ಅಮೋಘಸಿದ್ದ ಮಹಿಳಾ ಸ್ವಸಹಾಯ ಸಂಘ ಉದ್ಘಾಟನೆ

| Published : Feb 12 2024, 01:35 AM IST

ಸಾರಾಂಶ

ಮಹಿಳೆಯರು ಮಾಡುವ ಸಣ್ಣ ಪುಟ್ಟ ಕೆಲಸಗಳು ಇಡೀ ಸಂಸಾರದ ಬಂಡಿ ಸಾಗಿಸುತ್ತವೆ. ಹೀಗಾಗಿ ಮಹಿಳೆಯರನ್ನು ಯಾರೂ ಕೇವಲವಾಗಿ ಕಾಣುವುದು ಸರಿಯಲ್ಲ. ಇಂದು ಉದ್ಘಾಟನೆಯಾಗಿರುವ ಸ್ವಸಹಾಯ ಸಂಘ ಹೆಮ್ಮರವಾಗಿ ಬೆಳೆಯಲಿ.

ಕನ್ನಡಪ್ರಭ ವಾರ್ತೆ ಚವಡಾಪುರ

ಅಡುಗೆ ಮನೆಗೆ ಸೀಮಿತವಾಗಿದ್ದ ಮಹಿಳೆಯರು ಇಂದು ಜಗತ್ತು ನಿಬ್ಬೆರಗಾಗಿ ನೋಡುವಂಥ ಸಾಧನೆಗಳನ್ನು ಎಲ್ಲ ಕ್ಷೇತ್ರಗಳಲ್ಲೂ ಮಾಡುತ್ತಿದ್ದಾರೆ. ಅವರೆಲ್ಲರನ್ನು ಪ್ರೇರಣೆಯಾಗಿಟ್ಟುಕೊಂಡು ಗ್ರಾಮೀಣ ಭಾಗದ ಮಹಿಳೆಯರು ಸ್ವಾವಲಂಬಿ ಬದುಕು ಕಟ್ಟಿಕೊಳ್ಳಬೇಕು. ಮಹಿಳೆಯರ ಸ್ವಾವಲಂಬಿ ಜೀವನಕ್ಕೆ ಮಹಿಳಾ ಸ್ವಸಹಾಯ ಸಂಘಗಳು ಸಹಕಾರಿಯಾಗಲಿವೆ. ಇದರಿಂದ ಮಹಿಳಾ ಸಬಲೀಕರಣ ಸಾಧ್ಯವಾಗುತ್ತದೆ ಎಂದು ಬಿಜೆಪಿ ಹಿರಿಯ ಮುಖಂಡ ಮಾಜಿ ಸಚಿವ ಮಾಲೀಕಯ್ಯ ಗುತ್ತೇದಾರ ಹೇಳಿದರು.

ಅಫಜಲ್ಪುರ ಪಟ್ಟಣದ ಗುರು ಮಳೇಂದ್ರ ಕಲ್ಯಾಣ ಮಂಟಪದಲ್ಲಿ ಅಮೋಘಸಿದ್ದ ಮಹಿಳಾ ಸ್ವಸಹಾಯ ಸಂಘ ಉದ್ಘಾಟಿಸಿ ಮಾತನಾಡಿದ ಅವರು, ಮಹಿಳೆಯರು ಮಾಡುವ ಸಣ್ಣ ಪುಟ್ಟ ಕೆಲಸಗಳು ಇಡೀ ಸಂಸಾರದ ಬಂಡಿ ಸಾಗಿಸುತ್ತವೆ. ಹೀಗಾಗಿ ಮಹಿಳೆಯರನ್ನು ಯಾರೂ ಕೇವಲವಾಗಿ ಕಾಣುವುದು ಸರಿಯಲ್ಲ. ಇಂದು ಉದ್ಘಾಟನೆಯಾಗಿರುವ ಸ್ವಸಹಾಯ ಸಂಘ ಹೆಮ್ಮರವಾಗಿ ಬೆಳೆಯಲಿ. ಸಂಘದ ಬೆಳವಣಿಗೆಗೆ ಮತ್ತು ಸಂಘದಲ್ಲಿರುವ ಸದಸ್ಯರ ಸ್ವಾವಲಂಬಿ ಬದುಕಿಗೆ ಬೇಕಾದ ಸಹಾಯ, ಸಹಕಾರವನ್ನು ನಾವು ಮಾಡಲು ಸಿದ್ದರಿದ್ದೇವೆ. ಸರ್ಕಾರದ ಯೋಜನೆಗಳ ಲಾಭ ಪಡೆದು ಸ್ವಾವಲಂಬಿ ಜೀವನ ನಡೆಸಿ ಎಂದು ಸಲಹೆ ನೀಡಿದರು.

