ಸಾರಾಂಶ
ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಭಾರತ ಯಾವುದೇ ದೇಶವನ್ನು ಅವಲಂಭಿಸದೇ ಸ್ವಾವಲಂಬನೆ ಮೂಲಕ ಪ್ರಗತಿ ಸಾಧಿಸುತ್ತಿರುವುದು ಹೆಮ್ಮೆಯ ಸಂಗತಿ ಎಂದು ಶಾಸಕ ಎಚ್.ಟಿ.ಮಂಜು ಅಭಿಪ್ರಾಯಪಟ್ಟರು.ಪಟ್ಟಣದ ನಾಲ್ವಡಿ ಕೃಷ್ಣರಾಜ ಒಡೆಯರ್ ತಾಲೂಕು ಕ್ರೀಡಾಂಗಣದಲ್ಲಿ ಏರ್ಪಡಿಸಿದ್ದ 79ನೇ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಮಾತನಾಡಿ, ತಾಲೂಕಿನ ಅಕ್ಕಿಹೆಬ್ಬಾಳು, ಮಡುವಿನಕೋಡಿ, ಬಳ್ಳೆಕೆರೆ, ಸಿಂಧಘಟ್ಟ, ರಾಯಸಮುದ್ರ ಮುಂತಾದ ಗ್ರಾಮಗಳ ನೂರಾರು ಮುಖಂಡರು ಸ್ವಾತಂತ್ರ್ಯ ಚಳವಳಿಗಳಲ್ಲಿ ಭಾಗವಹಿಸಿ ದೇಶಪ್ರೇಮ ಮೆರೆದಿದ್ದಾರೆ ಎಂದು ಸ್ಮರಿಸಿದರು.
ಮಂಡ್ಯ ಜಿಲ್ಲೆಯ ಶಿವಪುರದಲ್ಲಿ ಸತ್ಯಾಗ್ರಹ ನಡೆಸಿದ ಕುರುಹು ನಮ್ಮ ಕಣ್ಣಮುಂದೆ ಇದೆ. ಜಗತ್ತಿನ ದೊಡ್ಡಣ್ಣ ಅಮೆರಿಕಾ ಅಧ್ಯಕ್ಷ ಟ್ರಂಪ್ ಭಾರತದ ಮೇಲೆ ಅಧಿಕ ಸುಂಕ ವಿಧಿಸಿದ್ದರೂ ಭಾರತ ಯಾವುದಕ್ಕೂ ಸೊಪ್ಪು ಹಾಕದೇ ಜಗತ್ತಿನ ಎಲ್ಲಾ ದೇಶಗಳೊಂದಿಗೆ ಉತ್ತಮ ಬಾಂಧವ್ಯ ಹೊಂದುವ ಮೂಲಕ ನಿಮ್ಮ ಜೊತೆ ನಾವಿದ್ದೇವೆ. ನಿಮಗೆ ಸಹಕಾರ ನೀಡಲಿದ್ದೇವೆ ಎಂಬ ಸಂದೇಶ ನೀಡಿರುವುದು ಸಂತಸದ ವಿಷಯವಾಗಿದೆ ಎಂದರು.ತಹಸೀಲ್ದಾರ್ ಲೆ.ಕರ್ನಲ್ ಡಾ.ಎಸ್.ಯು.ಅಶೋಕ್ ಧ್ವಜ ಸಂದೇಶ ನೀಡಿ, ಸಾವಿರಾರು ಜನರ ಹೋರಾಟ, ತ್ಯಾಗ, ಬಲಿದಾನದ ಪ್ರತೀಕವಾಗಿ ನಮಗೆ ಸ್ವಾತಂತ್ರ್ಯ ಲಭಿಸಿದೆ. ನಾವು ದೇಶಕ್ಕಾಗಿ ಉತ್ತಮ ಕೆಲಸ ಮಾಡಬೇಕು ಎಂದು ಹೇಳಿದರು.
ಇದೇ ವೇಳೆ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ಪರೀಕ್ಷೆಗಳಲ್ಲಿ ರಾಜ್ಯಕ್ಕೆ ಟಾಪರ್ ಸ್ಥಾನ ಪಡೆದ ಹಾಗೂ ಈ ಶೈಕ್ಷಣಿಕ ವರ್ಷದಲ್ಲಿ ಮೆಡಿಕಲ್ ಸೀಟು ಪಡೆದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. ಮಕ್ಕಳಿಂದ ವಿವಿಧ ದೇಶಭಕ್ತಿ ಸಾರುವ ಮನರಂಜನಾ ಕಾರ್ಯಕ್ರಮಗಳು ಜರುಗಿದವು.ಕಾರ್ಯಕ್ರಮದಲ್ಲಿ ಪುರಸಭಾ ಅಧ್ಯಕ್ಷೆ ಪಂಕಜ, ಉಪಾಧ್ಯಕ್ಷೆ ಸೌಭಾಗ್ಯ, ತಾಪಂ ಇಒ ಸುಷ್ಮ, ಎಂಡಿಸಿಸಿ ಬ್ಯಾಂಕ್ ಮಾಜಿ ಉಪಾಧ್ಯಕ್ಷ ಎಚ್.ಕೆ.ಅಶೋಕ್, ಟಿಎಪಿಸಿಎಂಎಸ್ ನಿರ್ದೇಶಕ ಬಲದೇವ್, ಪುರಸಭಾ ಸದಸ್ಯ ಶಾಮಿಯಾನ ತಿಮ್ಮೇಗೌಡ, ಸುಗುಣ, ಬೇಗಂ, ಸಾರ್ವಜನಿಕ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ.ಮಂಜುಳ, ಬಿಇಒ ತಿಮ್ಮೇಗೌಡ, ಡಾ.ಎಚ್.ಎಸ್.ದೇವರಾಜು, ಮೀನುಗಾರಿಕೆ ಸ.ನಿ. ಜಗದೀಶ್, ಸಮಾಜ ಕಲ್ಯಾಣಾಧಿಕಾರಿ ದಿವಾಕರ್, ಬಿಸಿಎಂ ವೆಂಕಟೇಶ್ ಟಿಎಚ್ಒ ಡಾ.ಅಜಿತ್, ನಯನಜ ಕ್ಷತ್ರೀಯ ಸಮಾಜದ ಅಧ್ಯಕ್ಷ ಶಿವಪ್ಪ ಸೇರಿ ತಾಲೂಕು ಮಟ್ಟದ ಅಧಿಕಾರಿಗಳು ವಿವಿಧ ಶಾಲೆಗಳ ಶಾಲಾ ಮಕ್ಕಳು ಹಾಜರಿದ್ದರು.