ಶ್ರೀ ರಾಮಮಂದಿರ ಪ್ರತಿಷ್ಠಾಪನೆ: ತಲಕಾವೇರಿಯಲ್ಲಿ ತೀರ್ಥ ಸಂಗ್ರಹ

| Published : Jan 07 2024, 01:30 AM IST

ಶ್ರೀ ರಾಮಮಂದಿರ ಪ್ರತಿಷ್ಠಾಪನೆ: ತಲಕಾವೇರಿಯಲ್ಲಿ ತೀರ್ಥ ಸಂಗ್ರಹ
Share this Article
  • FB
  • TW
  • Linkdin
  • Email

ಸಾರಾಂಶ

ಅಯೋಧ್ಯೆಯ ಶ್ರೀ ರಾಮಮಂದಿರದ ಪ್ರತಿಷ್ಠಾಪನೆಯಂದು ಅಭಿಷೇಕ ಮಾಡಲು ಕಾವೇರಿ ಮಾತೆಯ ಪವಿತ್ರ ತೀರ್ಥವನ್ನು ಅಖಿಲ ಭಾರತೀಯ ಸಂತ ಸಮಿತಿಯ ಕರ್ನಾಟಕ ಘಟಕ, ತಮಿಳುನಾಡು ಘಟಕ ಹಾಗೂ ಕೊಡಗು ಜಿಲ್ಲಾ ಘಟಕ, ಕೊಡಗು ಜಿಲ್ಲಾ ವಿಶ್ವ ಹಿಂದೂ ಪರಿಷತ್‌ ಘಟಕದ ಪದಾಧಿಕಾರಿಗಳು ತಲಕಾವೇರಿಯಲ್ಲಿ ಸ್ವೀಕರಿಸಿದರು.

ಕನ್ನಡಪ್ರಭ ವಾರ್ತೆ ಮಡಿಕೇರಿ

ಅಯೋಧ್ಯೆಯ ಶ್ರೀ ರಾಮಮಂದಿರದ ಪ್ರತಿಷ್ಠಾಪನೆಯಂದು ಅಭಿಷೇಕ ಮಾಡಲು ದೇಶಾದ್ಯಂತ ಪವಿತ್ರ ಸಪ್ತನದಿಗಳ ತೀರ್ಥವನ್ನು ಸಂಗ್ರಹಿಸುತ್ತಿದ್ದು, ದಕ್ಷಿಣ ಭಾರತದ ಪುಣ್ಯನದಿ ಕಾವೇರಿ ಮಾತೆಯ ಪವಿತ್ರ ತೀರ್ಥವನ್ನು ಅಖಿಲ ಭಾರತೀಯ ಸಂತ ಸಮಿತಿಯ ಕರ್ನಾಟಕ ಘಟಕ, ತಮಿಳುನಾಡು ಘಟಕ ಹಾಗೂ ಕೊಡಗು ಜಿಲ್ಲಾ ಘಟಕ, ಕೊಡಗು ಜಿಲ್ಲಾ ವಿಶ್ವ ಹಿಂದೂ ಪರಿಷತ್‌ ಘಟಕದ ಪದಾಧಿಕಾರಿಗಳು ತಲಕಾವೇರಿಯಲ್ಲಿ ಸ್ವೀಕರಿಸಿದರು.ಶನಿವಾರ ತಲಕಾವೇರಿಯಲ್ಲಿ ತಮಿಳುನಾಡು ರಾಜ್ಯದ ಮಾಯಿಲದುತ್ತುರೆ ಜಿಲ್ಲೆಯ ಧರ್ಮಾಪುರಂ ಅಧೀನಂನ ಪೀಠಾಧಿಪತಿ ಮಸಿಲಮಣಿ ದೇಸಿಗ ಜ್ಞಾನ ಸಂಬಂಧ ಸ್ವಾಮೀಜಿ ಅವರು ಹೋಮ ಹವನದೊಂದಿಗೆ ಕಾವೇರಿ ಮಾತೆಯ ನಾಮಜಪ ಮಾಡಿ ವಿಶೇಷ ಪೂಜೆ ಸಲ್ಲಿಸುವ ಮೂಲಕ ಪವಿತ್ರ ತೀರ್ಥವನ್ನು ಬ್ರಹ್ಮಕುಂಡಿಕೆಯಿಂದ ತಲಕಾವೇರಿ ದೇವಾಲಯದ ಪ್ರಧಾನ ಅರ್ಚಕರಿಂದ ಸ್ವೀಕರಿಸಿದರು.

