ಧಾರವಾಡ:

ಶಿಕ್ಷಣದ ಸಬಲೀಕರಣ ಹಾಗೂ ಪ್ರೌಢಶಾಲಾ ಬೋಧನೆಯಲ್ಲಿ ಗುಣಮಟ್ಟ ಕಾಪಾಡಲು ಮೈಂಡ್ ವೇವ್ ಎಜು ಹಬ್ ಎಂಬ ನೂತನ ಕೇಂದ್ರವನ್ನು ಮಾ.1ರಂದು ಬೆಳಗ್ಗೆ 10ಕ್ಕೆ ಸಾಧನಕೇರಿಯ ಬ್ರುವಂ ಗಾರ್ಡ್‌ನ್‌ ಹಿಂಭಾಗದಲ್ಲಿ ಆರಂಭಿಸಲಾಗಿದೆ ಎಂದು ಕೇಂದ್ರದ ಸಂಚಾಲಕ ಹಾಗೂ ಖ್ಯಾತ ಶಿಕ್ಷಣಾಧಿಕಾರಿ ಪ್ರೊ. ಎಸ್.ಎಂ. ಶಿವಪ್ರಸಾದ ಹೇಳಿದರು.

ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಇಸ್ರೋ ಮಾಜಿ ಅಧ್ಯಕ್ಷ ಡಾ. ಕಿರಣಕುಮಾರ್ ಉದ್ಘಾಟಿಸಲಿದ್ದು, ಅತಿಥಿಗಳಾಗಿ ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿ ಶಿವರಾಜ್ ಪಾಟೀಲ, ಶೈಕ್ಷಣಿಕ ಚಿಂತಕ ಡಾ. ಗುರುರಾಜ ಕರ್ಜಗಿ ಆಗಮಿಸಲಿದ್ದಾರೆ. ಇನ್ನು, ಆನ್‌ಲೈನ್ ವರ್ಚುವಲ್ ಮೂಲಕ ಭಾರತರತ್ನ ಪ್ರೊ. ಸಿ.ಎನ್. ರಾವ್ ಮತ್ತು ಡಾ. ಇಂದುಮತಿ ರಾವ್ ಉಪಸ್ಥಿತಿ ಇರಲಿದ್ದಾರೆ ಎಂದರು.

ಶಿಕ್ಷಕರಿಗೆ ಪರಿಣಿತ ಬೋಧನಾ ಕೌಶಲ್ಯಗಳಲ್ಲಿ ತರಬೇತಿ ನೀಡುವ ಮೂಲಕ ವಿದ್ಯಾರ್ಥಿಗಳಿಗೆ ನೀಡುವ ಶಿಕ್ಷಣದ ಗುಣಮಟ್ಟ ಹೆಚ್ಚಿಸುವುದು ಸಂಸ್ಥೆಯ ಉದ್ದೇಶ. ಮಹೇಶ ಮಾಸಾಳ, ಪಿ.ವಿ. ಹಿರೇಮಠ, ಸುಭಾಸ ಪಾಟೀಲ ಮತ್ತು ಉದಯ ಶಂಕರ ಸ್ನೇಹಿತರ ಪರಿಕಲ್ಪನೆಯಲ್ಲಿ ಮೂಡಿ ಬಂದಿರುವ ಸಂಸ್ಥೆಯು ಸುಸಜ್ಜಿತ ಪ್ರಯೋಗಾಲಯ, ಗ್ರಂಥಾಲಯ ಮತ್ತು ಭಾರತರತ್ನ ಪ್ರೊ. ಸಿ.ಎನ್. ರಾವ್ ಅವರಿಗೆ ಸಮರ್ಪಿತವಾದ ಹಾಲ್ ಆಫ್ ಸೈನ್ಸ್‌ ಸೇರಿದಂತೆ ಅತ್ಯಾಧುನಿಕ ಸೌಲಭ್ಯ ಹೊಂದಿದೆ ಎಂದು ತಿಳಿಸಿದರು.

ಅತ್ಯುತ್ತಮ ಶಿಕ್ಷಣ ಪರಿಣಿತರಿಂದ ರೂಪಿಸಲ್ಪಟ್ಟ ಪಠ್ಯಕ್ರಮದ ಅಡಿಯಲ್ಲಿ ಉದ್ಯೋಗಾಕಾಂಕ್ಷಿ ಶಿಕ್ಷಕರು ಹಾಗೂ ಸೇವೆಯಲ್ಲಿ ಇರುವ ಶಿಕ್ಷಕರು 90 ದಿನ (ಮೂರು ತಿಂಗಳ) ತರಬೇತಿ ಪಡೆಯಲಿದ್ದಾರೆ. ಶಿಕ್ಷಣಿಕ ಪರಿಣತಿ, ಸಹಾನುಭೂತಿ, ತರಗತಿ ಸಂವಹನ, ಡಿಜಿಟಲ್ ಪ್ರಾವೀಣ್ಯತೆ ಹಾಗೂ ವ್ಯಕ್ತಿತ್ವ ವಿಕಸನ ಅಂಶಗಳನ್ನು ಈ ತರಬೇತಿ ಹೊಂದಿದೆ ಎಂದರು.


ಮೊದಲ ಬ್ಯಾಚ್ ಪ್ರವೇಶ ಪ್ರಕ್ರಿಯ ಆರಂಭಗೊಂಡಿದ್ದು, ಮಾ. 7ರಿಂದ ತರಗತಿ ಆರಂಭಗೊಳ್ಳಲಿವೆ. ಇನ್ನು ಸಂಸ್ಥೆಯು ವಿದ್ಯಾರ್ಥಿಗಳಿಗೆ ಭಾನುವಾರ ವಿಜ್ಞಾನ ಶಿಬಿರ ಆಯೋಜಿಸುತ್ತಿದ್ದು, ಪ್ರಾಯೋಗಿಕ ಕಲಿಕೆ, ಮುಕ್ತ ಪ್ರಯೋಗಗಳು ಮತ್ತು ವಿಜ್ಞಾನಿಗಳೊಂದಿಗೆ ಸಂವಾದ ಇರಲಿವೆ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಹೇಶ ಮಾಸಾಳ, ಸುಭಾಸ ಪಾಟೀಲ, ಉದಯ ಶಂಕರ ಇದ್ದರು.