ಪತ್ರಕರ್ತರು ಎಂದು ಹೇಳಿಕೊಂಡು ಅಡ್ಡದಾರಿಯಲ್ಲಿ ಬರುವವರ ಸಂಖ್ಯೆ ಹೆಚ್ಚುತ್ತಿದೆ. ಇಂತಹ ದುರುದ್ದೇಶಿತ ನಕಲಿ ಪತ್ರಕರ್ತರನ್ನು ಹೊರಹಾಕಿ, ಸಂಘವನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಅಗತ್ಯವಾಗಿದೆ.

ಕನ್ನಡಪ್ರಭ ವಾರ್ತೆ ಶಿರಸಿ

ಪತ್ರಕರ್ತರು ಎಂದು ಹೇಳಿಕೊಂಡು ಅಡ್ಡದಾರಿಯಲ್ಲಿ ಬರುವವರ ಸಂಖ್ಯೆ ಹೆಚ್ಚುತ್ತಿದೆ. ಇಂತಹ ದುರುದ್ದೇಶಿತ ನಕಲಿ ಪತ್ರಕರ್ತರನ್ನು ಹೊರಹಾಕಿ, ಸಂಘವನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಅಗತ್ಯವಾಗಿದೆ ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಹೇಳಿದರು.

ನಗರದ ಟಿಆರ್‌ಸಿ ಸಭಾಭವನದಲ್ಲಿ ನಡೆದ ಉತ್ತರ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಡಿ.ವಿ. ಗುಂಡಪ್ಪ ಸ್ಥಾಪಿಸಿದ ಈ ಸಂಘವು ಪ್ರಸ್ತುತ 10 ಸಾವಿರಕ್ಕೂ ಅಧಿಕ ಸದಸ್ಯರನ್ನು ಹೊಂದಿರುವ ಬೃಹತ್ ಸಂಘವಾಗಿ ಬೆಳೆದಿದೆ. ಸೋಶಿಯಲ್ ಮೀಡಿಯಾ ಯುಗದಲ್ಲಿ ನಂಬಿಕೆ ಕುಸಿಯುತ್ತಿರುವಾಗ, ಸತ್ಯವನ್ನು ಆರಿಸಿ ಜನರಿಗೆ ತಲುಪಿಸುವವನೇ ನಿಜವಾದ ಪತ್ರಕರ್ತ. ಪತ್ರಕರ್ತರು ಎಂದಿಗೂ ಓದುಗರ ವಿಶ್ವಾಸ ಕಳೆದುಕೊಳ್ಳಬಾರದು ಎಂದರು.

ಬಸ್ ಪಾಸ್ ವಿತರಣೆಯ ನಿಯಮಗಳನ್ನು ಸಡಿಲಗೊಳಿಸಲು ವಾರ್ತಾ ಇಲಾಖೆಯೊಂದಿಗೆ ಮಾತುಕತೆ ನಡೆಸಲಾಗಿದೆ. ಶೀಘ್ರದಲ್ಲೇ ಪತ್ರಕರ್ತರಿಗೆ ಮುಖ್ಯಮಂತ್ರಿ ಮಾಧ್ಯಮ ಸಂಜೀವಿನಿ ಆರೋಗ್ಯ ಯೋಜನೆ ಜಾರಿಯಾಗಲಿದೆ ಎಂದು ಭರವಸೆ ನೀಡಿದರು.

ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ.ಪಿ. ಲೋಕೇಶ್ ಮಾತನಾಡಿ, ಶತಮಾನದ ಇತಿಹಾಸವಿರುವ ನಮ್ಮ ಸಂಘವು ಎಂದಿಗೂ ರಾಜಕೀಯಕ್ಕೆ ಒಳಗಾಗಿಲ್ಲ. ಪತ್ರಕರ್ತರ ಕ್ಷೇಮ ನಿಧಿಗಾಗಿ ₹1 ಕೋಟಿ ಮೀಸಲಿಡಲಾಗಿದ್ದು, ಗ್ರಾಮೀಣ ಪತ್ರಕರ್ತರಿಗೂ ಸೌಲಭ್ಯ ವಿಸ್ತರಿಸಲು ಸರ್ಕಾರಕ್ಕೆ ಒತ್ತಾಯಿಸಲಾಗಿದೆ ಎಂದರು.

