ಬದುಕಿನಲ್ಲಿ ಸ್ವದೇಶಿಯತೆ ಅಳವಡಿಕೆ: ರಮಾದೇವಿ ಬಾಲಚಂದ್ರ ಕಳಗಿ ಕರೆ

| Published : Feb 17 2024, 01:18 AM IST

ಬದುಕಿನಲ್ಲಿ ಸ್ವದೇಶಿಯತೆ ಅಳವಡಿಕೆ: ರಮಾದೇವಿ ಬಾಲಚಂದ್ರ ಕಳಗಿ ಕರೆ
Share this Article
  • FB
  • TW
  • Linkdin
  • Email

ಸಾರಾಂಶ

ಜೇಡ್ಲದಲ್ಲಿನ ಗೋಪಾಲಕೃಷ್ಣ ದೇವಕಿ ಪಶು ಸಂಗೋಪನ ಕೇಂದ್ರದಲ್ಲಿ ಎರಡನೇ ವರ್ಷದ ಗೋ ಅಪ್ಪುಗೆ ಕಾರ್ಯಕ್ರಮ ಜರುಗಿತು. ಶ್ರೀ ಸಂಸ್ಥಾನ ಗೋಕರ್ಣ, ಶ್ರೀರಾಮಚಂದ್ರಪುರ ಮಠ, ಮುಳ್ಳೇರಿಯಾ ಮಂಡಲ ಅಂತರ್ಗತ ಕೊಡಗು, ಸುಳ್ಯ, ಗುತ್ತಿಗಾರು ಹಾಗೂ ಈಶ್ವರ ಮಂಗಲ ವಲಯಗಳ ಸಂಯುಕ್ತ ಆಶ್ರಯದಲ್ಲಿ ಕಾರ್ಯಕ್ರಮ ಏರ್ಪಡಿಸಲಾಗಿತ್ತು.

ಕನ್ನಡಪ್ರಭ ವಾರ್ತೆ ಮಡಿಕೇರಿ ಶ್ರೀ ಸಂಸ್ಥಾನ ಗೋಕರ್ಣ, ಶ್ರೀರಾಮಚಂದ್ರಪುರ ಮಠ, ಮುಳ್ಳೇರಿಯಾ ಮಂಡಲ ಅಂತರ್ಗತ ಕೊಡಗು, ಸುಳ್ಯ, ಗುತ್ತಿಗಾರು ಹಾಗೂ ಈಶ್ವರ ಮಂಗಲ ವಲಯಗಳ ಸಂಯುಕ್ತ ಆಶ್ರಯದಲ್ಲಿ ಜೇಡ್ಲದಲ್ಲಿನ ಗೋಪಾಲಕೃಷ್ಣ ದೇವಕಿ ಪಶು ಸಂಗೋಪನ ಕೇಂದ್ರದಲ್ಲಿ ಎರಡನೇ ವರ್ಷದ ಗೋ ಅಪ್ಪುಗೆ ಕಾರ್ಯಕ್ರಮ ಜರುಗಿತು.

ಗೋವುಗಳನ್ನು ಅಪ್ಪಿಕೊಳ್ಳುವ ಮೂಲಕ ವಿದ್ಯಾರ್ಥಿಗಳು ಹಸುವಿನ ಮಮತೆಯ ಮಹತ್ವ ಅರಿತರು.

ಸಂಪಾಜೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ರಮಾದೇವಿ ಬಾಲಚಂದ್ರ ಕಳಗಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ, ಕಣ್ಮರೆಯಾಗುತ್ತಿರುವ ಹಸು ಸಾಕಾಣಿಕೆ ಹಾಗೂ ಗೋಪ್ರೇಮ ಇನ್ನು ಮುಂದೆ ಹೊಸ ಪೀಳಿಗೆಯಲ್ಲಿ ಮತ್ತೊಮ್ಮೆ ಕಾಣಿಸುವಂತಾಗಬೇಕು. ಆ ಮೂಲಕ ಜನರು ಮತ್ತೊಮ್ಮೆ ನೈಸರ್ಗಿಕ ಕೃಷಿ ಚಟುವಟಿಕೆ ಹಾಗೂ ಇನ್ನಿತರ ದೇಶೀಯ ಸ್ವಾವಲಂಬನೆ ಕಡೆಗೆ ಚಿತ್ತಹರಿಸುವಂತಾಗಬೇಕೆಂದು ಆಶಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜೇಡ್ಲ ಗೋಶಾಲೆಯ ಅಧ್ಯಕ್ಷ ಡಾ. ರಾಜಾರಾಮ್ ಮಾತನಾಡಿ, ಪಾಶ್ಚಾತ್ಯ ದೇಶದಲ್ಲಿ ಈಗ ಗೋ ಅಪ್ಪುಗೆ ಹಲವು ಕಾಯಿಲೆಗಳಿಗೆ ಮದ್ದೆಂದು ಕಂಡುಹಿಡಿದು ಇದನ್ನೇ ಹೆಚ್ಚಾಗಿ ಬಳಕೆ ಮಾಡಲಾಗುತ್ತಿದೆ. ಭಾರತದಲ್ಲಿ ಇದು ನಿತ್ಯ ಚಟುವಟಿಕೆಯಾಗ ಬೇಕು, ಗೋವುಗಳ ಮೂತ್ರದಿಂದ ಉತ್ಪಾದಿಸಲಾದ ಉತ್ಪನ್ನಗಳು ದಿನನಿತ್ಯ ಬಳಕೆಗೆ ಬರುವಂತಾಗಬೇಕು, ಮತ್ತೊಮ್ಮೆ ನಮ್ಮ ಹಳ್ಳಿಯ ಬೇರು ಗಟ್ಟಿಯಾಗಿ ಊರು ಸುಭೀಕ್ಷೆ ಹೊಂದುವಂತಾಗಬೇಕು, ಅದಕ್ಕೆ ಯುವ ಪೀಳಿಗೆ ಶ್ರಮಿಸಬೇಕು ಎಂದು ಕಿವಿಮಾತು ಹೇಳಿದರು.ಸಂಪಾಜೆ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿದ ಕಾರ್ಯಕ್ರಮದಲ್ಲಿ ಗೋಪೂಜೆಯನ್ನು ಮಕ್ಕಳು ಹಾಗೂ ಶಿಕ್ಷಕರು ಸಭಿಕರೊಂದಿಗೆ ನೆರವೇರಿಸಿದರು. ಗೋ ಮಾತೆಯನ್ನು ಅಪ್ಪುವ ಮೂಲಕ ಗೋವಿನ ಮಹತ್ವವನ್ನು ವಿದ್ಯಾರ್ಥಿಗಳು ತಿಳಿದುಕೊಂಡರು. ಮುಖ್ಯ ಅತಿಥಿಗಳಾಗಿ ಸಂಪಾಜೆ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಲಕ್ಮಯ್ಯ ನಾಯಕ್ ಹಾಗೂ ಕಾಲೇಜಿನ ಸಂಚಾಲಕ ಎಂ.ಎನ್‌.ಭಟ್‌ ಭಾಗವಹಿಸಿದ್ದರು.

ಚಿತ್ರಕಲಾ ಸ್ಪರ್ಧೆಯಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಶ್ರೀರಾಮಚಂದ್ರಾಪುರ ಮಠದ ಮಾತೃತ್ವಂ ಸಂಸ್ಥೆಯಿಂದ ನೀಡಲಾದ 80 ಚೀಲ ಗೋ ಆಹಾರವನ್ನು ಆಡಳಿತ ಮಂಡಳಿಗೆ ಹಸ್ತಾಂತರಿಸಲಾಯಿತು.

ಕೊಡಗಿನ ಎನ್.ಐ.ಎಂ.ಎ ವತಿಯಿಂದ ಡಾಕ್ಟರ್ ನಿತಿನ್ ಆರೋಗ್ಯ ಸಲಹಾ ಉಚಿತ ಶಿಬಿರ ನಿರ್ವಹಿಸಿದರು. ಜೇಡ್ಲ ಗೋಶಾಲೆಯ ಖಜಾಂಚಿ ಈಶ್ವರ ಕುಮಾರ ಭಟ್ ಸ್ವಾಗತಿಸಿ, ಮುರಳಿ ಪಕಳಕುಂಜ ನಿರೂಪಿಸಿ, ಮುಳ್ಳೇರಿಯಾ ಮಂಡಲದ ಉಪಾಧ್ಯಕ್ಷ ನಾರಾಯಣ ಮೂರ್ತಿ ಕೆ.ಆರ್, ಕೊಡಗು ವಲಯದ ಕಾರ್ಯದರ್ಶಿ ಮಡಿಕೇರಿಯ ಶ್ರೀಪತಿ ಸಿ.ಕೆ, ನಾಗರಾಜ್, ಉದಯಕುಮಾರ್, ಸಂಪಾಜೆ ಪದವಿ ಪೂರ್ವ ಕಾಲೇಜಿನ ಶಿಕ್ಷಕರು, ಮಾತೃತ್ವಂ ಸದಸ್ಯೆಯರು,ಸಾರ್ವಜನಿಕರು ಹಾಗೂ ನಾಲ್ಕು ವಲಯದ ವಿವಿಧ ಪದಾಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.