ನಿರಂತರ ಮಳೆಗೆ ಮೂರು ಮನೆಗಳ ಗೋಡೆ ಕುಸಿತ: ಅಪಾರ ಹಾನಿ

| Published : Dec 04 2024, 12:30 AM IST

ನಿರಂತರ ಮಳೆಗೆ ಮೂರು ಮನೆಗಳ ಗೋಡೆ ಕುಸಿತ: ಅಪಾರ ಹಾನಿ
Share this Article
  • FB
  • TW
  • Linkdin
  • Email

ಸಾರಾಂಶ

ಫೆಂಗಾಲ್ ಚಂಡಮಾರುತದಿಂದ ಸುರಿದ ನಿರಂತರ ಮಳೆಯಿಂದಾಗಿ ಮೂರು ಮನೆಗಳು ಕುಸಿದು ಬಿದ್ದು ಜನಜಾನುವಾರುಗಳು ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ತಾಲೂಕಿನ ಕೊಪ್ಪ ಹೋಬಳಿ ಆಬಲವಾಡಿ ಗ್ರಾಮದಲ್ಲಿ ಸೋಮವಾರ ಜರುಗಿದೆ. ಗ್ರಾಮದ ವಿಶಾಲಮ್ಮ, ಕೆ.ಜಿ.ಪುಟ್ಟಸ್ವಾಮಿ, ತಿಮ್ಮೇಶ ಅವರಿಗೆ ಸೇರಿದ ನಾಡಹೆಂಚಿನ ಮನೆಗಳು ಮಳೆಯಿಂದ ಭಾಗಶಃ ಕುಸಿದು ಬಿದ್ದು ದವಸಧಾನ್ಯ ಸೇರಿದಂತೆ ಅನೇಕ ವಸ್ತುಗಳು ಹಾನಿಗೊಳಗಾಗಿವೆ.

ಕನ್ನಡಪಗ್ರಭ ವಾರ್ತೆ ಮದ್ದೂರು

ಫೆಂಗಾಲ್ ಚಂಡಮಾರುತದಿಂದ ಸುರಿದ ನಿರಂತರ ಮಳೆಯಿಂದಾಗಿ ಮೂರು ಮನೆಗಳು ಕುಸಿದು ಬಿದ್ದು ಜನಜಾನುವಾರುಗಳು ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ತಾಲೂಕಿನ ಕೊಪ್ಪ ಹೋಬಳಿ ಆಬಲವಾಡಿ ಗ್ರಾಮದಲ್ಲಿ ಸೋಮವಾರ ಜರುಗಿದೆ. ಗ್ರಾಮದ ವಿಶಾಲಮ್ಮ, ಕೆ.ಜಿ.ಪುಟ್ಟಸ್ವಾಮಿ, ತಿಮ್ಮೇಶ ಅವರಿಗೆ ಸೇರಿದ ನಾಡಹೆಂಚಿನ ಮನೆಗಳು ಮಳೆಯಿಂದ ಭಾಗಶಃ ಕುಸಿದು ಬಿದ್ದು ದವಸಧಾನ್ಯ ಸೇರಿದಂತೆ ಅನೇಕ ವಸ್ತುಗಳು ಹಾನಿಗೊಳಗಾಗಿವೆ.

ವಿಶಾಲಮ್ಮರ ಪುತ್ರ ಕೆ.ಜಿ.ಪುಟ್ಟಸ್ವಾಮಿ ಮನೆಯಲ್ಲಿದ್ದ ಜಾನುವಾರುಗಳಿಗೆ ಅಲ್ಪ ಪ್ರಮಾಣದ ಗಾಯಗಳಾಗಿವೆ. ಮಳೆಯಿಂದಾಗಿ ಮನೆ ಕುಸಿದು ಬೀಳುವುದನ್ನು ಕಂಡ ತಿಮ್ಮೇಶ ಮತ್ತು ಆತನ ಕುಟುಂಬದವರು ಮನೆಯಿಂದ ಹೊರಗೋಡಿ ಬಂದು ಪ್ರಾಣಪಾಯದಿಂದ ಪಾರಾಗಿದ್ದಾರೆ.

