ಸಂಸ್ಕೃತಿ ಪರಂಪರೆ ಹೊಂದಿರುವ ರಾಷ್ಟ್ರ ಭಾರತ

| Published : Apr 20 2025, 01:45 AM IST

ಸಾರಾಂಶ

ಭಾರತ ಧಾರ್ಮಿಕ, ಆಧ್ಯಾತ್ಮಿಕ, ಸಂಸ್ಕೃತಿ ಪರಂಪರೆಯನ್ನು ಹೊಂದಿರುವ ವಿಶ್ವದ ಏಕೈಕ ರಾಷ್ಟ್ರವಾಗಿದೆ ಎಂದು ಶ್ರೀ ಸಿದ್ದಲಿಂಗ ಸ್ವಾಮೀಜಿ ಹೇಳಿದರು.

ಕನ್ನಡಪ್ರಭ ವಾರ್ತೆ ಶನಿವಾರಸಂತೆ

ಭಾರತ ಧಾರ್ಮಿಕ, ಆಧ್ಯಾತ್ಮಿಕ, ಸಂಸ್ಕೃತಿ ಪರಂಪರೆಯನ್ನು ಹೊಂದಿರುವ ವಿಶ್ವದ ಏಕೈಕ ರಾಷ್ಟ್ರವಾಗಿದೆ ಎಂದು ತುಮಕೂರು ಸಿದ್ದಗಂಗ ಮಠದ ಪೀಠಾಧ್ಯಕ್ಷ ಶ್ರೀ ಸಿದ್ದಲಿಂಗ ಸ್ವಾಮೀಜಿ ಹೇಳಿದರು.

ಅವರು ಅಂಕನಹಳ್ಳಿ ಸಮಿಪದ ಶ್ರೀ ತಪೋಕ್ಷೇತ್ರ ಮನೆಹಳ್ಳಿ ಮಠದ ಶ್ರೀ ಗುರುಸಿದ್ಧವೀರೇಶ್ವರಸ್ವಾಮಿಯವರ 13ನೇ ವರ್ಷದ ಜಾತ್ರಾ ಮಹೋತ್ಸವದ ಅಂಗವಾಗಿ ನಡೆದ ಮಹಾರಥೋತ್ಸವ ಮತ್ತು ಗುರುವಂದನಾ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ಧಾರ್ಮಿಕ ಚಿಂತನೆ, ಮನುಷ್ಯನ ನೆಮ್ಮದಿಗೆ ಜಾತ್ರಾ ಮಹೋತ್ಸವಗಳು ಸಹಕಾರಿಯಾಗುತ್ತದೆ. ಭಾರತ ದೇಶವು ಧಾರ್ಮಿಕ, ಆಧ್ಯಾತ್ಮಿಕ, ಸಂಸ್ಕೃತಿಯ ತಳಹದಿಯಲ್ಲಿದೆ. ಭಾರತದ ಸಂಸ್ಕೃತಿಯ ಪರಂಪರೆಯು ಪ್ರಪಂಚದಲ್ಲಿ ಶಾಂತಿ ನೆಮ್ಮದಿಯನ್ನು ಬಯಸುತ್ತದೆ. ಇದರಿಂದ ಇಡೀ ವಿಶ್ವ ಭಾರತ ದೇಶವನ್ನು ತಿರುಗಿ ನೋಡುತ್ತಿದೆ, ಭಾರತದ ಧಾರ್ಮಿಕ ಮತ್ತು ಸಂಸ್ಕೃತಿ ಪರಂಪರೆಗೆ ಮೈಸೂರು ರಾಜರ ಕೊಡುಗೆ ಅಪಾರವಾದದ್ದು ಇದರಿಂದ ಮೈಸೂರು ರಾಜರು ವಿಶ್ವದ ಗಮನ ಸೆಳೆದಿದ್ದರು ಎಂದು ಹೇಳಿದರು.

