ಸಾರಾಂಶ
ಕ್ಷೀರ ಕ್ರಾಂತಿಯ ಉದ್ದೇಶದ ನಂದಿನಿ ಅರ್ಬನ್ ಕೋ-ಆಪ್ ಕ್ರೆಡಿಟ್ ಸೊಸೈಟಿ ರಾಜ್ಯದಲ್ಲಿಯೇ ಪ್ರಥಮ ಬಾರಿಗೆ ನ.28ರಂದು ರಾಮದುರ್ಗದಲ್ಲಿ ಆರಂಭಗೊಳ್ಳಲಿದೆ ಎಂದು ಬೆಳಗಾವಿಯ ಕೆಎಂಎಫ್ ನಿರ್ದೇಶಕ ರಮೇಶ ಅಣ್ಣಿಗೇರಿ ಹೇಳಿದರು.
ಕನ್ನಡಪ್ರಭ ವಾರ್ತೆ ರಾಮದುರ್ಗ
ಕ್ಷೀರ ಕ್ರಾಂತಿಯ ಉದ್ದೇಶದ ನಂದಿನಿ ಅರ್ಬನ್ ಕೋ-ಆಪ್ ಕ್ರೆಡಿಟ್ ಸೊಸೈಟಿ ರಾಜ್ಯದಲ್ಲಿಯೇ ಪ್ರಥಮ ಬಾರಿಗೆ ನ.28ರಂದು ರಾಮದುರ್ಗದಲ್ಲಿ ಆರಂಭಗೊಳ್ಳಲಿದೆ ಎಂದು ಬೆಳಗಾವಿಯ ಕೆಎಂಎಫ್ ನಿರ್ದೇಶಕ ರಮೇಶ ಅಣ್ಣಿಗೇರಿ ಹೇಳಿದರು.ಪಟ್ಟಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹೈನುಗಾರಿಕೆಗೆ ಉತ್ತೇಜಿಸುವ ನಂದಿನಿ ಕೋ ಆಪ್ ಕ್ರೆಡಿಟ್ ಸೊಸೈಟಿಯನ್ನು ಬೆಳಗಾವಿ ಜಿಲ್ಲಾ ಹಾಲು ಒಕ್ಕೂಟದ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಉದ್ಘಾಟಿಸಲಿದ್ದಾರೆ. ಹರ್ಲಾಪೂರ ಢವಳೇಶ್ವರ ಮಠದ ರೇಣುಕ ಶಿವಯೋಗಿ ಸ್ವಾಮೀಜಿ ಸಾನ್ನಿಧ್ಯ ವಹಿಸುವ ಕಾರ್ಯಕ್ರಮದಲ್ಲಿ ರಾಮದುರ್ಗದ ಶಾಸಕ ಅಶೋಕ ಪಟ್ಟಣ, ಬೆಳಗಾವಿ ಹಾಲೂ ಒಕ್ಕೂಟ ನಿರ್ದೇಶಕ ಶಂಕರ ಇಟ್ನಾಳ, ವ್ಯವಸ್ಥಾಪಕ ನಿರ್ದೇಶಕ ಡಾ.ಶ್ರೀಕಾಂತ ವಿ.ಎಸ್, ಎಸ್.ಎಸ್.ಸಿದ್ಲಿಂಗಪ್ಪನವರ, ಜಯಪ್ರಕಾಶ ಶಿಂಧೆ, ತಹಸೀಲ್ದಾರ್ ಪ್ರಕಾಶ ಹೊಳೆಪ್ಪಗೋಳ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಸೊಸೈಟಿ ಅಧ್ಯಕ್ಷ ರುದ್ರಪ್ಪ ಸಿಂಗಾರಗೊಪ್ಪ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ತಿಳಿಸಿದರು.ಗೋಷ್ಠಿಯಲ್ಲಿ ಸೊಸೈಟಿ ಅಧ್ಯಕ್ಷ ರುದ್ರಪ್ಪ ಸಿಂಗಾರಗೊಪ್ಪ, ಉಪಾಧ್ಯಕ್ಷ ಶಿವಾನಂದ ಶಿರೂರ, ಘಟಕನೂರು ಸೊಸೈಟಿ ಅಧ್ಯಕ್ಷ ಯಲ್ಲಪ್ಪ ಬೀರಸಿದ್ದಿ ಇದ್ದರು.
ಬೆಳಗಾವಿಯ ಹಾಲು ಒಕ್ಕೂಟವು ದಿನದಿಂದ ದಿನಕ್ಕೆ ಹೆಚ್ಚಿನ ಪ್ರಮಾಣ ಹಾಲು ಶೇಖರಿಸುತ್ತಿದೆ. ಈ ವರ್ಷದಲ್ಲಿ ೩ ಲಕ್ಷ ಲೀಟರ್ ಹಾಲು ಸಂಗ್ರಹಿಸಲಾಗುತ್ತದೆ. ಜಿಲ್ಲೆಯಲ್ಲಿಯೇ ರಾಮದುರ್ಗದಿಂದ ಉತ್ತಮ ಗುಣಮಟ್ಟದ ಹಾಲು ಪೂರೈಕೆಯಾಗುತ್ತಿದೆ. ಹೈನುಗಾರಿಕೆಯನ್ನು ಇಲ್ಲಿನವರು ಉಪಕಸಬು ಮಾಡಿಕೊಂಡಿದ್ದಾರೆ. ಹೈನುಗಾರಿಕೆ ಬೆಳೆಸುವ ಸಲುವಾಗಿ ಹಾಲು ಉತ್ಪಾದಕರಿಗೆ ಧನ ಸಹಾಯ, ಸಹಕಾರ ನೀಡುವ ಉದ್ದೇಶ ಸೊಸೈಟಿ ಹೊಂದಿದೆ. ಸೊಸೈಟಿ ಸದಸ್ಯರಾದವರಿಗೆ ವಿಶೇಷ ಸೌಲಭ್ಯಗಳನ್ನು ಸೊಸೈಟಿ ಪೂರೈಸಲಿದೆ.-ರಮೇಶ ಅಣ್ಣಿಗೇರಿ,
ಬೆಳಗಾವಿಯ ಕೆಎಂಎಫ್ ನಿರ್ದೇಶಕರು.