ಸಾರಾಂಶ
ಸನಾತನ ಧರ್ಮ ಉಳಿದರೆ ಮಾತ್ರ ಭಾರತ ದೇಶ ಉಳಿಯಲು ಸಾಧ್ಯ. ಹೀಗಾಗಿ ಸನಾತನ ಹಿಂದೂ ಧರ್ಮದ ರಕ್ಷಣೆಗಾಗಿ, ದೇಶದ ಉಳಿವಿಗಾಗಿ ನಾವೆಲ್ಲರೂ ಒಂದಾಗುವುದು ಅನಿವಾರ್ಯವಿದೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಕರೆ ನೀಡಿದರು.
ವಿಜಯಪುರ : ಸನಾತನ ಧರ್ಮ ಉಳಿದರೆ ಮಾತ್ರ ಭಾರತ ದೇಶ ಉಳಿಯಲು ಸಾಧ್ಯ. ಹೀಗಾಗಿ ಸನಾತನ ಹಿಂದೂ ಧರ್ಮದ ರಕ್ಷಣೆಗಾಗಿ, ದೇಶದ ಉಳಿವಿಗಾಗಿ ನಾವೆಲ್ಲರೂ ಒಂದಾಗುವುದು ಅನಿವಾರ್ಯವಿದೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಕರೆ ನೀಡಿದರು.
ನಗರದ ಸಿದ್ದೇಶ್ವರ ದೇವಸ್ಥಾನ ಮುಂಭಾಗದ ಶತಮಾನ ಕಂಡ ಸಂತ, ಜ್ಞಾನಯೋಗಿ ಸಿದ್ದೇಶ್ವರ ಮಹಾ ಸ್ವಾಮೀಜಿಯವರ ವೇದಿಕೆಯಲ್ಲಿ ಸ್ವಾಮಿ ವಿವೇಕಾನಂದ ಸೇನೆಯ ಶ್ರೀ ಗಜಾನನ ಮಹಾಮಂಡಳ ಹಮ್ಮಿಕೊಂಡಿದ್ದ ಗಣೇಶ ವಿಸರ್ಜನಾ ಮೆರವಣಿಗೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಬೇರೆಯವರಂತೆ, ದೇಶದ ಅನ್ನ ತಿಂದು, ನೀರು ಕುಡಿದು, ಗಾಳಿ ಸೇವಿಸುವ ಯಾವೊಬ್ಬ ಹಿಂದೂ ದೇಶದ್ರೋಹಿ ಕೆಲಸ ಮಾಡಲ್ಲ, ಅದೇ ಸನಾತನ ಧರ್ಮ. ರಾಮಾಯಣ ವಾಲ್ಮೀಕಿ ಬರೆದರು, ಮಹಾಭಾರತವನ್ನು ವೇದ ವ್ಯಾಸರು ಬರೆದರು, ದೇಶದ ಪವಿತ್ರ ಸಂವಿಧಾನ ನಾನು ಬರೆಯುತ್ತಿರುವೆ ಎಂದು ಸ್ವತ ಸಂವಿಧಾನ ಶಿಲ್ಪಿ ಅಂಬೇಡ್ಕರ ಅವರೇ ಹೇಳಿಕೊಂಡಿದ್ದಾರೆ. ಎಲ್ಲಿದೆ ಜಾತಿ? ಜಾತಿ ಜಾತಿಯಿಂದ ಹೊರ ಬಂದು ನಾವೇಲ್ಲ ಒಂದಾಗಬೇಕು. ದಲಿತ ಯುವಕರು ಅಂಬೇಡ್ಕರ ಅವರು ಬರೆದಿರುವ ಪುಸ್ತಕಗಳನ್ನು ಓದಿ, ಹಿಂದೂ ಸಮಾಜದ ಯಾವ ಜಾತಿಯಿಂದಲೂ ದಲಿತ ಸಮುದಾಯದವರಿಗೆ ಅಪಾಯವಿಲ್ಲ. ನೀವು ನಾವು ಕೂಡಿದ್ದರೆ, 2047ಕ್ಕೆ ಹಿಂದೂ ರಾಷ್ಟ್ರವನ್ನು, ಇಸ್ಲಾಂ ರಾಷ್ಟ್ರ ಮಾಡುವ ಹುನ್ನಾರದಿಂದ ಬಚಾವ್ ಆಗುತ್ತೇವೆ ಎಂದು ಸಲಹೆ ನೀಡಿದರು.