ಈ ಸಂದರ್ಭ ಅಖಿಲ ಭಾರತೀಯ ಸಂತ ಸಮಿತಿ ರಾಜ್ಯ ಅಧ್ಯಕ್ಷ ಮಂಗಳೂರಿನ ಓಂ ಶ್ರೀ ಮಠದ ಗುರುಗಳಾದ ಮಹಾಮಂಡಲೇಶ್ವರ ಶ್ರೀ ವಿದ್ಯಾನಂದ ಸರಸ್ವತಿ ಸ್ವಾಮೀಜಿ, ಸಹ ಅಧ್ಯಕ್ಷೆ ಮಾತಾಶ್ರೀ ಶಿವಜ್ಞಾನಮಹಿ ಸರಸ್ವತಿ, ತಮಿಳುನಾಡು ರಾಜ್ಯದ ಸಂತ ಸಮಿತಿ ಅಧ್ಯಕ್ಷ ಮಹಾಮಂಡಲೇಶ್ವರ, ಕೋಶಾಧ್ಯಕ್ಷ ಗರುಡ ಮಹಾರಾಜ್‌, ಸಂತ ಸಮಿತಿ ಕೊಡಗು ಜಿಲ್ಲಾ ಅಧ್ಯಕ್ಷ ಅರಸಿನಕುಪ್ಪೆಯ ಶ್ರೀಮಂಜುನಾಥಸ್ವಾಮಿ ಕ್ಷೇತ್ರದ ಗುರುಗಳಾದ ಶ್ರೀ ರಾಜೇಶ್‌ನಾಥ್‌ ಜಿ, ವಿಹಿಂಪ ಕೊಡಗು ಜಿಲ್ಲಾ ಕಾರ್ಯಾಧ್ಯಕ್ಷ ಸುರೇಶ್‌, ಕೋಶಾಧಿಕಾರಿ ಸಂಪತ್‌ ಕುಮಾರ್‌, ಕೊಡಗು ಪತ್ರಕರ್ತರ ಸಂಘ ಅಧ್ಯಕ್ಷ ಎಸ್‌.ಎ.ಮುರಳೀಧರ್‌ ಮತ್ತಿತರರು ಇದ್ದರು.ಕೊಡಗಿನಲ್ಲಿ ಹಿಂದುತ್ವದ ಅಭ್ಯುದಯಕ್ಕೆ ಸಹಕಾರ: ಧರ್ಮಾಪುರಂ ಅಧೀನಂನ ಪೀಠಾಧಿಪತಿಈ ವೇಳೆ ಮಾತನಾಡಿದ ಧರ್ಮಾಪುರಂ ಅಧೀನಂನ ಪೀಠಾಧಿಪತಿ ಮಸಿಲಮಣಿ ದೇಸಿಗ ಜ್ಞಾನ ಸಂಬಂಧ ಸ್ವಾಮೀಜಿ, ದೇಶದ ಪವಿತ್ರ ತೀರ್ಥಕ್ಷೇತ್ರಗಳಲ್ಲೊಂದ ತಲಕಾವೇರಿಯಿಂದ ಮರ್ಯಾದ ಪುರುಷ ಶ್ರೀ ರಾಮಚಂದ್ರರು ಜನಿಸಿದ ಅಯೋಧ್ಯೆಗೆ ರಾಮಮಂದಿರ ಪ್ರತಿಷ್ಠಾಪನೆಗೆ ತೀರ್ಥವನ್ನು ಸಂಗ್ರಹಿಸಿ ಅಭಿಷೇಕಕ್ಕೆ ಕೊಂಡೊಯ್ಯುತ್ತಿರುವುದು ಎರಡೂ ರಾಜ್ಯಗಳಿಗೆ ಅತ್ಯಂತ ಸ್ಮರಣೀಯ ಕ್ಷಣಗಳಲ್ಲೊಂದಾಗಿದೆ. ಕೊಡಗಿನಲ್ಲಿ ಹಿಂದುತ್ವದ ಅಭ್ಯುದಯಕ್ಕಾಗಿ ಮತ್ತು ದೇವಾಲಯಗಳ ಪುನರುತ್ಥಾನಕ್ಕಾಗಿ ತಮ್ಮ ಮಠದ ವತಿಯಿಂದ ಎಲ್ಲ ರೀತಿಯ ಸಹಕಾರವನ್ನು ನೀಡಲಾಗುವುದು. ಅಲ್ಲದೇ ಮುಂದಿನ ದಿನಗಳಲ್ಲಿ ಜಿಲ್ಲೆಗೆ ಅಗತ್ಯವಿರುವ ವೇದ ಅಧ್ಯಯನ ಶಾಲೆ, ಗೋಶಾಲೆ, ವಿದ್ಯಾಮಂದಿರಗಳನ್ನು ಸ್ಥಾಪಿಸಲು ಚಿಂತನೆ ನಡೆಸಲಾಗಿದೆ ಎಂದು ಹೇಳಿದರು.

