ಕೆ.ಆರ್.ಪೇಟೆ:

ಬೆಂಗಳೂರಿನ ಅರಮನೆ ಮೈದಾನದಲ್ಲಿ ಜೂ.21ರಂದು ನಡೆಯಲಿರುವ ಕೆಪಿಸಿಸಿ ನೂತನ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ಅವರ ಪದಗ್ರಹಣ, ಮಾಜಿ ಸಿಎಂ ಸಿದ್ದರಾಮಯ್ಯು ಅವರಿಗೆ ಅಭಿನಂದನೆ ಹಾಗೂ ನೂತನ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಶುಭ ಹಾರೈಕೆ ಕಾರ್ಯಕ್ರಮಕ್ಕೆ ತಾಲೂಕಿನ ಕಾಂಗ್ರೆಸ್ ಕಾರ್ಯಕರ್ತರು, ಅಭಿಮಾನಿಗಳು, ಮತದಾರರು ಮತ್ತು ಮುಖಂಡರು ಸ್ವಯಂ ಪ್ರೇರಣೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವಂತೆ ಪಕ್ಷದ ಮುಖಂಡರು ಮನವಿ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ರಾಜ್ಯ ಕೈಮಗ್ಗ ನಿಗಮದ ಅಧ್ಯಕ್ಷ ಬಿ.ನಾಗೇಂದ್ರಕುಮಾರ್ ಮಾತನಾಡಿ, ಬಿ.ಕೆ.ಹರಿಪ್ರಸಾದ್ ಹೋರಾಟದ ಮೂಲಕ ಬೆಳೆದವರು. ಶೋಷಿತರ ಧ್ವನಿಯಾಗಿ ಹೋರಾಟ ಮಾಡಿ ಕೆಪಿಸಿಸಿ ಅಧ್ಯಕ್ಷರಾಗಿರುವುದು ಸಂತೋಷದ ವಿಷಯ ಎಂದರು.

ಅದೇ ರೀತಿ ನಿಕಟ ಪೂರ್ವ ಸಿಎಂ ಸಿದ್ದರಾಮಯ್ಯ ತಮ್ಮ ಅಧಿಕಾರದ ಅವಧಿಯಲ್ಲಿ ಅಹಿಂದ ಸಮುದಾಯಗಳ ನಾಯಕರಾಗಿ ಶೋಪಿತರ ಪರ ಕೆಲಸ ಮಾಡಿದ್ದಾರೆ. ಅಧಿಕಾರಕ್ಕೆ ಅಂಟಿಕೊಳ್ಳದೆ ಹೈಕಮಾಂಡ್ ಸೂಚಿಸಿದ ತಕ್ಷಣವೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಕೊಟ್ಟ ಮಾತಿನಂತೆ ನಡೆದುಕೊಂಡು ರಾಜಕಾರಣಿಗಳಿಗೆ ಮಾದರಿಯಾಗಿದ್ದಾರೆ ಎಂದರು.

ಕೆಪಿಸಿಸಿ ಸಾರಥಿಯಾಗಿ ರಾಜ್ಯದಲ್ಲಿ ಕಾಂಗ್ರೆಸ್ ಅನ್ನು ಅಧಿಕಾರಕ್ಕೆ ತಂದ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿಯಾಗಿ ಈಗಾಗಲೇ ಜನ ಮೆಚ್ಚುವ ಆಡಳಿತ ಆರಂಭಿಸಿದ್ದಾರೆ. ಇವರೆಲ್ಲರ ಅಭಿನಂದನಾ ಕಾರ್ಯಕ್ರಮಕ್ಕೆ ಕಾಂಗ್ರೆಸ್ಸಿಗರು ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿ ಪಕ್ಷದ ಬಲ ಹೆಚ್ಚಿಸುವಂತೆ ಮನವಿ ಮಾಡಿದರು.


ಸುದ್ದಿಗೋಷ್ಠಿಯಲ್ಲಿ ತಾಲೂಕು ಕಾಂಗ್ರೆಸ್ ಮುಖಂಡ ಬಿ.ಎಲ್.ದೇವರಾಜು, ಗ್ಯಾರಂಟಿ ಸಮಿತಿ ಅಧ್ಯಕ್ಷ ಎ.ಬಿ.ಕುಮಾರ್, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳಾದ ಟಿ.ಎನ್.ದಿವಾಕರ್, ಬಿ.ಕೆ.ರವೀಂದ್ರನಾಥ್, ಪುರಸಭೆ ಮಾಜಿ ಸದಸ್ಯ ಡಿ.ಪ್ರೇಂಕುಮಾರ್, ತಾಪಂ ಮಾಜಿ ಸದಸ್ಯ ಮೂಡನಹಳ್ಳಿ ನಾಗೇಂದ್ರ, ಇಲ್ಯಾಸ್ ಪಾಷ, ಕಾಂಗ್ರೆಸ್ ಎಸ್.ಸಿ ಘಟಕದ ಅಧ್ಯಕ್ಷ ರಾಜಯ್ಯ ಸೇರಿದಂತೆ ಹಲವರಿದ್ದರು. ಗವಿಮಠದಲ್ಲಿಂದು ವಿಶೇಷ ಪೂಜೆ

ಹಲಗೂರು:ಸಮೀಪದ ಡಿ.ಅಲಸಹಳ್ಳಿ ಬಳಿಯ ಗವಿಮಠದಲ್ಲಿ ಜೂ.16ರಂದು ಬೆಳಗ್ಗೆ 10 ಗಂಟೆಗೆ ಬಸವೇಶ್ವರಸ್ವಾಮಿಗೆ ವಿಶೇಷ ಪೂಜಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಮೇ ಒಂದರಂದು ದೇಗುಲದ ಕಳಶಾರೋಹಣ ರಾಜಗೋಪುರ, ಬಸವ ವಿಗ್ರಹ, ಶ್ರೀಷಡಕ್ಷರ ಮಂಗಳ ಮಂಟಪ ಮತ್ತು ಅನ್ನದಾಸೋಹ ಕಟ್ಟಡದ ಉದ್ಘಾಟನೆ, ಧಾರ್ಮಿಕ ಸಭೆಗಳು ನಡೆಸಿದ ನಂತರ ದಿನನಿತ್ಯ ಪೂಜೆ ನೆರವೇರಿಸಿ ಭಕ್ತಾದಿಗಳಿಗೆ ಪ್ರಸಾದ ವಿನಿಯೋಗ ನಡೆಸಲಾಗುತ್ತಿತ್ತು. ಮಂಗಳವಾರ 48 ದಿನ ಪೂರೈಸುತ್ತಿರುವ ಹಿನ್ನೆಲೆಯಲ್ಲಿ ಪೂಜಾ ಕಾರ್ಯಕ್ರಮಕ್ಕೆ ಸಿದ್ಧಗಂಗಾ ಮಠದ ಸಿದ್ದಲಿಂಗ ಮಹಾಸ್ವಾಮಿಗಳ ಮತ್ತು ಕನಕಪುರ ದೇಗುಲ ಮಠದ ಶ್ರೀಗಳು ಸೇರಿದಂತೆ ತಾಲೂಕಿನ ಎಲ್ಲಾ ಅರಚರ ಸ್ವಾಮೀಜಿಗಳು ಭಾಗವಹಿಸಲಿದ್ದಾರೆ ಎಂದು ಗವಿಮಠದ ಮಠಾಧೀಶ ಷಡಕ್ಷರ ಸ್ವಾಮೀಜಿ ತಿಳಿಸಿದ್ದಾರೆ.