ನಿಕಟಪೂರ್ವ ಜಿಲ್ಲಾಧ್ಯಕ್ಷ ಸುಬ್ರಾಯ ಭಟ್ ಬಕ್ಕಳ ಮಾತನಾಡಿ, ಕಳೆದ 30 ವರ್ಷಗಳ ಅವಧಿಯಲ್ಲಿ ಎಲ್ಲರ ಸಹಕಾರದಿಂದ ಸಂಘವು ಭದ್ರವಾಗಿ ಬೆಳೆದಿದೆ. ಇಂದು ಜಿಲ್ಲಾ ಸಂಘವು ₹2 ಕೋಟಿ ಮೀರಿದ ಆಸ್ತಿ ಮೌಲ್ಯ ಹಾಗೂ ಸ್ವಂತ ಭವನ ಹೊಂದಿರುವುದು ಹೆಮ್ಮೆಯ ವಿಷಯ ಎಂದರು.

ಅಧ್ಯಕ್ಷತೆ ವಹಿಸಿದ್ದ ನೂತನ ಜಿಲ್ಲಾಧ್ಯಕ್ಷ ನರಸಿಂಹ ಅಡಿ ಮಾತನಾಡಿ, ಸಂಘವನ್ನು ವ್ಯವಸ್ಥಿತವಾಗಿ ಮುನ್ನಡೆಸಲು ಹಾಗೂ ಪತ್ರಕರ್ತರು-ಸರ್ಕಾರ ಮತ್ತು ಸಮಾಜದ ನಡುವೆ ಸೇತುವೆಯಾಗಿ ಕೆಲಸ ಮಾಡಲು ಎಲ್ಲರ ಸಹಕಾರ ಅಗತ್ಯ ಎಂದರು.

ಸಾಮಾಜಿಕ ಕಾರ್ಯಕರ್ತ ಅನಂತಮೂರ್ತಿ ಹೆಗಡೆ, ಉದ್ಯಮಿ ಉಪೇಂದ್ರ ಪೈ ಮಾತನಾಡಿದರು.

ಜಿ.ವಿ. ಲೋಕೇಶ್ ನೂತನ ಪದಾಧಿಕಾರಿಗಳಿಗೆ ಪ್ರಮಾಣವಚನ ಬೋಧಿಸಿದರು. ಇದೇ ಸಂದರ್ಭ ಶಿವಾನಂದ ತಗಡೂರು, ಬಿ.ಪಿ. ಲೋಕೇಶ್, ಸುಬ್ರಾಯ ಭಟ್ ಬಕ್ಕಳ ಹಾಗೂ ಸಂಘದ ನೂತನ ಪದಾಧಿಕಾರಿಗಳು, ಕಾರ್ಯಕಾರಣಿ ಸದಸ್ಯರು ಮತ್ತು ಜಿಲ್ಲೆಯ ವಿವಿಧ ತಾಲೂಕಾ ಅಧ್ಯಕ್ಷರನ್ನು ಗೌರವಿಸಲಾಯಿತು. ಸಂಘದ ಉಪಾಧ್ಯಕ್ಷ ಬಸವರಾಜ್ ಪಾಟೀಲ್ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಪತ್ರಕರ್ತರಾದ ಪ್ರವೀಣ ಹೆಗಡೆ, ಪತ್ರಕರ್ತ ಶ್ರೀಧರ ಮಂಗಳೂರು ಇದ್ದರು. ಗಿರಿಧರ ಕಬ್ನಳ್ಳಿ ನಿರೂಪಿಸಿದರು. ಸಂದೇಶ ಭಟ್ ಬೆಳಖಂಡ ವಂದಿಸಿದರು.‌