ಘಟನಾ ಸ್ಥಳಕ್ಕೆ ಗ್ರಾಪಂ ಸದಸ್ಯ ಸುರೇಶ್, ಪಿಡಿಒ ಮಹೇಂದ್ರ, ಕಾರ್ಯದರ್ಶಿ ಕೃಷ್ಣಪ್ಪ ಭೇಟಿ ನೀಡಿ ಮನೆಗಳನ್ನು ಕಳೆದುಕೊಂಡ ಜನರಿಗೆ ಸಾಂತ್ವನ ಹೇಳಿದರು. ನಿರಾಶ್ರಿತ ಕುಟುಂಬಗಳಿಗೆ ಸಂಬಂಧಿಕರ ಮನೆಗಳಲ್ಲಿ ತಾತ್ಕಾಲಿಕವಾಗಿ ವಾಸ ಮಾಡಲು ವ್ಯವಸ್ಥೆ ಮಾಡಿದರು.

ಆಬಲವಾಡಿ ಗ್ರಾಮದ ಸುತ್ತಮುತ್ತ ಪ್ರದೇಶಗಳಲ್ಲಿ ಧಾರಾಕಾರ ಮಳೆಯಿಂದಾಗಿ ಬೆಳೆ ನಾಶವಾಗಿ ರೈತರಿಗೆ ಆರ್ಥಿಕ ನಷ್ಟ ಉಂಟಾಗಿದೆ. ಜಿಲ್ಲಾ ಮತ್ತು ತಾಲೂಕ ಆಡಳಿತ ಶೀಘ್ರವೇ ಸರ್ವೇ ಕಾರ್ಯ ನಡೆಸುವ ಮೂಲಕ ಮನೆ ಮತ್ತು ಬೆಳೆಗಳನ್ನು ಪಡೆದುಕೊಂಡ ಜನರಿಗೆ ವೈಜ್ಞಾನಿಕವಾಗಿ ಪರಿಹಾರ ದೊರಕಿಸಿಕೊಡಬೇಕು ಎಂದು ಸುರೇಶ್ ಆಗ್ರಹಪಡಿಸಿದರು.

ನಾಳೆ ಹಾಸನದಲ್ಲಿ ಸ್ವಾಭಿಮಾನಿ ಸಮಾವೇಶ: ಸುರೇಶ್

ಮಂಡ್ಯ:

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಬೆಂಬಲಿಸಿ ಡಿಸೆಂಬರ್ 5ರಂದು ಹಾಸನದಲ್ಲಿ ಸ್ವಾಭಿಮಾನಿ ಸಮಾವೇಶವನ್ನು ಆಯೋಜಿಸಲಾಗಿದೆ ಎಂದು ಜಿಲ್ಲಾ ಕುರುಬರ ಸಂಘದ ಅಧ್ಯಕ್ಷ ಹಾಗೂ ಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷ ಸುರೇಶ್ ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ಅವರು ನಿಷ್ಕಳಂಕ ರಾಜಕೀಯ ಜೀವನ ನಡೆಸಿದ್ದಾರೆ. ವಿಪಕ್ಷಗಳು ಅವರ ವಿರುದ್ಧ ಪಿತೂರಿ ನಡೆಸುತ್ತಿದೆ. ಇದರಿಂದ ಹಾಸನ ಅರಸೀಕರೆ ರಸ್ತೆಯ ಕೃಷ್ಣನಗರದಲ್ಲಿ ಡಿ.5ರಂದು ಬೆಳಗ್ಗೆ 11 ಗಂಟೆಗೆ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದರು.

ಸಿದ್ದರಾಮಯ್ಯ ಪಿತೂರಿ ವಿರುದ್ಧ ನಿಂತು ಸಿದ್ದರಾಮಯ್ಯ ಅವರಿಗೆ ಶಕ್ತಿ ತುಂಬುವ ಕೆಲಸ ಮಾಡುವ ಉದ್ದೇಶದಿಂದ ಸ್ವಾಭಿಮಾನಿ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಜಿಲ್ಲೆಯ ಸಾರ್ವಜನಿಕರು, ಸಿದ್ದರಾಮಯ್ಯ ಬೆಂಬಲಿಗರು, ಕಾಂಗ್ರೆಸ್ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಕೋರಿದರು.

ಸುದ್ದಿಗೋಷ್ಠಿಯಲ್ಲಿ ಬಿ.ಲಿಂಗಯ್ಯ, ಅಮ್ಜದ್ ಪಾಷಾ, ಸಾತನೂರು ರಾಜು, ಪ್ರಫುಲ್ಲ, ಪುಟ್ಟಸ್ವಾಮಿಗೌಡ, ಶ್ರೀನಿವಾಸ್ ಇದ್ದರು.