ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಕೆಯಾಗಿದ್ದು, ಕಳೆದ 8 ವರ್ಷಗಳ ಹಿಂದೆ ನಿಗದಿಯಾದ ಬೆಲೆಯಲ್ಲಿ ಕಸ ವಿಲೇವಾರಿ ಕಷ್ಟವಾಗುತ್ತಿದೆ. ಈ ಬೆಲೆಯನ್ನು ಪರಿಷ್ಕರಿಸಿ ಪ್ರಸ್ತುತ ಇಂಧನ ದರಕ್ಕೆ ಸರಿ ಹೊಂದಿಸಿದ ದರ ನೀಡಬೇಕೆಂದು ಕಸ ವಿಲೇವಾರಿ ಗುತ್ತಿಗೆದಾರರು ಜಿಬಿಎಗೆ ಆಗ್ರಹಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಕೆಯಾಗಿದ್ದು, ಕಳೆದ 8 ವರ್ಷಗಳ ಹಿಂದೆ ನಿಗದಿಯಾದ ಬೆಲೆಯಲ್ಲಿ ಕಸ ವಿಲೇವಾರಿ ಕಷ್ಟವಾಗುತ್ತಿದೆ. ಈ ಬೆಲೆಯನ್ನು ಪರಿಷ್ಕರಿಸಿ ಪ್ರಸ್ತುತ ಇಂಧನ ದರಕ್ಕೆ ಸರಿ ಹೊಂದಿಸಿದ ದರ ನೀಡಬೇಕೆಂದು ಕಸ ವಿಲೇವಾರಿ ಗುತ್ತಿಗೆದಾರರು ಜಿಬಿಎಗೆ ಆಗ್ರಹಿಸಿದ್ದಾರೆ.ಈ ಸಂಬಂಧ ಘನತ್ಯಾಜ್ಯ ನಿರ್ವಹಣಾ ಮುಖ್ಯಸ್ಥರಿಗೆ ಪತ್ರಬರೆದಿದ್ದು, ಡೀಸೆಲ್ ದರ ಹೆಚ್ಚಳದಿಂದ ತ್ಯಾಜ್ಯ ನಿರ್ವಹಣಾ ವೆಚ್ಚ ನಿರೀಕ್ಷೆಗೂ ಮೀರಿ ಹೆಚ್ಚಾಗಿದೆ. ಟ್ರಾಕ್ಟರ್, ಟಿಪ್ಪರ್ ಗಳ ನಿರ್ವಹಣಾ ವೆಚ್ಚ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿದೆ, ಹಾಲಿ ದರದಲ್ಲಿ ತ್ಯಾಜ್ಯ ನಿರ್ವಹಣೆ ಕಷ್ಟಸಾಧ್ಯ. ಪ್ರಸ್ತುತ 2017-18ರಲ್ಲಿ ಅಂದಿನ ಡೀಸೆಲ್ ದರ ಆಧರಿಸಿ ದರ ನೀಡಲಾಗುತ್ತಿದೆ, ಇದು ಅತ್ಯಂತ ಕಡಿಮೆ ದರವಾಗಿದ್ದು, ಕೂಡಲೇ ದರ ಹೆಚ್ಚಿಸುವಂತೆಯೂ ಮನವಿ ಮಾಡಿದ್ದಾರೆ.
ಈಗಾಗಲೆ ದೇಶದಲ್ಲಿ ಡೀಸೆಲ್ ಹಾಗೂ ಪೆಟ್ರೋಲ್ ದರ ಹೆಚ್ಚಾಗಿದ್ದು, ಈ ದರಗಳ ಆಧಾರದ ಮೇಲೆ ದರ ಏರಿಸಬೇಕು. ಈ ಎಲ್ಲ ಸಮಸ್ಯೆಗಳನ್ನು ಕೂಡಲೇ ಗುತ್ತಿಗೆದಾರರ ಜೊತೆ ಚರ್ಚಿಸಲು ತುರ್ತು ಸಭೆ ನಡೆಸುವಂತೆ ತ್ಯಾಜ್ಯವಿಲೇವಾರಿ ನಿರ್ವಹಣಾ ವಿಭಾಗದ ಮುಖ್ಯಸ್ಥರಿಗೆ ಕೋರಿದ್ದಾರೆ.ಈ ಸಂಬಂಧ ಘನತ್ಯಾಜ್ಯ ವಿಲೇವಾರಿ ಮುಖ್ಯಸ್ಥ ಕರಿಗೌಡ ಅವರು ಕನ್ನಡಪ್ರಭದೊಂದಿಗೆ ಮಾತನಾಡಿ, ಪ್ರಸ್ತುತ ಇಂಧನ ದರ ಏರಿಕೆಯಾಗಿರುವುದರಿಂದ ಹಳೆಯ ದರಗಳನ್ನು ಪರಿಷ್ಕರಿಸುವಂತೆ ಗುತ್ತಿಗೆದಾರರು ಕೋರಿದ್ದಾರೆ. ಆದರೆ, ವಿಲೇವಾರಿ ಸ್ಥಗಿತ ಮಾಡುವ ವಿಚಾರ ಪ್ರಸ್ತಾಪಿಸಿಲ್ಲ. ಶುಕ್ರವಾರ ಈ ಸಂಬಂಧ ನಡೆಯುವ ಸಭೆಯಲ್ಲಿ ಗುತ್ತಿಗೆದಾರರು, ಮುಖ್ಯ ಆಯುಕ್ತರೊಂದಿಗೆ ಸಭೆಯಲ್ಲಿ ಪಾಲ್ಗೊಂಡು ಚರ್ಚಿಸಿ ಮುಂದಿನ ತೀರ್ಮಾನ ಕೈಗೊಳ್ಳುತ್ತೇವೆ ಎಂದು ತಿಳಿಸಿದರು.