ಸಾರಾಂಶ
ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಭತ್ತದ ಬೆಳೆ ಉತ್ಪಾದಕತೆ ಜಿಲ್ಲೆಯ ಸರಾಸರಿಗಿಂತ ಕಡಿಮೆ ಇದ್ದು, ತಾಲೂಕಿನ ಎಲ್ಲಾ ಬಿತ್ತನೆ ಬೀಜ ಹಾಗೂ ರಸಗೊಬ್ಬರ ಮಾರಾಟಗಾರರು ಭತ್ತದ ಬೆಳೆ ಉತ್ಪಾದಕತೆ ಹೆಚ್ಚಿಸಬೇಕು ಎಂದು ಪಾಂಡವಪುರ ಉಪ ವಿಭಾಗದ ಕೃಷಿ ನಿರ್ದೇಶಕಿ ಮಮತ ಗವೀಗೌಡ ಕರೆ ನೀಡಿದರು.ಪಟ್ಟಣದ ಸಹಾಯಕ ಕೃಷಿ ನಿರ್ದೇಶಕರ ಕಚೇರಿ ಆವರಣದಲ್ಲಿ ತಾಲೂಕಿನ ಎಲ್ಲಾ ಅಧಿಕೃತ ಬಿತ್ತನೆ ಬೀಜ, ರಸಗೊಬ್ಬರ ಮತ್ತು ಕೀಟನಾಶಕ ಮಾರಾಟಗಾರರಿಗೆ ಮುಂಗಾರು ಹಂಗಾಮಿನ ಸಿದ್ಧತೆ ಬಗ್ಗೆ ಚರ್ಚಿಸಲು ಕರೆಯಲಾಗಿದ್ದ ಸಭೆಯಲ್ಲಿ ಮಾತನಾಡಿದರು.
ಮುಂಗಾರು ಆರಂಭವಾಗಿ ತಾಲೂಕಿನಲ್ಲಿ ಕೃಷಿ ಚಟುವಟಿಕೆಗಳು ಚುರುಕುಗೊಂಡಿವೆ. ಈ ಬಾರಿ ಉತ್ತಮ ಮಳೆಯಾಗುವ ನಿರೀಕ್ಷೆಯಿದ್ದು ಎಲ್ಲ ಮಾರಾಟಗಾರರು ಉತ್ತಮ ತಳಿಯ ಬಿತ್ತನೆ ಬೀಜಗಳನ್ನು ರೈತರಿಗೆ ಸರಬರಾಜು ಮಾಡಬೇಕೆಂದು ಸೂಚಿಸಿದರು.ಈಗಾಗಲೇ ಖಾಸಗಿ ಮತ್ತು ಸಹಕಾರ ಸಂಘಗಳಲ್ಲಿ 1950 ಮೆಟ್ರಿಕ್ ಟನ್ ನಷ್ಟು ಯೂರಿಯಾ ರಸಗೊಬ್ಬರವಿದೆ. ರಸಗೊಬ್ಬರಕ್ಕೆ ಕೊರತೆಯಾಗದಂತೆ ಕ್ರಮ ವಹಿಸಬೇಕು. ಕೃತಕ ಅಭಾವ ಸೃಷ್ಟಿಸಿದವರ ವಿರುದ್ಧ ರಸಗೊಬ್ಬರ ನಿಯಂತ್ರಣಾ ಆದೇಶದ 1985 ರ ಅನ್ವಯ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದರು.
