ಕೈಗಾರಿಕಾ ಉತ್ಪನ್ನಗಳ ಸಾಗಣೆ, ಕಚ್ಚಾ ವಸ್ತುಗಳ ಆಮದು, ರಫ್ತು, ಪ್ರವಾಸೋದ್ಯಮ ಮತ್ತು ಸರಕು ಸಾಗಾಣಿಕೆಗೆ ಈ ಸೇರ್ಪಡೆ ಹೊಸ ಅವಕಾಶ ಒದಗಿಸಲಿದೆ. ಮಂಗಳೂರು ಬಂದರು ಹಾಗೂ ಮೈಸೂರು– ಬೆಂಗಳೂರು ಕೈಗಾರಿಕಾ ವಲಯಗಳ ನಡುವೆ ಉತ್ತಮ ರೈಲ್ವೆ ಸಂಪರ್ಕ ನಿರ್ಮಾಣವಾದರೆ ಕರ್ನಾಟಕದ ಆರ್ಥಿಕ ಅಭಿವೃದ್ಧಿಗೆ ಮತ್ತಷ್ಟು ವೇಗ ದೊರೆಯಲಿದೆ.

ಕನ್ನಡಪ್ರಭ ವಾರ್ತೆ ಮೈಸೂರು

ಮೈಸೂರು ವಿಭಾಗಕ್ಕೆ ಮಂಗಳೂರು ರೈಲ್ವೆ ಭಾಗವನ್ನು ಸೇರ್ಪಡೆಗೊಳಿಸಿರುವ ಕೇಂದ್ರ ಸರ್ಕಾರದ ಹಾಗೂ ರೈಲ್ವೆ ಇಲಾಖೆಯ ನಿರ್ಧಾರವನ್ನು ಮೈಸೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಅಧ್ಯಕ್ಷ ಡಾ.ಕೆ.ಬಿ. ಲಿಂಗರಾಜು ಸ್ವಾಗತಿಸಿದ್ದಾರೆ.

ಮೈಸೂರು ಮತ್ತು ಮಂಗಳೂರು ಎರಡೂ ಪ್ರಮುಖ ವಾಣಿಜ್ಯ, ಕೈಗಾರಿಕಾ ಹಾಗೂ ಪ್ರವಾಸೋದ್ಯಮ ಕೇಂದ್ರಗಳಾಗಿದ್ದು, ಈ ಎರಡು ಪ್ರದೇಶಗಳು ಒಂದೇ ರೈಲ್ವೆ ವಿಭಾಗದ ವ್ಯಾಪ್ತಿಗೆ ಬರುವುದರಿಂದ ಮೈಸೂರು– ಮಂಗಳೂರು ನಡುವಿನ ರೈಲ್ವೆ ಸಂಪರ್ಕ ಮತ್ತಷ್ಟು ಪರಿಣಾಮಕಾರಿ ಆಗಲಿದೆ. ವಿಶೇಷವಾಗಿ ಮಂಗಳೂರಿನ ಬಂದರು ಸೌಲಭ್ಯಗಳನ್ನು ಮೈಸೂರು, ಕೊಡಗು, ಮಂಡ್ಯ, ಹಾಸನ ಸೇರಿದಂತೆ ಮಧ್ಯ ಕರ್ನಾಟಕದ ಕೈಗಾರಿಕೆಗಳು ಮತ್ತು ವ್ಯಾಪಾರಿಗಳು ಹೆಚ್ಚಿನ ಪ್ರಮಾಣದಲ್ಲಿ ಬಳಸಿಕೊಳ್ಳಲು ಇದು ನೆರವಾಗಲಿದೆ ಎಂದು ಅವರು ತಿಳಿಸಿದ್ದಾರೆ.

ಕೈಗಾರಿಕಾ ಉತ್ಪನ್ನಗಳ ಸಾಗಣೆ, ಕಚ್ಚಾ ವಸ್ತುಗಳ ಆಮದು, ರಫ್ತು, ಪ್ರವಾಸೋದ್ಯಮ ಮತ್ತು ಸರಕು ಸಾಗಾಣಿಕೆಗೆ ಈ ಸೇರ್ಪಡೆ ಹೊಸ ಅವಕಾಶ ಒದಗಿಸಲಿದೆ. ಮಂಗಳೂರು ಬಂದರು ಹಾಗೂ ಮೈಸೂರು– ಬೆಂಗಳೂರು ಕೈಗಾರಿಕಾ ವಲಯಗಳ ನಡುವೆ ಉತ್ತಮ ರೈಲ್ವೆ ಸಂಪರ್ಕ ನಿರ್ಮಾಣವಾದರೆ ಕರ್ನಾಟಕದ ಆರ್ಥಿಕ ಅಭಿವೃದ್ಧಿಗೆ ಮತ್ತಷ್ಟು ವೇಗ ದೊರೆಯುವುದಾಗಿ ಅವರು ಹೇಳಿದ್ದಾರೆ.

ಮೈಸೂರು ವಿಭಾಗಕ್ಕೆ ಮಂಗಳೂರು ರೈಲ್ವೆ ವಿಭಾಗ ಸೇರ್ಪಡೆಯಿಂದ ಆಡಳಿತಾತ್ಮಕವಾಗಿ ಹಾಗೂ ಕಾರ್ಯಾಚರಣೆಯ ದೃಷ್ಟಿಯಿಂದ ಉತ್ತಮ ಸಮನ್ವಯ ಸಾಧ್ಯವಾಗಲಿದೆ. ಮುಂದಿನ ದಿನಗಳಲ್ಲಿ ಮೈಸೂರು– ಮಂಗಳೂರು ನಡುವೆ ಹೆಚ್ಚಿನ ರೈಲು ಸೇವೆಗಳು, ವೇಗದ ಸಂಪರ್ಕ ಮತ್ತು ಸರಕು ಸಾಗಣೆಗೆ ಅಗತ್ಯ ಮೂಲಸೌಕರ್ಯ ಕಲ್ಪಿಸುವ ನಿಟ್ಟಿನಲ್ಲಿ ರೈಲ್ವೆ ಇಲಾಖೆ ಕ್ರಮ ಕೈಗೊಳ್ಳಬೇಕು ಎಂದು ಅವರು ಮನವಿ ಮಾಡಿದ್ದಾರೆ.

