ಹುಬ್ಬಳ್ಳಿಯಲ್ಲಿ ಬಾಲಕಿ ಹತ್ಯೆ ಬೆನ್ನಲ್ಲೇ ಡಂಬಳ ಹೋಬಳಿಯಲ್ಲಿ ವಿವಿಧ ಕಾಮಗಾರಿಗಳಲ್ಲಿ ಪಶ್ಚಿಮ ಬಂಗಾಳ, ಬಿಹಾರ ಕಾರ್ಮಿಕರು ದುಡಿಯುತ್ತಿದ್ದು, ಗ್ರಾಮೀಣರಲ್ಲಿ ಭಯ ಶುರುವಾಗಿದೆ.

ರಿಯಾಜಅಹ್ಮದ ಎಂ. ದೊಡ್ಡಮನಿ

ಕನ್ನಡಪ್ರಭ ವಾರ್ತೆ ಡಂಬಳ

ಹುಬ್ಬಳ್ಳಿಯಲ್ಲಿ ಬಾಲಕಿ ಹತ್ಯೆ ಬೆನ್ನಲ್ಲೇ ಡಂಬಳ ಹೋಬಳಿಯಲ್ಲಿ ವಿವಿಧ ಕಾಮಗಾರಿಗಳಲ್ಲಿ ಪಶ್ಚಿಮ ಬಂಗಾಳ, ಬಿಹಾರ ಕಾರ್ಮಿಕರು ದುಡಿಯುತ್ತಿದ್ದು, ಗ್ರಾಮೀಣರಲ್ಲಿ ಭಯ ಶುರುವಾಗಿದೆ.

ಬಾಲಕಿಯ ಹತ್ಯೆಗೈದು ಪೊಲೀಸ್ ಎನ್ ಕೌಂಟರ್‌ನಲ್ಲಿ ಬಲಿಯಾದದ್ದು ಬಿಹಾರ ಮೂಲದ ಕಾರ್ಮಿಕ ರಿತೇಶಕುಮಾರ್‌ಎನ್ನುವುದು ಈ ಭಯಕ್ಕೆ ಪ್ರಮುಖ ಕಾರಣವಾಗಿದೆ.

ಡಂಬಳ, ಪೇಠಾ ಆಲೂರ, ಮೇವುಂಡಿ, ಹಳ್ಳಿಕೇರಿ, ಹಳ್ಳಿಗುಡಿ ಸೇರಿದಂತೆ ವಿವಿಧ ‌ಗ್ರಾಮಗಳಲ್ಲಿ ಫ್ಯಾನ್ ಮತ್ತು ಫಲವತ್ತಾದ ಸಾವಿರಾರು ಎಕರೆಗಳಲ್ಲಿ ಸೋಲಾರ್‌ ಪ್ಲೇಟ್‌ ಹಾಕುವ ವಿವಿಧ ಕಾಮಗಾರಿಗಳಲ್ಲಿ ನೂರಕ್ಕೂ ಹೆಚ್ಚು ವಿವಿಧ ರಾಜ್ಯದ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ.

ಗ್ರಾಮೀಣ ಭಾಗದಲ್ಲಿ ಕೆಲ18 ವಯಸ್ಸಿಗೂ ಕಡಿಮೆ ವಯಸ್ಸಿನ ಕಾರ್ಮಿಕರು ಇದ್ದು, ಇವರು ಎಲ್ಲೆಂದರಲ್ಲಿ ನಿಂತು ಸಿಗರೇಟು, ಸಾರಾಯಿ ಸೇವನೆಯಂತಹ ದುಶ್ಚಟಗಳಿಂದ ಗ್ರಾಮೀಣ ಯುವಕರ ಮೇಲೆ ತೀವ್ರ ಪರಿಣಾಮ ಬೀರುತ್ತಿದೆ. ವರ್ಷಗಟ್ಟಲೇ ತವರಿನಿಂದ ದೂರ ಇರುವುದರಿಂದ ಇವರ ಮೇಲೆ ಯಾರ ಹಿಡಿತವೂ ಇಲ್ಲದಂತಾಗಿದೆ.

ವಲಸಿಗರ ನಿಯಂತ್ರಿಸಿ?: ಮುಂಡರಗಿ ಸೇರಿದಂತೆ ಡಂಬಳ ಹೋಬಳಿಯ ಗ್ರಾಮೀಣ ಭಾಗದಲ್ಲಿ ಬಿಹಾರ, ಪಶ್ಚಿಮ ಬಂಗಾಳ, ಓಡಿಸಾ, ಕೊಲ್ಕತ್ತಾ ಕಾರ್ಮಿಕರ ದೊಡ್ಡ ದಂಡೇ ಇದೆ. ಬಹುತೇಕ ನಿರ್ಮಾಣ ಕಾಮಗಾರಿಗಳಲ್ಲಿ ವಲಸಿಗರೇ ಇದ್ದಾರೆ. ಇವರ ನಿಯಂತ್ರಣ ಯಾರು ಮಾಡಬೇಕು ಎನ್ನುವುದು ಗ್ರಾಮಸ್ಥರ ಆಗ್ರಹ.