ಎಲ್ಲ ಮಾರಾಟಗಾರರು ರಸಗೊಬ್ಬರಗಳನ್ನು ಪಿಓಎಸ್ ಯಂತ್ರದ ಮೂಲಕ ವಿತರಣೆ ಮಾಡಬೇಕು. ರಸಗೊಬ್ಬರಗಳ ದಾಸ್ತಾನು ಲಭ್ಯತೆ ಮತ್ತು ದರಗಳನ್ನು ಮಾರಾಟ ಮಳಿಗೆಯ ಸೂಚನಾ ಫಲಕದಲ್ಲಿ ಕಡ್ಡಾಯವಾಗಿ ಪ್ರದರ್ಶಿಸಬೇಕು ಎಂದು ಸೂಚಿಸಿದರು.ರೈತ ಸಂಪರ್ಕ ಕೇಂದ್ರಗಳಲ್ಲಿ ಅಲಸಂದೆ, ಉದ್ದು, ತೊಗರಿ, ಮುಸುಕಿನ ಜೋಳದ ಬಿತ್ತನೆ ಬೀಜಗಳನ್ನು ವಿತರಿಸಲಾಗುತ್ತಿದೆ. ರೈತರು ಸಹಾಯ ಧನದಲ್ಲಿ ಬಿತ್ತನ ಬೀಜಗಳನ್ನು ಪಡೆಯಬಹುದು. ಹಸಿರೆಲೆ ಗೊಬ್ಬರದ ಬಿತ್ತನೆ ಬೀಜಗಳಾದ ಡಯಾಂಚ ಮತ್ತು ಅಪ್ಸೆಣಬು ಬಿತ್ತನೆ ಬೀಜಗಳನ್ನು ಸಹಾಯಧನದಲ್ಲಿ ನೀಡುತ್ತಿದೆ ಎಂದರು.
ತಾಲೂಕು ಸಹಾಯಕ ಕೃಷಿ ನಿರ್ದೇಶಕ ಎಚ್.ಜೆ.ಸಂತೋಷ್ ಕುಮಾರ್ ಮಾತನಾಡಿ, ಎಲ್ಲಾ ಮಾರಾಟಗಾರರು ಎಲ್ಲಾ ಕೃಷಿ ಪರಿಕರಗಳಿಗೆ ಕಡ್ಡಾಯವಾಗಿ ರಸೀದಿ ನೀಡಬೇಕು. ಎಲ್ಲಾ ಮಾರಾಟ ಮಳಿಗೆಗಳಿಗೆ ಭೇಟಿ ನೀಡಿ ಪರಿಶೀಲಿಸಲಾಗುವುದು. ಈ ವೇಳೆ ಲೋಪದೋಷಗಳು ಕಂಡು ಬಂದಲ್ಲಿ ಪರವಾನಗಿ ರದ್ದುಗೊಳಿಸಲು ಮೇಲಾಧಿಕಾರಿಗಳಿಗೆ ಶಿಫಾರಸ್ಸು ಮಾಡಲಾಗುವುದು ಎಂದರು.ಕೃಷಿ ಅಧಿಕಾರಿಗಳಿಗೆ ಕೃಷಿ ಪರಿಕರಗಳ ಗುಣಮಟ್ಟವನ್ನು ಕಾಪಾಡುವ ಸಲುವಾಗಿ ರಸಗೊಬ್ಬರ ಬಿತ್ತನೆ ಬೀಜ ಮತ್ತು ಕೀಟನಾಶಕಗಳ ಮಾದರಿಗಳನ್ನು ತೆಗೆದು ವಿಶ್ಲೇಷಣೆಗೆ ಕಳುಹಿಸಬೇಕೆಂದು ತಾಕೀತು ಮಾಡಿದರು.
ಕಾರ್ಯಕ್ರಮದಲ್ಲಿ ಕೃಷಿ ಇಲಾಖೆ ಎಲ್ಲಾ ಅಧಿಕಾರಿ ಮತ್ತು ಸಿಬ್ಬಂದಿ ವರ್ಗದವರು ಹಾಗೂ ತಾಲೂಕಿನ ಎಲ್ಲಾ ಬಿತ್ತನೆ ಬೀಜ, ರಸಗೊಬ್ಬರ ಮತ್ತು ಕೀಟನಾಶಕ ಮಾರಾಟಗಾರರು ಭಾಗವಹಿಸಿದ್ದರು.