ಈರುಳ್ಳಿ ಆವಕ ಹೆಚ್ಚಳ, ಸಗಟು ಬೆಲೆಯಲ್ಲಿ ಕೊಂಚ ಏರಿಕೆ

| Published : Nov 19 2023, 01:30 AM IST

ಸಾರಾಂಶ

ರಾಜ್ಯದಲ್ಲಿಯೇ ಅತಿ ಹೆಚ್ಚು ಈರುಳ್ಳಿ ಬೆಳೆಯುವ ಗದಗ ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನ ಮಳೆ ಕೊರತೆಯಿಂದಾಗಿ ಈರುಳ್ಳಿ ಸಂಪೂರ್ಣ ಹಾಳಾಗಿದ್ದು, ಉಳಿದಿರುವ ಅಲ್ಪ ಸ್ವಲ್ಪ ಈರುಳ್ಳಿ ಮಾರಾಟಕ್ಕೆ ಶನಿವಾರ ಜಿಲ್ಲೆಯ ರೈತರು ಗದಗ ಎಪಿಎಂಸಿ ಮಾರುಕಟ್ಟೆಗೆ ತಂದಿದ್ದು, ಬೆಲೆಯಲ್ಲಿ ಕೊಂಚ ಏರಿಕೆಯಾಗಿದ್ದು ಕಂಡು ಬಂದಿತು.

ಗದಗ: ರಾಜ್ಯದಲ್ಲಿಯೇ ಅತಿ ಹೆಚ್ಚು ಈರುಳ್ಳಿ ಬೆಳೆಯುವ ಗದಗ ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನ ಮಳೆ ಕೊರತೆಯಿಂದಾಗಿ ಈರುಳ್ಳಿ ಸಂಪೂರ್ಣ ಹಾಳಾಗಿದ್ದು, ಉಳಿದಿರುವ ಅಲ್ಪ ಸ್ವಲ್ಪ ಈರುಳ್ಳಿ ಮಾರಾಟಕ್ಕೆ ಶನಿವಾರ ಜಿಲ್ಲೆಯ ರೈತರು ಗದಗ ಎಪಿಎಂಸಿ ಮಾರುಕಟ್ಟೆಗೆ ತಂದಿದ್ದು, ಬೆಲೆಯಲ್ಲಿ ಕೊಂಚ ಏರಿಕೆಯಾಗಿದ್ದು ಕಂಡು ಬಂದಿತು.

ಜಿಲ್ಲೆಯ ರೈತರಿಗೆ ಈರುಳ್ಳಿ ಬೆಲೆ ಕುಸಿತದ ಸಂಕಟ ಕಾಡುತ್ತಿದ್ದು, ಸದ್ಯಬೆಲೆಯಲ್ಲಿ ಏರಿಕೆ ಕಂಡು ಬಂದಿದ್ದರಿಂದ ದಿನನಿತ್ಯಕ್ಕಿಂತ ಶನಿವಾರ ಎಪಿಎಂಸಿ ಮಾರುಕಟ್ಟೆಗೆ ಈರುಳ್ಳಿ ಆವಕ ಹೆಚ್ಚಾಗಿ, ಉತ್ತಮ ಈರುಳ್ಳಿಗೆ ಪ್ರತಿ ಕ್ವಿಂಟಲ್‌ಗೆ ಗರಿಷ್ಠ ೪೫೦೦ರ ವರೆಗೆ ಮಾರಾಟವಾಗಿದೆ.

ಕಳೆದ ವಾರ ಗದಗ ಎಪಿಎಂಸಿ ಮಾರುಕಟ್ಟೆಯಲ್ಲಿ ಸಗಟು ಈರುಳ್ಳಿ ಪ್ರತಿ ಕ್ವಿಂಟಲ್‌ಗೆ ಗರಿಷ್ಠ ೪ ಸಾವಿರದವರೆಗೆ ಮಾರಾಟವಾಗಿದ್ದರಿಂದ ಉತ್ತಮ ಬೆಲೆ ನಿರೀಕ್ಷೆಯೊಂದಿಗೆ ಮಾರುಕಟ್ಟೆಗೆ ಬಂದ ರೈತರಿಗೆ ನಿರಾಸೆಯಾಗಿತ್ತು ಸದ್ಯಬೆಲೆಯಲ್ಲಿ ಏರಿಕೆಯಾಗಿದ್ದು, ರೈತರಿಗೆ ಕೊಂಚ ನೆಮ್ಮದಿ ನೀಡಿದೆ.

ಕೇವಲ ೨೭ ಸಾವಿರ ಹೆ ಬಿತ್ತನೆ: ಗದಗ ಜಿಲ್ಲೆ ಈರುಳ್ಳಿ ಬೆಳೆಯಲು ಹೇಳಿ ಮಾಡಿಸಿದಂತ ಕಪ್ಪು ಮಣ್ಣಿನ ಭೂಮಿಯನ್ನು ಹೊಂದಿದ್ದು, ಪ್ರತಿ ವರ್ಷ ೨ ಲಕ್ಷ ಹೆಕ್ಟೇರಿಗೂ ಅಧಿಕ ಪ್ರದೇಶದಲ್ಲಿ ಈರುಳ್ಳಿ ಬಿತ್ತನೆ ಆಗುತ್ತಿತ್ತು. ಆದರೆ ಪ್ರಸಕ್ತ ಸಾಲಿನ ಮುಂಗಾರು ಕೊರತೆಯಿಂದಾಗಿ ಜಿಲ್ಲೆಯಲ್ಲಿ ಕೇವಲ ೨೭ ಸಾವಿರ ಹೆ ಪ್ರದೇಶದಲ್ಲಿ ಮಾತ್ರ ಈರುಳ್ಳಿ ಬಿತ್ತನೆಯಾಗಿದೆ.

ಸದ್ಯ ಕಟಾವಿಗೆ ಬಂದಿರುವ ಅಲ್ಪ ಈರುಳ್ಳಿಯನ್ನು ರೈತರು ಮಾರಾಟ ಮಾಡಲು ತಂದಿದ್ದಾರೆ.