ಸಾರಾಂಶ
ಕನ್ನಡಪ್ರಭ ವಾರ್ತೆ ಸಕಲೇಶಪುರ
ಸರ್ವ ರಂಗಗಳಲ್ಲೂ ಭಾರತ ಅಭಿವೃದ್ಧಿ ಪಥದತ್ತ ಸಾಗುತ್ತಿದ್ದು ಆಮದು ರಾಷ್ಟ್ರವಾಗಿದ್ದ ದೇಶ ಇಂದು ರಫ್ತು ರಾಷ್ಟ್ರವಾಗಿ ಗುರುತಿಸಿಕೊಂಡಿದೆ ಎಂದು ಶಾಸಕ ಸಿಮೆಂಟ್ ಮಂಜು ಹೇಳಿದರು.ಗುರುವಾರ ಪಟ್ಟಣದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಅವರಣದಲ್ಲಿ ತಾಲೂಕು ಆಡಳಿತ ಹಮ್ಮಿಕೊಂಡಿದ್ದ 78ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿ, ಅಭಿವೃದ್ಧಿಶೀಲ ರಾಷ್ಟ್ರ ಎಂಬ ಹಣೆಪಟ್ಟಿಯಿಂದ ಹೊರಬರುತ್ತಿರುವ ದೇಶಕ್ಕೆ ಯುವ ಜನಾಂಗ ಸಹಕರಿಸಬೇಕು. ದೇಶದ ಅಭಿವೃದ್ಧಿಗೆ ಬಾಹ್ಯ ಶತ್ರುಗಳಿಗಿಂತ ಆಂತರಿಕ ಸಂಘರ್ಷವೇ ಮುಳುವಾಗಲಿದೆ. ಆದ್ದರಿಂದ ಶಾಂತಿ, ಸಹಬಾಳ್ವೆ ಬೆಳಸಿಕೊಂಡಾಗ ದೇಶ ಅಭಿವೃದ್ಧಿಯತ್ತ ಸಾಗಲು ಅನುಕೂಲವಾಗಲಿದೆ. ಲಕ್ಷಾಂತರ ಮಂದಿ ಸ್ವಾತಂತ್ರ್ಯಕ್ಕಾಗಿ ಪ್ರಾಣತ್ಯಾಗ ಮಾಡಿದ್ದು, ಅವರ ತ್ಯಾಗ, ಬಲಿದಾನವನ್ನು ಮಕ್ಕಳಲ್ಲಿ ತುಂಬುವ ಮೂಲಕ ಉತ್ತಮ ಪ್ರಜೆಗಳನ್ನಾಗಿ ರೂಪಿಸುವ ಹೊಣೆ ಶಿಕ್ಷಕರ ಮೇಲಿದೆ. ಮೌಲ್ಯಯುತ ಶಿಕ್ಷಣ ಇಂದಿನ ತುರ್ತು ಅಗತ್ಯವಾಗಿದೆ ಎಂದರು.
ಧ್ವಜಾರೋಹರಣ ನೆರವೇರಿಸಿ ಮಾತನಾಡಿದ ಉಪವಿಭಾಗಾಧಿಕಾರಿ ಡಾ.ಎಂ.ಕೆ ಶೃತಿ, ಶಿಕ್ಷಣ, ಆರ್ಥಿಕ, ತಾಂತ್ರಿಕ ಕ್ಷೇತ್ರದಲ್ಲಿ ಅಗಾಧ ಸಾಧನೆ ಮಾಡಿರುವ ದೇಶ ಅಭಿವೃದ್ಧಿಯತ್ತ ಮುನ್ನುಗುತ್ತಿದ್ದು 1947ರಲ್ಲಿ ದೇಶದ ಶಿಕ್ಷಿತರ ಸಂಖ್ಯೆ ಶೇ. 12ರಷ್ಟಿದ್ದರೆ ಪ್ರಸಕ್ತ ಶೇ. 78ರಷ್ಟಾಗಿದೆ. ಬಾಹ್ಯಕಾಶ ಕ್ಷೇತ್ರದಲ್ಲಿ ನಮ್ಮನ್ನು ಸಾಕಷ್ಟು ದೇಶಗಳು ಆಶ್ರಯಿಸುವಷ್ಟು ದೇಶ ಅಭಿವೃದ್ಧಿ ಹೊಂದಿದೆ. ಸದ್ಯ 195 ರಾಷ್ಟ್ರಗಳ ಪೈಕಿ ನಮ್ಮ ದೇಶ ಆರ್ಥಿಕತೆಯಲ್ಲಿ 5ನೇ ಸ್ಥಾನದಲ್ಲಿದ್ದು ಶೀಘ್ರವೇ ಮೂರನೇ ಆರ್ಥಿಕ ಬಲಾಢ್ಯ ದೇಶವಾಗಿ ಮುನ್ನುಗುವ ದಿನಗಳು ಸದ್ಯದಲ್ಲೆ ಬರಲಿದೆ ಎಂದರು.ಸ್ವಾತಂತ್ರ್ಯದಿನಾಚರಣೆ ಕಾರ್ಯಕ್ರಮದಲ್ಲಿ ಶಿಕ್ಷಕ ಅಣ್ಣಪ್ಪಸ್ವಾಮಿ ಸೇರಿದಂತೆ 8 ಸಾಧಕರನ್ನು ಸನ್ಮಾನಿಸಲಾಯಿತು. ವಿವಿಧ ಶಾಲೆಯ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಧ್ವಜಾರೋಹಣದ ವೇಳೆ ರೋಟರಿ ಶಾಲೆಯ ವಿದ್ಯಾರ್ಥಿ ಸೋನಿತ್ ಸಿದ್ಧಪಡಿಸಿದ ಡ್ರೋನ್ ಮುಖಾಂತರ ರಾಷ್ಟ್ರಧ್ವಜಕ್ಕೆ ಪುಷ್ಪವೃಷ್ಟಿ ಮಾಡಲಾಯಿತು.ಈ ವೇಳೆ ತಹಸೀಲ್ದಾರ್ ಮೇಘನಾ ಗಾಂಧಿ, ಇಒ ರಾಮಕೃಷ್ಣ, ಬಿಇಒ ಪುಷ್ಪ ಮುಂತಾದವರಿದ್ದರು.