ಕಾರ್ಮಿಕ ಮುಖಂಡ ಶ್ರೀಮಂತ ಬಿರಾದಾರ, ಮಹಿಳಾ ಹೋರಾಟಗಾರ್ತಿ ಶಾಂತಾ ಘಂಟೆ, ಜ್ಯೋತಿ ಅಂಬೂರೆ, ಕೆನರಾ ಬ್ಯಾಂಕ್ ವ್ಯವಸ್ಥಾಪಕ ಬಸವರಾಜ ಯಳಸಂಗಿ ಮಾತನಾಡಿ, ಸ್ವಸಹಾಯ ಸಂಘಗಳು ನಿಯಮಾನುಸಾರ ಸರಿಯಾಗಿ ನಡೆದರೆ ನಿಜಕ್ಕೂ ಮಹಿಳಾ ಸಬಲೀಕರಣಕ್ಕೆ ಯಾವುದೇ ಅಡ್ಡಿ ಆತಂಕ ಬರುವುದಿಲ್ಲ. ಸಂಘದಲ್ಲಿರುವ ಸದಸ್ಯರೆಲ್ಲ ನಿಮ್ಮ ಶಕ್ತಿಯಾನುಸಾರ ಸಾಲ ಪಡೆದು ಕಿರು ಉದ್ಯಮಗಳನ್ನು ಸ್ಥಾಪಿಸಿ ಆರ್ಥಿಕವಾಗಿ ಸಬಲರಾಗಿ ಸಾಲ ಮರುಪಾವತಿ ಮಾಡುವ ಮೂಲಕ ಸ್ವಸಹಾಯ ಸಂಘ ಮತ್ತು ಬ್ಯಾಂಕುಗಳ ನಡುವಿನ ಕೊಂಡಿಗಳಂತೆ ಕೆಲಸ ಮಾಡಿ ಎಂದು ಹೇಳಿದರು.

ವಿಶ್ವರಾಧ್ಯ ಮಳೇಂದ್ರ ಶೀವಾಚಾರ್ಯರು ಮಾತನಾಡಿ, ಮಹಿಳಾ ಸ್ವಸಹಾಯ ಸಹಕಾರ ಸಂಘ ತಾಲೂಕಿನಾದ್ಯಂತ ಪಸರಿಸಲಿ, ಪ್ರತಿ ಗ್ರಾಮಗಳಲ್ಲಿ ಶಾಖೆಗಳು ಆರಂಭಗೊಂಡು ದೊಡ್ಡ ಹೆಮ್ಮರವಾಗಿ ಬೆಳೆಯಲಿ ಎಂದು ಹಾರೈಸಿದರು.

ಈ ಸಂದರ್ಭದಲ್ಲಿ ಕಲಾವತಿ ಮಾತೋಳಿ, ಅಂಬಿಕಾ ಗ್ಯಾನಬಾ, ನಾಗವೇಣಿ ಕೊಠಾರಿ, ಅಸ್ಮೀತಾ ಗಾಯಕವಾಡ, ಶಶಿಕಲಾ, ಮಹಾದೇವಿ ಮಳ್ಳಿ, ಸುಮಿತ್ರಾ ಚವ್ಹಾಣ ಸೇರಿದಂತೆ ಅನೇಕರು ಇದ್ದರು.