ಓಂ ಶ್ರೀ ಮಠದ ಗುರುಗಳಾದ ಮಹಾಮಂಡಲೇಶ್ವರ ಶ್ರೀ ವಿದ್ಯಾನಂದ ಸರಸ್ವತಿ ಸ್ವಾಮೀಜಿ ಮಾತನಾಡಿ, ಅಧ್ಯಾತ್ಮಿಕ, ಧಾರ್ಮಿಕ ಹಾಗೂ ಭಾವೈಕ್ಯತೆಯ ಸಂಕೇತವಾಗಿ ಎರಡೂ ರಾಜ್ಯಗಳ ಸಂತರು ಸಮ್ಮುಖದಲ್ಲಿ ಕಾವೇರಿ ಮಾತೆಯ ಪವಿತ್ರ ತೀರ್ಥವನ್ನು ಸ್ವೀಕಾರ ಮಾಡಿ ಅಯೋಧ್ಯೆಗೆ ಕಳುಹಿಸಿಕೊಡುವ ಮಹತ್ಕಾರ್ಯವನ್ನು ಈ ದಿನ ಮಾಡಲಾಗಿದೆ ಎಂದರು.

ಅಖಿಲ ಭಾರತೀಯ ಸಂತ ಸಮಿತಿಯ ಕೊಡಗು ಜಿಲ್ಲಾಧ್ಯಕ್ಷ ಶ್ರೀ ರಾಜೇಶ್‌ನಾಥ್‌ ಜಿ ಮಾತನಾಡಿ, ದೇಶ ಹಾಗೂ ಹಿಂದೂ ಧರ್ಮೀಯರಿಗೆ ಅತ್ಯಂತ ಪವಿತ್ರವಾದ ಸಪ್ತನದಿಗಳ ಪುಣ್ಯತೀರ್ಥವನ್ನು ಜ.೨೨ರಂದು ಅಯೋಧ್ಯೆಯ ಶ್ರೀ ರಾಮಮಂದಿರದ ಪ್ರತಿಷ್ಠಾಪನೆಗೆ ತೆಗೆದುಕೊಂಡು ಹೋಗುತ್ತಿರುವುದು ಪವಿತ್ರವಾದ ಕೆಲಸವಾಗಿದೆ. ಈ ಹಿನ್ನೆಲೆಯಲ್ಲಿ ತಲಕಾವೇರಿಯಿಂದ ಪುಣ್ಯತೀರ್ಥವನ್ನು ಸ್ವೀಕರಿಸಿ ಕಳುಹಿಸಿಕೊಡುತ್ತಿರುವುದು ಎಲ್ಲ ಹಿಂದೂ ಧರ್ಮೀಯರಿಗೆ ಅತ್ಯಂತ ಹೆಮ್ಮೆಯ ವಿಚಾರವಾಗಿದೆ ಎಂದರು.