ಸಾಹಿತ್ಯ ಅಧ್ಯಯನ ಮೂಲಕ ಜ್ಞಾನ ವೃದ್ಧಿಸಿಕೊಳ್ಳಿ

| Published : May 28 2025, 12:05 AM IST

ಸಾರಾಂಶ

ಕಾವ್ಯಕ್ಕೆ ವ್ಯಕ್ತಿಯ ಮನಸ್ಸನ್ನು ಸುಸಂಸ್ಕೃತಗೊಳಿಸುವ ಶಕ್ತಿಯಿದೆ. ಅದರಲ್ಲಿಯೂ ತಾಯಿಭಾಷೆಯ ಮೂಲಕ ಸಾಹಿತ್ಯವನ್ನು ಕಲಿತಲ್ಲಿ ಪ್ರಜ್ಞೆ ಮತ್ತಷ್ಟು ವಿಸ್ತಾರಗೊಳ್ಳುತ್ತದೆ. ಈ ಹಿನ್ನೆಲೆಯಲ್ಲಿ ಸಾಹಿತ್ಯಾಸಕ್ತಿಯನ್ನು ವಿದ್ಯಾರ್ಥಿ ಯುವಜನರು ಬೆಳೆಸಿಕೊಳ್ಳಬೇಕು. ಪುಸ್ತಕಗಳನ್ನು ಓದುವ, ಅಧ್ಯಯನ ಮಾಡುವ ಆ ಮೂಲಕ ಜ್ಞಾನಪರಿಧಿಯನ್ನು ಹಿಗ್ಗಿಸಿಕೊಳ್ಳಬಹುದು

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಕನ್ನಡವೆಂಬುದು ಕರ್ನಾಟಕದ ತಾಯಿ ಭಾಷೆ. ಕನ್ನಡ ಭಾಷೆಯನ್ನು ಉಳಿಸಿಕೊಂಡು ಹೋಗಬೇಕಾದ ಅನಿವಾರ್ಯತೆ ಎಲ್ಲಾ ಕನ್ನಡಿಗರ ಮೇಲಿದೆ ಎಂದು ಆದಿಚುಂಚನಗಿರಿ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥ ಸ್ವಾಮೀಜಿ ತಿಳಿಸಿದರು.

ನಗರದ ಕನ್ನಡಭವನದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿ, ಬುದ್ದಿವಂತರು, ವಿಚಾರವಂತರು ತಮ್ಮ ಸಮಯವನ್ನು ಕಾವ್ಯ, ಶಾಸ್ತ್ರಗಳನ್ನು ಓದಿಕೊಂಡು ಇನ್ನೊಬ್ಬರಿಗೆ ತೊಂದರೆಯಾಗದಂತೆ ನಡೆದುಕೊಳ್ಳುವ ಮೂಲಕ ಕಳೆಯುತ್ತಾರೆ ಎಂದರು.

ಸಾಹಿತ್ಯಾಸಕ್ತಿ ಬೆಳೆಸಿಕೊಳ್ಳಿ

ಕಾವ್ಯಕ್ಕೆ ವ್ಯಕ್ತಿಯ ಮನಸ್ಸನ್ನು ಸುಸಂಸ್ಕೃತಗೊಳಿಸುವ ಶಕ್ತಿಯಿದೆ. ಅದರಲ್ಲಿಯೂ ತಾಯಿಭಾಷೆಯ ಮೂಲಕ ಸಾಹಿತ್ಯವನ್ನು ಕಲಿತಲ್ಲಿ ಪ್ರಜ್ಞೆ ಮತ್ತಷ್ಟು ವಿಸ್ತಾರಗೊಳ್ಳುತ್ತದೆ. ಈ ಹಿನ್ನೆಲೆಯಲ್ಲಿ ಸಾಹಿತ್ಯಾಸಕ್ತಿಯನ್ನು ವಿದ್ಯಾರ್ಥಿ ಯುವಜನರು ಬೆಳೆಸಿಕೊಳ್ಳಬೇಕು. ಪುಸ್ತಕಗಳನ್ನು ಓದುವ, ಅಧ್ಯಯನ ಮಾಡುವ ಆ ಮೂಲಕ ಜ್ಞಾನಪರಿಧಿಯನ್ನು ಹಿಗ್ಗಿಸಿಕೊಳ್ಳುವ ಕೆಲಸವನ್ನು ಮಾಡಬೇಕು ಎಂದು ಸಲಹೆ ಮಾಡಿದರು.

