ಕೆಆರ್‌ಎಸ್ ಜಲಾಶಯದಲ್ಲಿ ಒಳ ಹರಿವಿನ ಪ್ರಮಾಣ ಹೆಚ್ಚಳ..!

| Published : May 20 2024, 01:34 AM IST / Updated: May 20 2024, 09:19 AM IST

ಕೆಆರ್‌ಎಸ್ ಜಲಾಶಯದಲ್ಲಿ ಒಳ ಹರಿವಿನ ಪ್ರಮಾಣ ಹೆಚ್ಚಳ..!
Share this Article
  • FB
  • TW
  • Linkdin
  • Email

ಸಾರಾಂಶ

ಕೊಡಗು ಸೇರಿದಂತೆ ಕೆಆರ್‌ಎಸ್ ಜಲಾಶಯ ವ್ಯಾಪ್ತಿಗೆ ಬರುವ ಹಲವು ಪ್ರದೇಶಗಳಲ್ಲಿ ಕಳೆದ ಒಂದು ವಾರಗಳಿಂದ ಆಗಾಗ್ಗೆ ಸುರಿಯುತ್ತಿದೆ. ಮಳೆಯಿಂದಾಗಿ ಅಣೆಕಟ್ಟೆಗೆ ನೀರಿನ ಹರಿವು ಹೆಚ್ಚಳವಾಗಿರುವುದು ರೈತರಿಗೆ ಸಂತಸ ತಂದಿದೆ.  

 ಮಂಡ್ಯ :  ಕಾವೇರಿ ಜಲಾನಯನ ಪ್ರದೇಶಗಳಲ್ಲಿ ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಕೆಆರ್‌ಎಸ್ ಅಣೆಕಟ್ಟೆಗೆ ಒಳ ಹರಿವಿನ ನೀರಿನ ಪ್ರಮಾಣ ಹೆಚ್ಚಳವಾಗಿದೆ.

ಕೊಡಗು ಸೇರಿದಂತೆ ಕೆಆರ್‌ಎಸ್ ಜಲಾಶಯ ವ್ಯಾಪ್ತಿಗೆ ಬರುವ ಹಲವು ಪ್ರದೇಶಗಳಲ್ಲಿ ಕಳೆದ ಒಂದು ವಾರಗಳಿಂದ ಆಗಾಗ್ಗೆ ಸುರಿಯುತ್ತಿದೆ. ಮಳೆಯಿಂದಾಗಿ ಅಣೆಕಟ್ಟೆಗೆ ನೀರಿನ ಹರಿವು ಹೆಚ್ಚಳವಾಗಿರುವುದು ರೈತರಿಗೆ ಸಂತಸ ತಂದಿದೆ.

ಭಾನುವಾರ ಬೆಳಗ್ಗೆ ಜಲಾಶಯಕ್ಕೆ 1 ಸಾವಿರ ಕ್ಯುಸೆಕ್ ನೀರು ಹರಿದು ಬರುತ್ತಿತ್ತು. ಕಳೆದ ಗುರುವಾರ ಜಲಾಶಯಕ್ಕೆ 1700 ಕ್ಯುಸೆಕ್ ನೀರು ಹರಿದು ಬರುತ್ತಿತ್ತು. ಮಳೆ ಪ್ರಮಾಣ ಇಳಿಕೆಯಾದ ಹಿನ್ನೆಲೆಯಲ್ಲಿ ಅಣೆಕಟ್ಟೆಗೆ ಒಳ ಹರಿವು ಕಡಿಮೆಯಾಗುತ್ತಿದೆ.

ವಾರದ ಹಿಂದೆ ಜಲಾಶಯದ ನೀರಿನ ಮಟ್ಟ 79.80 ಅಡಿಗೆ ಕುಸಿದಿತ್ತು. ಒಂದು ವಾರದಿಂದ ಮಳೆ ಸುರಿಯುತ್ತಿರುವುದರಿಂದ ಹೆಚ್ಚಿನ ನೀರು ಹರಿದು ಬರುತ್ತಿರುವುದರಿಂದ ಈಗ ಮತ್ತೆ ಅಣೆಕಟ್ಟೆ 80 ಅಡಿಗೆ ದಾಟಿದೆ. ಮೇ ತಿಂಗಳಲ್ಲಿ ಮಳೆ ಬೀಳದಿದ್ದರೆ ಕೆಆರ್‌ಎಸ್ ಅಣೆಕಟ್ಟೆಯಲ್ಲಿ ನೀರಿನ ಪ್ರಮಾಣ ಮತ್ತಷ್ಟು ಕುಸಿದು ಕುಡಿಯುವ ನೀರಿಗೂ ತೊಂದರೆ ಎದುರಾಗುವ ಸಂಭವವಿತ್ತು.