ಈ ಮಹತ್ವದ ನಿರ್ಧಾರ ಕೈಗೊಂಡ ಕೇಂದ್ರ ಸರ್ಕಾರ, ರೈಲ್ವೆ ಸಚಿವಾಲಯ ಹಾಗೂ ಸಂಬಂಧಿಸಿದ ಅಧಿಕಾರಿಗಳಿಗೆ ಮೈಸೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಅಭಿನಂದನೆ ಸಲ್ಲಿಸಿದೆ.

ಶರೀರವೇ ಎಲ್ಲದಕ್ಕೂ ಕಾರಣ: ಡಾ.ಬಿ.ವಿ.ವಸಂತಕುಮಾರ್

ಕನ್ನಡಪ್ರಭ ವಾರ್ತೆ ಮೈಸೂರುಮನುಷ್ಯನ ಜೀವನ ಉದ್ಧಾರವಾದರೆ ಅಥವಾ ಹಾಳಾದರೆ ಅದಕ್ಕೆ ಶರೀರವೇ ಕಾರಣವಾಗಿರುತ್ತದೆ ಎಂದು ಸಾಹಿತಿ ಡಾ.ಬಿ.ವಿ.ವಸಂತಕುಮಾರ್‌ ಹೇಳಿದರು.

ನಗರದ ಚಾಮುಂಡಿಬೆಟ್ಟ ತಪ್ಪಲಿನ ಶ್ರೀ ಸುತ್ತೂರು ಶಾಖಾ ಮಠದಲ್ಲಿ ಶ್ರಾವಣ ಮಾಸದ 17ನೇ ದಿನ ಲಕ್ಕಣ್ಣದಂಡೇಶ ವಿರಚಿತ ಶಿವತತ್ತ್ವ ಚಿಂತಾಮಣಿ ಕುರಿತು ಪ್ರವಚನ ನೀಡಿದ ಅವರು, ದೇಹ ಕೇವಲ ಮೂಳೆ ಮಾಂಸದ ತಡಿಕೆಯಾಗದೆ ಬಸವಣ್ಣವರು ಹೇಳಿದಂತೆ ದೇವಾಲಯವಾಗಬೇಕು ಎಂದರು.ಶಿವತತ್ತ್ವ ಚಿಂತಾಮಣಿಯಲ್ಲಿ ನೂತನ ಭಕ್ತರ ಕುರಿತು ವಿವರಿಸುತ್ತ ದಕ್ಷಿಣಾಪುರ ಎಂಬಲ್ಲಿ ಬೇಳೆಯಯ್ಯ ಒಡೆಯರ್ ಎಂಬ ಶಿವ ಭಕ್ತರಿದ್ದರು. ಅವರು ಅನೇಕ ಪವಾಡಗಳನ್ನು ಮಾಡುತ್ತಿದ್ದರು. ಅಲ್ಲಿಯೇ ಸಮೀಪದ ದೇವಾಲಯವೊಂದರಲ್ಲಿ ಆಳೆತ್ತರದ ಲಿಂಗ ಸಮ ಹೋಳಾಗಿ ಬಿದ್ದಿರುತ್ತದೆ. ಅಲ್ಲಿನ ರಾಜ ಇದರಿಂದ ಕಂಗಲಾಗಿರುತ್ತಾನೆ. ಇದು ಶಿವ ಭಕ್ತರಾದ ಬೇಳೆಯಯ್ಯರಿಂದ ಮಾತ್ರ ಸಾಧ್ಯ ಎನ್ನಲಾಗುತ್ತದೆ. ಅದರಂತೆ ಅಪ್ರತಿಮ ಶಿವಭಕ್ತರಾದ ಬೇಳೆಯಯ್ಯನವರು ಅದನ್ನು ಕಾರ್ಯ ಸಾಧ್ಯ ಮಾಡುತ್ತಾರೆ ಎಂದರು.

ಕಲ್ಯಾಣ ರಾಜ್ಯವೆಂದರೆ ಅದು ಶಿವಭಕ್ತರಿಂದ ತುಂಬಿರುವಂಥದ್ದು. ಅದು ಕೇವಲ ಊರಲ್ಲ ಇಡೀ ಭೂಮಂಡಲಕ್ಕೆ ಶುಭವನ್ನು ಬಯಸುವ ಪುಣ್ಯಸ್ಥಳ. ಎಲ್ಲರ ಪಾಪಗಳನ್ನು ದೂರ ಮಾಡಿ ಪುಣ್ಯ ಸಂಪಾದಿಸುವ ಭೂಮಿಯದು. ಪರಮ ಕೈವಲ್ಯ ಪದವಿ ಸಿಗುವ ಸ್ಥಳವದು. ಅದಕ್ಕೆಲ್ಲ ಬಸವಣ್ಣನವರಂತಹ ಶರಣರು ಕಾರಣವೆಂದು ಲಕ್ಕಣ್ಣದಂಡೇಶ ವಿವರಿಸುತ್ತಾನೆ ಎಂದರು.ಎನ್.ಎಂ.ಶಿವಕುಮಾರಸ್ವಾಮಿ ಕುಟುಂಬದವರು ಸೇವಾರ್ಥ ನೆರವೇರಿಸಿದರು.