ಕೇಂದ್ರ ಮಾಜಿ ಸಚಿವ ಡಾ.ಎಂ.ವೀರಪ್ಪಮೊಯ್ಲಿ ಮಾತನಾಡಿ, ಕನ್ನಡ ಭಾಷೆ ಮತ್ತು ಸಾಹಿತ್ಯದ ವಿಚಾರದಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆ ತನ್ನದೇ ಆದ ವಿಶಿಷ್ಟತೆಯನ್ನು ಹೊಂದಿದೆ. ಅನೇಕ ಕವಿಗಳು ಈ ಜಿಲ್ಲೆಯಲ್ಲಿ ಜನಿಸಿದ್ದಾರೆ. ಸಾಹಿತ್ಯ ಸಮ್ಮೇಳನಗಳು ಸಮಕಾಲೀನ ಸಮಸ್ಯೆಗಳ ಪರಿಹಾರಕ್ಕೆ ಮುಖಾಮುಖಿಯಾಗಬೇಕು. ಸಮ್ಮೇಳನಗಳು ಕೇವಲ ಯಾಂತ್ರಿಕ ಕಾರ್ಯಕ್ರಮಗಳಾಗದೆ ಸಮಾಜದ ಮೇಲೆ ಪರಿಣಾಮ ಬೀರುವಂತಹ ಕಾರ್ಯಕ್ರಮಗಳಾಗಬೇಕು ಎಂದರು. ಕನ್ನಡಾಭಿಮಾನ ಬೆಳೆಸಿಕೊಳ್ಳಿ

ಶಾಸಕ ಪ್ರದೀಪ್ ಈಶ್ವರ್ ಮಾತನಾಡಿ, ಎರಡು ಸಾವಿರ ವರ್ಷಗಳಿಗೂ ಹೆಚ್ಚಿನ ಇತಿಹಾಸ ಹೊಂದಿರುವ ಕನ್ನಡ ಭಾಷೆ ಮತ್ತು ಸಾಹಿತ್ಯ ಮುಂದಿನ ಪೀಳಿಗೆಗೂ ತಲುಪಬೇಕು. ಪ್ರತಿಯೊಬ್ಬರೂ ಕನ್ನಡಾಭಿಮಾನ ಬೆಳಸಿಕೊಂಡು, ಇತರರಿಗೂ ಕನ್ನಡ ಕಲಿಸಿದಲ್ಲಿ ಕನ್ನಡ ಮತ್ತಷ್ಟು ಶ್ರೀಮಂತವಾಗುತ್ತದೆಕವಿಗಳು ಶ್ರೀಮಂತರಾಗುತ್ತಾರೆ. ಪ್ರತಿ ವಿದ್ಯಾರ್ಥಿಯೂ ಸರಸ್ವತಿ ವುಲಿಸಿಕೊಂಡಲ್ಲಿ ಲಕ್ಷ್ಮಿ ತಾನಾಗೆ ಒಲಿಯುತ್ತಾಳೆ. ತಂದೆ ತಾಯಿಗೆ ದೇವಾಲಯ ಕಟ್ಟದಿದ್ದರೂ ಪರವಾಗಿಲ್ಲಾ. ದೇವಾಲಯದ ಮುಂದೆ ಭಿಕ್ಷೆ ಬೇಡುವಂತೆ ಮಾಡಬೇಡಿ ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು ಕನ್ನಡ ಅನ್ನ ಭಾಷೆಯಾಗಬೇಕು

ಜಿಲ್ಲಾ ಸಾಹಿತ್ಯ ಸಮ್ಮೇಳನಾಧ್ಯಕ್ಷ ಗೋಪಾಲಗೌಡ ಕಲ್ವಮಂಜಲಿ ಮಾತನಾಡಿ, ನಮ್ಮ ನಾಡಭಾಷೆ ಕನ್ನಡ ಅನ್ನದ ಭಾಷೆಯಾಗಿ ಉಳಿದಿಲ್ಲ ಎಂಬುದು ಕಟುಸತ್ಯ. ಸಾಮಾನ್ಯ ಪದವಿಗಳಾದ ಬಿಎ, ಬಿಎಸ್ಸಿ, ಪದವೀಧರರು ಉದ್ಯೋಗಗಳಿಗೆ ಸರ್ಕಾರವನ್ನೇ ಆಶ್ರಯಿಸಬೇಕಾಗಿದೆ. ಮೊನ್ನೆಮೊನ್ನೆ ದಿನಪತ್ರಿಕೆಗಳಲ್ಲಿ ಪ್ರಕಟವಾದ ಸುದ್ದಿಯಂತೆ ರಾಜ್ಯದಲ್ಲಿ ಈಗ ಮಂಜೂರಾಗಿರುವ 7.72 ಲಕ್ಷ ಹುದ್ದೆಗಳು ಪೈಕಿ 2.76 ಲಕ್ಷ ವಿವಿಧ ಇಲಾಖೆಗಳ ಹುದ್ದೆಗಳು ಖಾಲಿ ಇದ್ದಾವಂತೆ. ಘನಸರ್ಕಾರ ಈ ಮಂಜೂರಾಗಿರುವ ಖಾಲಿ ಸ್ಥಾನಗಳನ್ನು ತುಂಬಿದರೆ 2.76ಲಕ್ಷ ಯುವಕರು ತಮ್ಮ ಜೀವನ ದಾರಿಯನ್ನು ಕಂಡುಕೊಳ್ಳಬಹುದಲ್ಲವೇ ಎಂದರು.

