ನೆಲಮಂಗಲ/ದಾಬಸ್ಪೇಟೆ: 20ನೇ ಶತಮಾನ ಭಾರತದ ರಾಜಕೀಯ ಸ್ವಾತಂತ್ರ್ಯದ ಹೋರಾಟಕ್ಕೆ ಸಾಕ್ಷಿಯಾಗಿದ್ದರೆ, 21ನೇ ಶತಮಾನ ದೇಶದ ಅಭಿವೃದ್ಧಿ ಮತ್ತು ಜಾಗತಿಕ ನಾಯಕತ್ವವನ್ನು ನಿರ್ಧರಿಸುತ್ತದೆ ಎಂದು ಕೇಂದ್ರ ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ತಿಳಿಸಿದರು.
ಅರಿಶಿನಕುಂಟೆ ಸಮೀಪದ ನಗರೂರಿನ ಬಿಜಿಎಸ್ ಎಂಸಿಎಚ್ ಆಸ್ಪತ್ರೆಯ ಸೂಪರ್ ಸ್ಪೆಷಾಲಿಟಿ ಸೇವೆಗಳ ಆರಂಭ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಭೂಪ್ರದೇಶ, ಮಿಲಿಟರಿ ಪ್ರಾಬಲ್ಯ ಅಥವಾ ಕೈಗಾರಿಕಾ ಸಾಮರ್ಥ್ಯದ ಹಳೆಯ ಕಾಲ ಈಗ ಮುಗಿದಿದೆ. ಇಂದಿನ ದಿನಗಳಲ್ಲಿ ಒಂದು ದೇಶದ ನಿಜವಾದ ಜಾಗತಿಕ ಪ್ರಭಾವದ ಮೂಲ ಆ ದೇಶದ ಜ್ಞಾನ, ನಾವೀನ್ಯತೆ ಮತ್ತು ಸಂಶೋಧನೆಯಾಗಿದೆ ಎಂದು ಹೇಳಿದರು.ಗ್ರಾಮೀಣರ ಆರೋಗ್ಯ ರಕ್ಷಣೆಯಲ್ಲಿನ ಅಸಮಾನತೆ, ಮಧುಮೇಹ ಮತ್ತು ಕ್ಯಾನ್ಸರ್ನಂತಹ ಕಾಯಿಲೆಗಳ ಹೆಚ್ಚಳ ಮತ್ತು ಮಾನಸಿಕ ಆರೋಗ್ಯದ ಸವಾಲುಗಳಿಗೆ ಕೇವಲ ಆಸ್ಪತ್ರೆಗಳಿಂದಲೇ ಪರಿಹಾರ ಸಿಗದು, ಭವಿಷ್ಯದ ವೈದ್ಯರ ಸಂಶೋಧನೆ ಮತ್ತು ನಾವೀನ್ಯತೆಗಳಿಂದ ಇದು ಸಾಧ್ಯವಾಗಲಿದೆ. ದೇಶದ ಅಭಿವೃದ್ಧಿಗೆ ಯುವಪೀಳಿಗೆ ಶಕ್ತಿಯಾಗಿದ್ದು, ದುಶ್ಚಟಗಳಿಗೆ, ಬಲಿಯಾಗಬಾರದು. 2047ರ ವೇಳೆಗೆ ಭಾರತವನ್ನು ಸಂಪೂರ್ಣ ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡುವ ಗುರಿಗೆ ಯುವ ಪೀಳಿಗೆಯೇ ಪ್ರಮುಖ ಶಿಲ್ಪಿಗಳಾಗಿದ್ದಾರೆ ಎಂದು ಹೇಳಿದರು.
