ಉಡುಪಿ: ಇಲ್ಲಿನ ಬ್ರಹ್ಮಗಿರಿ ಐಎಂಎ ಸಭಾಭವನದಲ್ಲಿ ಕಮಲ್ ಎ. ಬಾಳಿಗ ಚಾರಿಟೇಬಲ್ ಟ್ರಸ್ಟ್, ದೊಡ್ಡಣಗುಡ್ಡೆಯ ಡಾ. ಎ. ವಿ. ಬಾಳಿಗ ಮೆಮೋರಿಯಲ್ ಆಸ್ಪತ್ರೆ, ಒನ್ ಗುಡ್ ಸ್ಟೆಪ್, ಇಂಡಿಯನ್ ಮೆಡಿಕಲ್ ಅಸೋಸಿಯೇಷನ್, ಸಹಾಸ್ ಪಿಡಿಯಾಟ್ರಿಕ್ ಇಂಟರ್ವೆಂಷನ್ ಸೆಂಟರ್ ಹಾಗೂ ಹಿರಿಯಡ್ಕ ಜೆನೆಸಿಸ್ ಪ್ಯಾಕೇಜಿಂಗ್ ಪ್ರೈವೇಟ್ ಲಿಮಿಟೆಡ್ ಆಶ್ರಯದಲ್ಲಿ ಇನ್ಕ್ಲೂಸಿವ್ ಎಜುಕೇಶನ್ - ಸೇಫ್ ಮೈಂಡ್ಸ್ ಎಂಬ ಎರಡು ದಿನಗಳ ಕಾರ್ಯಾಗಾರವನ್ನು ಆಯೋಜಿಸಲಾಗಿದೆ.
ಕಾರ್ಯಾಗಾರವನ್ನು ಉಡುಪಿ ಕರಾವಳಿ ಐಎಂಎ ಅಧ್ಯಕ್ಷ ಡಾ. ಅಶೋಕ್ ಕುಮಾರ್ ಉದ್ಘಾಟಿಸಿದರು. ಪೂರ್ಣಿಮಾ ಎಸ್ ಪ್ರಾರ್ಥಿಸಿದರು. ಮುಖ್ಯ ಅತಿಥಿಯಾಗಿ ಡಯಟ್ ಪ್ರಾಂಶುಪಾಲ ಡಾ. ಅಶೋಕ ಕಾಮತ್ ಆಗಮಿಸಿದ್ದರು, ಡಾ. ಎ. ವಿ. ಬಾಳಿಗಾ ಗ್ರೂಪ್ ಆಫ್ ಇನ್ಸ್ಟಿಟ್ಯೂಷನ್ಸ್ನ ನಿರ್ದೇಶಕ ಡಾ. ಪಿ. ವಿ. ಭಂಡಾರಿ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಾಗಾರದ ತಜ್ಞ ಸಂಪನ್ಮೂಲ ವ್ಯಕ್ತಿಗಳಾಗಿ ಸುಹಾಸ್ ನಿರ್ದೇಶಕಿ ಡಾ. ನೀತಾ ಮೆಹ್ತಾ ಅವರು ವಿಶೇಷ ಅಗತ್ಯಗಳಿರುವ ಮಕ್ಕಳ ಶಿಕ್ಷಣ, ಒಳಗೊಳ್ಳುವ ಶಾಲಾ ವ್ಯವಸ್ಥೆ ಹಾಗೂ ಮಕ್ಕಳ ಮಾನಸಿಕ ಸುರಕ್ಷತೆ ಕುರಿತು ಮಾಹಿತಿ ನೀಡಿದರು.ಕಾರ್ಯಕ್ರಮದಲ್ಲಿ ಒನ್ ಗುಡ್ ಸ್ಟೆಪ್ನ ಸ್ಥಾಪಕಿ ಅಮಿತಾ ಪೈ, ಟ್ರಸ್ಟಿ ಭಾಸ್ಕರ್ ಸಿ.ಎನ್., ಜೆನೆಸಿಸ್ ಪ್ಯಾಕೇಜಿಂಗ್ನ ನಿರ್ದೇಶಕಿ ನಿರಾಲಿ ವೋರಾ, ನಿವೃತ್ತ ಉಪಪ್ರಾಂಶುಪಾಲೆ ದೀಪಾ ಭಂಡಾರಿ ಉಪಸ್ಥಿತರಿದ್ದರು. ದೀಪಶ್ರೀ ವಂದಿಸಿದರು.