ಮಠ ಮಾನ್ಯಗಳು ಮನಸ್ಸಿನ ನೆಮ್ಮದಿ ಕೇಂದ್ರಗಳಾಗಿವೆ. ಈ ದಿಸೆಯಲ್ಲಿ ಮನೆಹಳ್ಳಿ ಮಠವು ಈ ಭಾಗದ ಜನರ ಆಧ್ಯಾತ್ಮಿಕ, ಧಾರ್ಮಿಕ ಮತ್ತು ಮನಸ್ಸಿಗೆ ನೆಮ್ಮದಿ ನೀಡುವ ಕೇಂದ್ರವಾಗಿದೆ ಮಠದ ಸ್ವಾಮೀಜಿ ಅವರ ಧಾರ್ಮಿಕ ಚಿಂತನೆಯಿಂದ ಮಠವು ಸಾಮಾಜಿಕವಾಗಿಯೂ ಅಭಿವೃದ್ಧಿ ಹೊಂದುತ್ತಿದೆ ಎಂದು ಹೇಳಿದರು.ಕೊಡಗು- ಮೈಸೂರು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಸಬಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ದೇಶ ಮತ್ತು ಸಮಾಜದ ಅಭಿವೃದ್ಧಿಗೆ ಧಾರ್ಮಿಕ ಕೇಂದ್ರಗಳ ಮಾರ್ಗದರ್ಶನ ಅಗತ್ಯ ಇದೆ. ಧಾರ್ಮಿಕ ಪರಂಪರೆಯನ್ನು ನಮ್ಮ ರಾಷ್ಟ್ರವು ಧಾರ್ಮಿಕ, ಸಾಂಸ್ಕೃತಿಕ, ಶೈಕ್ಷಣಿಕ, ವೈಜ್ಞಾನಿಕ, ಆರ್ಥಿಕವಾಗಿಯೂ ಅಭಿವೃದ್ಧಿ ಹೊಂದುತ್ತಿದೆ, ಧಾರ್ಮಿಕ ಆಚರಣೆ, ಜಾತ್ರಾ ಮಹೋತ್ಸವದ ಆಚರಣೆಗಳು ನಮ್ಮ ದೇಶದಲ್ಲಿ ಮಾತ್ರ ಕಾಣಲು ಸಾಧ್ಯ. ಈ ದಿಸೆಯಲ್ಲಿ ನಾವೆಲ್ಲರೂ ಭಾರತದ ಧಾರ್ಮಿಕ ಪರಂಪರೆಯನ್ನು ಉಳಿಸಿಕೊಳ್ಳಲು ಪ್ರಯತ್ನಿಸಬೇಕು ಎಂದರು. ಮೈಸೂರು ಮತ್ತು ಕೊಡಗು ತನ್ನದೇ ಪರಂಪರೆಯನ್ನು ಹೊಂದಿದ್ದು ನಾನು ಕೊಡಗು ಮತ್ತು ಮೈಸೂರು ಸಂಸದ ಆಗಿರುವುದಕ್ಕೆ ಹೆಮ್ಮಯಾಗುತ್ತಿದೆ. ಈ ನಿಟ್ಟಿನಲ್ಲಿ ಕೊಡಗು ಮತ್ತು ಮೈಸೂರು ಅಭಿವೃದ್ಧಿಗಾಗಿ ಶ್ರಮಿಸುವುದಾಗಿ ಭರವಸೆ ನೀಡಿದರು.ಮಡಿಕೇರಿ ಕ್ಷೇತ್ರ ಶಾಸಕ ಡಾ.ಮಂತರ್ ಗೌಡ ಮಾತನಾಡಿ, ಜನರ ನೆಮ್ಮದಿಗೆ ಮಠ ಮಂದಿರಗಳ ಅಗತ್ಯ ಇದೆ. ಗಡಿ ಭಾಗದಲ್ಲಿರುವ ಮನೆಹಳ್ಳಿ ಕ್ಷೇತ್ರಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಬರುತ್ತಾರೆ. ನಾನು ಸಹ ಚುನಾವಣೆ ಸಂದರ್ಭದಲ್ಲಿ ಸದರಿ ಮಠಕ್ಕೆ ಬಂದು ಶ್ರೀ ಕೇತ್ರದ ಆಶೀರ್ವಾದ ಪಡೆದುಕೊಂಡಿದೆ ಎಂದು ಸ್ಮರಿಸಿದರು. ಸದರಿ ಮಠದ ಅಭಿವೃದ್ಧಿಗೆ ಸರ್ಕಾರದಿಂದ 50 ಲಕ್ಷ ರು. ಅನುದಾನ ನೀಡುವ ಭರವಸೆ ನೀಡಿದ ಶಾಸಕ ಡಾ.ಮಂತರ್ ಗೌಡ ಮುಂದಿನ ದಿನದಲ್ಲಿ ನನ್ನ ಕ್ಷೇತ್ರದ ವಿವಿಧ ಮಠಗಳಿಗೂ ಸರ್ಕಾರದಿಂದ ಅನುದಾನ ನೀಡುವ ಭರವಸೆಯನ್ನು ವ್ಯಕ್ತ ಪಡಿಸಿದರು.ಅರಮೇರಿ ಕಳಂಚೇರಿ ಮಠದ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ, ಸಕಲೇಶಪುರ ಶಾಸಕ ಸಿಮೆಂಟ್ ಮಂಜುನಾಥ್, ದಾನಿ ಮತ್ತು ಶಿವಮೊಗ್ಗ ಎಂಎಲ್‍ಸಿ ಭಾರತಿ ಶೆಟ್ಟಿ, ಬೇಲೂರು ಶಾಸಕ ಸುರೇಶ್ ಮಾತನಾಡಿದರು.

