ಕನ್ನಡಪ್ರಭ ವಾರ್ತೆ ಮಳವಳ್ಳಿ

ಮೂಳೆ ಶಸ್ತ್ರ ಚಿಕಿತ್ಸೆಗೆ ಅನುಕೂಲವಾಗುವಂತೆ ಆಧುನಿಕ ಹೊಸ ತಂತ್ರಜ್ಞಾನ ಒಳಗೊಂಡ ಲೈವ್ ಎಕ್ಸ್ರೇ ಕೇಂದ್ರವನ್ನು ಆರಂಭಿಸಲಾಗುತ್ತಿದೆ. ಸಾರ್ವಜನಿಕರು ಪ್ರಯೋಜನ ಪಡೆದುಕೊಳ್ಳಬೇಕು ಎಂದು ಶಾಸಕ ಪಿ.ಎಂ.ನರೇಂದ್ರಸ್ವಾಮಿ ತಿಳಿಸಿದರು.

ಪಟ್ಟಣದ ತಾಲೂಕು ಆಸ್ಪತ್ರೆಯಲ್ಲಿ 18 ಲಕ್ಷ ರು.ವೆಚ್ಚದ ನೂತನ ಸಿಎಆರ್‌ಎಂ ಎಕ್ಸ್ರೇ ಕೇಂದ್ರ ಉದ್ಘಾಟಿಸಿ ಮಾತನಾಡಿದ ಶಾಸಕರು, ಮುರಿದ ಮೂಳೆಗೆ ಶಸ್ತ್ರ ಚಿಕಿತ್ಸೆ ನಡೆಸಲು ಜಿಲ್ಲಾ ಕೇಂದ್ರ ಸೇರಿದಂತೆ ಬೆಂಗಳೂರು, ಮೈಸೂರಿಗೆ ಹೋಗಬೇಕಿತ್ತು. ತಾಲೂಕು ಕೇಂದ್ರದಲ್ಲೇ ಆಧುನಿಕ ಲೈವ್ ಎಕ್ಸ್ರೇ ಕೇಂದ್ರ ಆರಂಭಿಸಿರುವುದು ಗ್ರಾಮೀಣ ಜನರಿಗೆ ವರದಾನವಾಗಿದೆ ಎಂದರು.

ಆಧುನಿಕ ಲೈವ್ ಎಕ್ಸ್ರೇ ಕೇಂದ್ರದಿಂದ ಮುರಿದಿರುವ ಮೂಳೆಯನ್ನು ತಕ್ಷಣದಲ್ಲಿಯೇ ಕಂಡು ಹಿಡಿಯಬಹುದು. ನಿಖರತೆ ಹಾಗೂ ಕಡಿಮೆ ಅವಧಿಯಲ್ಲಿ ಯಶಸ್ವಿ ಶಸ್ತ್ರ ಚಿಕಿತ್ಸೆ ಜೊತೆಗೆ ಬೇಗನೇ ಗುಣಮುಖರಾಗಬಹುದು, ಅಪರೇಷನ್ ಸಂದರ್ಭದಲ್ಲಿ ರಕ್ತ ಹೋಗುವುದನ್ನು ತಡೆಯಬಹುದು ಎಂದರು.

ತಾಲೂಕು ಸಾರ್ವಜನಿಕ ಆಸ್ಪತ್ರೆ ಆಡಳಿತಾಧಿಕಾರಿ ಡಾ.ಸಂಜಯ್ ಮಾತನಾಡಿ, ಈ ಹಿಂದೆ ಅಸ್ಪತ್ರೆಯಲ್ಲಿ ಸಾಮಾನ್ಯ ಎಕ್ಸ್ರೇ ಮಾತ್ರ ಲಭ್ಯವಾಗಿತ್ತು. ಶಾಸಕರ ನೆರವಿನಿಂದ ಮೂಳೆ ಸಂಬಂಧಿಸಿದ ಆಧುನಿಕ ಹೊಸ ಎಕ್ಸ್ರೇ ಕೇಂದ್ರ ಆರಂಭಿಸಲಾಗಿದ್ದು, ತುರ್ತು ಸಂದರ್ಭದಲ್ಲಿ ರೋಗಿಗಳು ಹಾಗೂ ವೈದ್ಯರಿಗೆ ಅನುಕೂಲತೆಯಾಗಿದೆ ಎಂದರು.


ಮೂಳೆ ತಜ್ಞ ಡಾ. ಸುನೀಲ್‌ಕುಮಾರ್ ಮಾತನಾಡಿ, ಮೂಳೆ ಮುರಿತವನ್ನು ಪತ್ತೆ ಹಚ್ಚಲು ತಂತ್ರಜ್ಞಾನವು ತುಂಬಾ ಮುಂದುವರಿದಿದೆ. ಸಾಂಪ್ರದಾಯಿಕ ಎಕ್ಸ್-ರೇಗಳಿಗಿಂತ ಹೆಚ್ಚು ನಿಖರ ಮತ್ತು ವೇಗವಾಗಿ ಕೆಲಸ ಮಾಡುವ ಆಧುನಿಕ ಎಕ್ಸ್ರೇ ಇದಾಗಿದ್ದು, ಸಾಮಾನ್ಯ ಎಕ್ಸ್-ರೇನಲ್ಲಿ ಕಾಣಿಸದ ಸಣ್ಣ ಬಿರುಕುಗಳನ್ನು ಹೊಸ ಎಕ್ಸ್ರೇಯಲ್ಲಿ ಪತ್ತೆಹಚ್ಚಲು ಇದು ತುಂಬಾ ಸಹಕಾರಿಯಾಗಿದೆ. ಚಿತ್ರಗಳನ್ನು ಝೂಮ್ ಮಾಡಿ ಅಥವಾ ಬಣ್ಣ ಬದಲಿಸಿ ಮುರಿತದ ಆಳವನ್ನು ಸ್ಪಷ್ಟವಾಗಿ ನೋಡಬಹುದು ಎಂದು ವಿವರಿಸಿದರು.

ಇದೇ ಸಂದರ್ಭದಲ್ಲಿ ತಾಲೂಕು ವೈದ್ಯಾಧಿಕಾರಿ ಡಾ.ವೀರಭದ್ರಪ್ಪ, ತಾಪಂ ಇಒ ಎಚ್.ಜಿ ಶ್ರೀನಿವಾಸ್, ಸೆಸ್ಕಾಂ ಎಇಇ ಪ್ರೇಮ್ ಕುಮಾರ್, ಕ್ಷೇತ್ರ ಶಿಕ್ಷಾಧಿಕಾರಿ ವಿ.ಈ ಉಮಾ, ಮುಖಂಡರಾದ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ದೊಡ್ಡಯ್ಯ, ಟಿಎಪಿಸಿಎಂಎಸ್ ನಿರ್ದೇಶಕ ದೇವರಾಜು, ದಿಲೀಪ್, ಲಿಂಗರಾಜು, ಮಾಜಿ ಪುರಸಭೆ ಸದಸ್ಯ ನೂರುಲ್ಲಾ, ತಾಪಂ ಮಾಜಿ ಉಪಾಧ್ಯಕ್ಷ ಸಿ.ಮಾಧು, ಕೆಪಿಸಿಸಿ ಸದಸ್ಯ ಪುಟ್ಟಸ್ವಾಮಿ, ಮುಖಂಡರಾದ ವೆಂಕಟೇಶ್, ಬಂಕ್ ಮಹದೇವು ಸೇರಿದಂತೆ ಇತರರು ಇದ್ದರು.