ಬಸವಣ್ಣನೂ ಶ್ರೇಷ್ಠ, ಪಂಚ ಪೀಠದವರು ನಮಗೆ ಶ್ರೇಷ್ಠ, ಅಂಬೇಡ್ಕರರು ಶ್ರೇಷ್ಠ, ಸಂಗೊಳ್ಳಿ ರಾಯಣ್ಣ, ಛತ್ರಪತಿ ಶಿವಾಜಿ, ಸಾವರ್ಕರ, ಬಾಬು ಜಗಜೀವನ ರಾಮ್, ಹಡಪದ ಅಪ್ಪಣ್ಣ, ವಾಲ್ಮೀಕಿ, ಕಿತ್ತೂರು ಚನ್ನಮ್ಮ, ಒನಕೆ ಓಬವ್ವನು ನಮಗೆ ಶ್ರೇಷ್ಠರು. ಕಾಂಗ್ರೆಸ್ ಉರಿಯುತ್ತಿರುವ ಬೆಂಕಿ ಅಂತ ಸ್ವತಃ ಅಂಬೇಡ್ಕರ ಅವರೇ ಹೇಳಿದ್ದಾಗಿ ತಿಳಿಸಿದರು.
ಕರ್ನಾಟಕದ ಜನ ನನ್ನಿಂದ ನಿರೀಕ್ಷೆ ಮಾಡುತ್ತಿದ್ದಾರೆ. ರಾಜ್ಯದಲ್ಲಿ ನನ್ನಿಂದ ಬದಲಾವಣೆ ಸಾಧ್ಯವೆಂದು ಜನರ ಮನಸ್ಸಿನಲ್ಲಿದೆ. ವಿಜಯಪುರ ನಗರದ ಮಾದರಿಯಲ್ಲೇ ಇಡೀ ಕರ್ನಾಟಕವನ್ನು ಅಭಿವೃದ್ಧಿ ಮಾಡುತ್ತೇನೆಂಬ ಅಚಲವಾದ ವಿಶ್ವಾಸ ಹೊಂದಿದ್ದಾರೆ. ಯಾವ ಸಮಾಜಕ್ಕೂ ಸಹ ಅನ್ಯಾಯವಾಗದಂತೆ, ಅವರಿಗೆ ಅವರ ಹಕ್ಕು ಕೊಡಿಸುವ ಜೊತೆಗೆ ಸಮಗ್ರ ಕರ್ನಾಟಕ ಅಭಿವೃದ್ಧಿ ಮಾಡುವ ಶಪತ ಮಾಡಿರುವುದಾಗಿ ಯತ್ನಾಳ ಹೇಳಿದರು.
ಪಾಲಿಕೆ ಮೇಯರ್ ಎಂ.ಎಸ್.ಕರಡಿ, ಮುಖಂಡರಾದ ಪ್ರತಾಪ್ ಚಿಕ್ಕಲಕಿ, ಗುರು ಗಚ್ಚಿನಮಠ, ಪ್ರೇಮಾನಂದ ಬಿರಾದಾರ, ಸಂತೋಷ ತಳಕೇರಿ, ವಿಕ್ರಮ ಗಾಯಕವಾಡ ಮಾತನಾಡಿದರು. ಮುಖಂಡರಾದ ಗೋಪಾಲ ಮಹಾರಾಜರು, ಸಂಗನಬಸಪ್ಪ ಸಜ್ಜನ, ರಾಜಶೇಖರ ಮಗಿಮಠ, ವಿಠ್ಠಲ ಹೊಸಪೇಟ, ಮಲ್ಲಿಕಾರ್ಜುನ ಗಡಗಿ, ಚಂದ್ರು ಚೌದರಿ, ನಂದು ಗಡಗಿ, ರಾಜು ಜಾಧವ, ಪಾಂಡುಸಾಹುಕಾರ ದೊಡಮನಿ, ಸುನೀಲ ಬೈರವಾಡಗಿ ಉಪಸ್ಥಿತರಿದ್ದರು.