ಸರ್ಕಾರ ಉದ್ಯೋಗ ನೀಡಿದರೆ ಇಂದಿನ ಯುವಪೀಳಿಗೆಗೆ ಕನ್ನಡದ ಮೇಲಿನ ಪ್ರೀತಿ ಇಮ್ಮಡಿಗೊಳ್ಳಲು ಸ್ಫೂರ್ತಿಯಾಗುತ್ತದೆ. ಆದಕಾರಣ ಘನಸರ್ಕಾರ ಈ ಬಗ್ಗೆ ಆದ್ಯತೆಯ ಮೇರೆಗೆ ಕ್ರಮಕೈಗೊಂಡು ಹುದ್ದೆಗಳನ್ನು ತ್ವರಿತವಾಗಿ ತುಂಬುವುದು ಬಹಳವೇ ಮುಖ್ಯವಾಗಿರುತ್ತದೆ. ಇನ್ನೂ ಸೋಜಿಗವೆಂದರೆ ಸಿಟಿಗಳ ಪಂಚತಾರಾ ಹೋಟೆಲುಗಳಲ್ಲಿ ಬಾಗಿಲು ಕಾಯುವ ಸೆಕ್ಯೂರಿಟಿ ಕೆಲಸ ಸಿಗಬೇಕಾದರೂ ಕೂಡ ಅವರಿಗೆ ಇಂಗ್ಲಿಷ್ ಗೊತ್ತಿರಲೇಬೇಕು. ಇಂಥ ಕ್ಲಿಷ್ಟ ಪರಿಸ್ಥಿತಿ ಇರಬೇಕಾದರೆ ಕನ್ನಡ ಭಾಷೆಯನ್ನು ಯಾರು ಆಶ್ರಯಿಸುತ್ತಾರೆ ಎಂದು ಪ್ರಶ್ನಿಸಿದರು. ಸಮ್ಮೇಳನಾಧ್ಯಕ್ಷರ ಮೆರವಣಿಗೆ

ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದ ಮುಂಭಾಗದಿಂದ ಸಾಹಿತ್ಯ ಸಮ್ಮೇಳನಾಧ್ಯಕ್ಷರ ಮೆರವಣಿಗೆಯನ್ನು ವಿವಿಧ ಜಾನಪದ ಮತ್ತು ಸಾಂಸ್ಕೃತಿಕ ಕಲಾತಂಡಗಳೊಂದಿಗೆ ಮಾಡಲಾಯಿತು. ಮೆರವಣಿಗೆಯಲ್ಲಿ ವಿವಿಧ ಕನ್ನಡಪರ ಸಂಘಟನೆಗಳ ಮುಖಂಡರು, ಪದಾಧಿಕಾರಿಗಳು, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳು, ಆಜೀವ ಸದಸ್ಯರು, ವಿವಿಧ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು, ಕನ್ನಡಾಭಿಮಾನಿಗಳು, ಸಾಹಿತ್ಯಾಸಕ್ತರು ಭಾಗವಹಿಸಿದ್ದರು.

ನಗರದಲ್ಲಿ ಎಲ್ಲೆಲ್ಲೂ ಕನ್ನಡ ಬಾವುಟಗಳು ರಾರಾಜಿಸುತ್ತಿದ್ದವು. ಸಾಹಿತ್ಯ ಸಮ್ಮೇಳನ ಮತ್ತು ಕನ್ನಡ ಭವನ ಲೋಕಾರ್ಪಣೆ ಹಿನ್ನೆಲೆಯಲ್ಲಿ ಜಿಲ್ಲಾ ಕೇಂದ್ರದ ಎಲ್ಲೆಡೆ ಕನ್ನಡ ಹಬ್ಬದ ವಾತಾವರಣ ನಿರ್ಮಾಣವಾಗಿ ಗಮನ ಸೆಳೆಯಿತು.