ಈಗ ಮಳೆ ಸುರಿಯುತ್ತಿರುವುದರಿಂದ ಜಲಾಶಯಕ್ಕೆ ಹೆಚ್ಚಿನ ನೀರು ಹರಿದು ಬರುತ್ತಿದ್ದು, ಮುಂದಿನ ದಿನಗಳಲ್ಲಿ ಹೆಚ್ಚಿನ ಮಳೆ ಸುರಿದರೆ ಜಲಾಶಯಕ್ಕೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಬರುವ ಸಾಧ್ಯತೆ ಇದೆ.

124 ಅಡಿ ಗರಿಷ್ಠ ಮಟ್ಟದ ಜಲಾಶಯದಲ್ಲಿ 80.52 ಅಡಿ ನೀರಿದೆ. 1 ಸಾವಿರ ಕ್ಯುಸೆಕ್ ನೀರು ಅಣೆಕಟ್ಟೆಗೆ ಹರಿದು ಬರುತ್ತಿದೆ. ಕುಡಿಯುವ ನೀರಿಗಾಗಿ ಜಲಾಶಯದಿಂದ 267 ಕ್ಯುಸೆಕ್ ನೀರನ್ನು ಹೊರ ಬಿಡಲಾಗುತ್ತಿದೆ. ಸದ್ಯ ಜಲಾಶಯದಲ್ಲಿ 11.017 ಟಿಎಂಸಿ ನೀರು ಸಂಗ್ರಹವಾಗಿದೆ.

ಮಂಡ್ಯ ಜಿಲ್ಲಾದ್ಯಂತ ಹಲವೆಡೆ ಸಾಧಾರಣ ಮಳೆ

ಮಂಡ್ಯ ಜಿಲ್ಲಾದ್ಯಂತ ಭಾನುವಾರ ಹಲವೆಡೆ ಮಳೆ ಸುರಿದು ವಾತಾವರಣವನ್ನು ಇನ್ನಷ್ಟು ತಂಪಾಗಿಸಿತು.

ಕಳೆದ ಹಲವು ದಿನಗಳಿಂದ ಜಿಲ್ಲಾದ್ಯಂತ ಹಲವು ಭಾಗಗಳಲ್ಲಿ ಮಳೆ ಸುರಿಯುತ್ತಿದೆ. ಅದರಂತೆ ಮಂಡ್ಯ, ಮಳವಳ್ಳಿ, ಶ್ರೀರಂಗಪಟ್ಟಣ ಸೇರಿದಂತೆ ವಿವಿಧ ತಾಲೂಕುಗಳಲ್ಲಿ ಸಾಧಾರಣ ಮಳೆಯಾದ ವರದಿಯಾಗಿದೆ.

ಮಂಡ್ಯ ನಗರದಲ್ಲಿ ಕಳೆದ ಮೂರು ದಿನಗಳಿಂದ ಆಗಾಗ್ಗೆ ಬಿಡುವು ನೀಡಿ ತುಂತುರು, ಜೋರು ಮಳೆ ಸುರಿಯುತ್ತಿದೆ. ಶನಿವಾರ ಸಂಜೆ ಜೋರಾಗಿ ಸುರಿದಿದ್ದ ಮಳೆ ರಾತ್ರಿವರೆಗೂ ತುಂತುರು ಮಳೆಯಾಗುತ್ತಿತ್ತು.

ಭಾನುವಾರವೂ ಕೂಡ ಮಧ್ಯಾಹ್ನದವರೆಗೆ ಬಿಸಿಲಿನ ವಾತಾವರಣವಿತ್ತು. ಉಷ್ಣಾಂಶವೂ ಏರಿಕೆಯಾಗಿತ್ತು. ಮಧ್ಯಾಹ್ನದ ನಂತರ ತುಂತುರು ಮಳೆಯಾಗಿ ವಾತಾವರಣವನ್ನು ತಂಪಾಗಿಸಿತು.

ಕೆಆರ್ ಎಸ್ ನೀರಿನ ಮಟ್ಟ

ಗರಿಷ್ಠ ಮಟ್ಟ - 124.80 ಅಡಿ

ಇಂದಿನ ಮಟ್ಟ – 80.52 ಅಡಿ

ಒಳ ಹರಿವು – 1000 ಕ್ಯುಸೆಕ್

ಹೊರ ಹರಿವು –269 ಕ್ಯುಸೆಕ್

ನೀರಿನ ಸಂಗ್ರಹ – 11.017 ಟಿಎಂಸಿ