಾಲೆ ನಮ್ಮ ಜವಾಬ್ದಾರಿ ಯೋಜನೆಯಡಿ ಗುಣಮಟ್ಟದ ಶಿಕ್ಷಣ ಹಾಗೂ ವಿದ್ಯಾರ್ಥಿಗಳಲ್ಲಿ ನೈತಿಕ ಮೌಲ್ಯಗಳ ವಿಕಾಸಕ್ಕೆ ಸಂಬಂಧಿಸಿದಂತೆ 50 ಜನ ಪ್ರೌಢಶಾಲಾ ಚಿತ್ರಕಲಾ ಶಿಕ್ಷಕರು ರಚಿಸಿರುವ ನೂರಕ್ಕೂ ಹೆಚ್ಚು ಚಿತ್ರಕಲಾ ಕೃತಿಗಳ ಪ್ರದರ್ಶನವನ್ನು ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಮಂಗಳವಾರ ಉದ್ಘಾಟಿಸಿದರು.ಇಲ್ಲಿಯ ಶಿಕ್ಷಕಿಯರ ಸರ್ಕಾರಿ ತರಬೇತಿ ವಿದ್ಯಾಲಯದಲ್ಲಿ ಆಯೋಜಿಸಿದ್ದ ಈ ಚಿತ್ರಕಲಾ ಕೃತಿಗಳನ್ನು ನಗರದ ಸರ್ಕಾರಿ ಆರ್ಟ್ ಗ್ಯಾಲರಿಯಲ್ಲಿ ಹಮ್ಮಿಕೊಂಡಿದ್ದ ಬೆಳಗಾವಿ ವಿಭಾಗ ಮಟ್ಟದ 5 ದಿನಗಳ ಚಿತ್ರಕಲಾ ಶಿಕ್ಷಕರ ಶಿಬಿರದಲ್ಲಿ ರಚಿಸಲಾಗಿತ್ತು. ವಿಜಯಪುರ, ಬಾಗಲಕೋಟೆ, ಬೆಳಗಾವಿ, ಉತ್ತರ ಕನ್ನಡ, ಧಾರವಾಡ, ಹಾವೇರಿ, ಗದಗ, ಚಿಕ್ಕೋಡಿ ಮತ್ತು ಶಿರಸಿ ಶೈಕ್ಷಣಿಕ ಜಿಲ್ಲೆಗಳ 50 ಪ್ರೌಢಶಾಲಾ ಚಿತ್ರಕಲಾ ಶಿಕ್ಷಕರು ಈ ಶಿಬಿರದಲ್ಲಿ ಪಾಲ್ಗೊಂಡು ತಮ್ಮದೇ ಆದ ವಿಭಿನ್ನ ಪರಿಕಲ್ಪನೆಗಳಲ್ಲಿ ರಚಿಸಿರುವ ಚಿತ್ರಕಲಾ ಕೃತಿಗಳನ್ನು ಅವಲೋಕನ ಮಾಡಿದ ಮಧು ಬಂಗಾರಪ್ಪ, ವಿದ್ಯಾರ್ಥಿಗಳಲ್ಲಿ ಗುಣಮಟ್ಟದ ಶಿಕ್ಷಣದ ಜತೆಗೆ ನೈತಿಕ ಮೌಲ್ಯಗಳ ಅಳವಡಿಕೆ ಇರಬೇಕೆನ್ನುವ ವಿಶಿಷ್ಟ ಪರಿಕಲ್ಪನೆಗಳು ಚಿತ್ರಕಲಾ ಕೃತಿಗಳಲ್ಲಿ ಅಭಿವ್ಯಕ್ತಗೊಂಡಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ಶಿಕ್ಷಣ ಇಲಾಖೆಯ ಹೆಚ್ಚುವರಿ ಆಯುಕ್ತೆ ಜಯಶ್ರೀ ಸಿಂತ್ರಿ, ಜಂಟಿ ನಿರ್ದೇಶಕ ಈಶ್ವರ ನಾಯಕ, ಡಿಡಿಪಿಐ ಎಸ್. ಎಸ್. ಕೆಳದಿಮಠ, ಹಾವೇರಿ ಡಯಟ್ ಪ್ರಾಚಾರ್ಯ ಗಿರೀಶ ಪದಕಿ, ಆಯುಕ್ತರ ಕಚೇರಿಯ ಚಿತ್ರಕಲಾ ವಿಷಯ ಪರಿವೀಕ್ಷಕ ಪಿ.ಆರ್. ಬಾರಕೇರ, ಬಿಇಒಗಳಾದ ಉಮೇಶ ಬೊಮ್ಮಕ್ಕನವರ, ಅಶೋಕಕುಮಾರ ಸಿಂದಗಿ, ಟಿಸಿಡಬ್ಲ್ಯೂ ಪ್ರಾಚಾರ್ಯ ರವಿಕುಮಾರ ಬಾರಾಟಕ್ಕೆ ಇದ್ದರು.