ತಪೋಕ್ಷೇತ್ರ ಮನೆಹಳ್ಳಿ ಮಠಾಧೀಶ ಶ್ರೀ ಮಹಾಂತ ಶಿವಲಿಂಗ ಸ್ವಾಮಿ, ಕಿರಿಕೊಡ್ಲಿ ಮಠದ ಸದಾಶಿವಸ್ವಾಮೀಜಿ, ಕಲ್ಲುಮಠದ ಮಹಂತಸ್ವಾಮಿ ಮತ್ತು ವಿವಿಧ ಸ್ವಾಮೀಜಿಗಳು ಹಾಗೂ ಪ್ರಮುಖರಾದ ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಐಪಿಎಸ್ ಅಧಿಕಾರಿ ಬೇನಕ ಪ್ರಸಾದ್, ಎಚ್.ಎಸ್.ಚಂದ್ರಮೌಳಿ, ಶಿವಪ್ಪ, ಹಾಲಪ್ಪ, ಪುಷ್ಪಲತ ಮುಂತಾದವರು ಹಾಜರಿದ್ದರು.

ಗುರುವಂದನಾ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದ ಸಾಧಕರಾದ ಎಂ.ಆರ್.ದೇವಪ್ಪ, ವಿರೂಪಾಕ್ಷಯ್ಯ, ವಿಶ್ವಕಪ್ ವಿಜೇತೆ ಚೈತ್ರ, ಮಿಲನ ಭರತ್, ಉಳುವಂಗಡ ಕಾವೇರಿ ಉದಯ್, ಜನಾರ್ಧನ್, ಧರ್ಮಪ್ಪ, ಲೋಕೇಶ್ ಸುವರ್ಣ, ಚಂದ್ರಮೋಹನ್, ರಾಜರಾಮ್, ಶ್ರೇಯಾ, ಕೆ.ವಿ.ಪರಮೇಶ್, ರವಿಸುಂದರ್, ಮಾದಣ್ಣ, ಯೋಗಣ್ಣ ಅವರನ್ನು ಸನ್ಮಾನಿಸಲಾಯಿತು.