ಡಂಬಳ ಹೋಬಳಿಯ ಗ್ರಾಮೀಣ ಭಾಗದಲ್ಲಿ ಹಿರೋ, ಸುಜಲಾನ, ಐನಾ ಫ್ಯಾನ್‌ ಕಂಪನಿಗಳಲ್ಲಿ, ಸಾವಿರಾರು ಫಲವತ್ತಾದ ಭೂಮಿ ಡಂಬಳ, ಹಿರೇವಡ್ಡಟ್ಟಿ, ಡೋಣಿ ಭಾಗದಲ್ಲಿ ಒಂದು ಎಕರೆಗೆ 30 ಸಾವಿರ ರು. ನಂತೆ 30 ವರ್ಷ ಒಪ್ಪಂದ ಮಾಡಿಕೊಂಡು ರೈತರು ಕೊಡಮಾಡಿರುವ ಜಮೀನುಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಹಿರೋ ಸೇರಿದಂತೆ ವಿವಿಧ ಕಂಪನಿಗಳ ಮೂಲಕ ಹೆಸರು ಆಧಾರಕಾರ್ಡ್‌ ಇಲ್ಲದೆ ಅತಿ ಹೆಚ್ಚು ಪಶ್ಚಿಮಬಂಗಾಳ ರಾಜ್ಯದಿಂದ ಬಂದಿರುವ ಸೋಲಾರ್‌ ಪ್ಲೇಟ್‌ ಅಳವಡಿಸಲು ಬಂದಿರುವ ಸಾವಿರಾರು ಕಾರ್ಮಿಕರ ಕುರಿತು ಯಾವ ಸರಕಾರಿ ಇಲಾಖೆಯಲ್ಲಿ ಮಾಹಿತಿ ಇಲ್ಲದೆ ಇರುವುದು. ಗ್ರಾಮೀಣ ಮಹಿಳೆಯರು ತಮ್ಮ ಜಮೀನುಗಳಿಗೆ ತೆರಳಲು ಆತಂಕವನ್ನುಂಟು ಮಾಡಿದೆ ಎನ್ನುತ್ತಾರೆ ಗ್ರಾಮಸ್ಥರು.

ಗುತ್ತಿಗೆದಾರರು ಅನ್ಯರಾಜ್ಯಗಳಿಂದ ಕಾರ್ಮಿಕರನ್ನು ಕರೆದುಕೊಂಡು ಬರುತ್ತಿದ್ದು, ಕನ್ನಡಿಗ ಕಾರ್ಮಿಕರಿಗೆ ಆದ್ಯತೆ ನೀಡದಿರುವುದು ಕನ್ನಡಪರ ಸಂಘಟನೆಗಳ ಕೆಂಗಣ್ಣಿಗೆ ಗುರಿಯಾಗಿದೆ.

ನೋಂದಣಿ ಇಲ್ಲದ ಕಾರ್ಮಿಕರು

ಕಾರ್ಮಿಕರು ವಲಸೆ ಬಂದಿರುವ ಕುರಿತು ಅವರ ಜಿಲ್ಲಾ ಕಚೇರಿಯಾಗಲಿ, ತಾಲೂಕು ಕಚೇರಿಯ ಆಡಳಿತಕ್ಕೂ ಇವರ ಮಾಹಿತಿ ಇರುವುದಿಲ್ಲ. ವಾಪಸ್ ಹೋದ ಬಗ್ಗೆಯೂ ಮಾಹಿತಿ ಇರುವುದಿಲ್ಲ. ಹೀಗಾಗಿ ಜಿಲ್ಲಾಡಳಿತ ಎಚ್ಚೆತ್ತುಕೊಂಡು ಗ್ರಾಮೀಣ ಭಾಗದಲ್ಲಿ ಬೇರೆ ರಾಜ್ಯದಿಂದ ಬಂದಂತಹ ಕಾರ್ಮಿಕರ ಅಂಕಿ ಸಂಖ್ಯೆ ಬಿಡುಗಡೆ ಮಾಡಬೇಕು ಅವರ ಕುರಿತು ನಿಗಾವಹಿಸಲು ಜಿಲ್ಲಾಡಳಿತ ಮುಂದಾಗಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಹುಬ್ಬಳ್ಳಿಯಲ್ಲಿ ಬಾಲಕಿಯ ಕೊಲೆ ನಡೆದು ಕೆಲ ದಿನ ಗತಿಸಿದರೂ ಪಶ್ಚಿಮ ಬಂಗಾಳದಿಂದ ಅತಿ ಹೆಚ್ಚು ಕಾರ್ಮಿಕರು ಗ್ರಾಮೀಣ ಭಾಗದಲ್ಲಿ ಬಂದಿದ್ದು, ಇವರ ಕುರಿತು ಜಿಲ್ಲಾಡಳಿತ ಮಾಹಿತಿ ಸಂಗ್ರಹಿಸಬೇಕಾಗಿತ್ತು. ಈಗಲಾದರೂ ಅಗತ್ಯ ಕ್ರಮಕ್ಕೆ ಮುಂದಾಗಬೇಕು ಎಂದು ಡಂಬಳ ಗ್ರಾಮದ ಸಮಾಜ ಸೇವಕ ವಿನಾಯಕ ಕಟ್ಟೇಣ್ಣವರ ಹೇಳಿದರು.

ಈಗಾಗಲೇ ಮುಂಡರಗಿ ಸೇರಿದಂತೆ ಡಂಬಳ‌ ಹೋಬಳಿ ಭಾಗದಲ್ಲಿ ಬೇರೆ ರಾಜ್ಯದಿಂದ ಬಂದು ಹೋಟೆಲ್, ಫ್ಯಾನ್, ಸೋಲಾರ್ ಕಂಪನಿಗಳಲ್ಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿರುವವರ ಕುರಿತು ಮಾಹಿತಿ ಕಲೆ ಹಾಕುವಂತೆ ಆದೇಶ ಬಂದಿದ್ದು, ಅಂಕಿ ಸಂಖ್ಯೆಗಳನ್ನು ಕ್ರೋಢಿಕರಿಸಲಾಗುವುದು ಮುಂಡರಗಿ ತಾಲೂಕು ಕಾರ್ಮಿಕರ ನಿರೀಕ್ಷಕ

ಭಾಗ್ಯವಂತ ಪತ್ತಾರ ಹೇಳಿದರು.