ವಿದ್ಯಾರ್ಥಿಗಳೊಂದಿಗಿನ ಪ್ರಶ್ನೋತ್ತರ ಸಂವಾದದಲ್ಲಿ ಶೇಖಾವತ್ ಅವರು ತಮ್ಮ ವೈಯಕ್ತಿಕ ಜೀವನದ ಅನುಭವಗಳನ್ನು ಹಂಚಿಕೊಂಡರು. ಜಾಗತೀಕರಣದ ಈ ಯುಗದಲ್ಲಿ ಯುವ ಪೀಳಿಗೆ ತಮ್ಮ ಗುರುತನ್ನು ಕಳೆದುಕೊಳ್ಳದೆ ಹೇಗೆ ಮುನ್ನಡೆಯಬಹುದು ಎಂಬ ವಿದ್ಯಾರ್ಥಿಯೊಬ್ಬರ ಪ್ರಶ್ನೆಗೆ ಸಚಿವರು ಉತ್ತರಿಸಿದರು.ಇದೇ ಸಂದರ್ಭದಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಬಿಜಿಎಸ್ ಪಿಯು ಕಾಲೇಜಿನ ಆವರಣದಲ್ಲಿ ಸಸಿ ನೆಟ್ಟು ನೀರುಣಿಸಿದರು. ಪರಿಸರ ಮಾಲಿನ್ಯ ತಡೆಗಟ್ಟುವ ಮೂಲಕ ಸಸಿಗಳನ್ನು ನೆಟ್ಟು ಪೋಷಣೆ ಮಾಡುವಂತೆ ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಬಿಜಿಎಸ್ ಶಾಖಾ ಮಠದ ಶ್ರೀ ಸೌಮ್ಯನಾಥ ಸ್ವಾಮೀಜಿ, ಹೊಸಕೋಟೆ ಶಾಸಕ ಶರತ್ ಬಚ್ಚೇಗೌಡ, ಎಂಎಲ್ಸಿ ಗೋವಿಂದರಾಜು, ಸೈಬರ್ ವಿಭಾಗ ಡಿಜಿಪಿ ಡಾ.ಪ್ರಣಬ್ ಮಹಂತಿ, ಮೆಡಿಕಲ್ ಇಲಾಖೆ ನಿರ್ದೇಶಕರಾದ ಡಾ.ಸುಜಾತ ರಾಥೋಡ್, ಟ್ರಸ್ಟಿ ದೇವರಾಜ್, ಉಪಕುಲಪತಿ ಡಾ.ಎಸ್.ಎನ್ ಶ್ರೀಧರ್, ಬಿಜಿಎಸ್ ಎಂಸಿಎಚ್ ಪ್ರಾಂಶುಪಾಲ ಡಾ.ಕೆ.ಎಸ್.ಗಂಗಾಧರ್, ಮುಖ್ಯಸ್ಥರಾದ ಕೃಷ್ಣಮೂರ್ತಿ, ಆಡಳಿತಾಧಿಕಾರಿ ಸುರೇಶ್ ಮತ್ತಿತರರಿದ್ದರು.
ಕೋಟ್..........
ಗ್ರಾಮೀಣರಿಗೆ ಅತ್ಯಾಧುನಿಕ ತಂತ್ರಜ್ಞಾನದ ಮೂಲಕ ಕಡಿಮೆ ಬೆಲೆಯಲ್ಲಿ ಸೂಪರ್ ಸ್ಪೆಷಾಲಿಟಿ ಸೇವೆಗಳನ್ನು ಆರಂಭಿಸಲಾಗಿದೆ. ಗ್ರಾಮೀಣರು ಸೇವೆಯನ್ನು ಸದ್ಬಳಸಿಕೊಂಡು ಆರೋಗ್ಯ ಕಾಪಾಡಿಕೊಳ್ಳಬೇಕು. ಜನಸಾಮಾನ್ಯರು ಕಾಯಿಲೆ ಬರುವುದಕ್ಕೂ ಮುನ್ನ ಜಾಗೃತರಾಗಿ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು.- ನಿರ್ಮಲಾನಂದನಾಥ ಸ್ವಾಮೀಜಿ, ಪೀಠಾಧ್ಯಕ್ಷರು, ಆದಿಚುಂಚನಗಿರಿ ಮಠ
ಪೋಟೋ 8 :ನೆಲಮಂಗಲದ ನಗರೂರಿನ ಬಿಜಿಎಸ್ ಎಂಸಿಎಚ್ ಆಸ್ಪತ್ರೆಯ ಸೂಪರ್ ಸ್ಪೆಷಾಲಿಟಿ ಸೇವೆಗಳಿಗೆ ಕೇಂದ್ರ ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಚಾಲನೆ ನೀಡಿದರು. ನಿರ್ಮಲಾನಂದನಾಥ ಸ್ವಾಮೀಜಿ, ಸೌಮ್ಯನಾಥ ಸ್ವಾಮೀಜಿ, ಹೊಸಕೋಟೆ ಶಾಸಕ ಶರತ್ ಬಚ್ಚೇಗೌಡ ಇತರರು ಹಾಜರಿದ್ದರು.