ಕನ್ನಡಪ್ರಭ ವಾರ್ತೆ ಹೊಳೆಹೊನ್ನೂರು
ಭಾರತ ಎಂದರೆ ಮಠ ಮಂದಿರಗಳ ತವರು. ದೇಶದ ಜನ ದೇವರು, ಧರ್ಮ, ಗುರು, ಆಚಾರ ವಿಚಾರಗಳಿಗೆ ಹೆಚ್ಚು ಭಕ್ತಿ ಶ್ರದ್ದೆಯನ್ನ ಅರ್ಪಣೆ ಮಾಡುತ್ತಾರೆ. ಎಂದು ಉಜ್ಜಿನಿಯ ಸದ್ಧರ್ಮ ಸಿಂಹಾದೀಶ್ವರ ಜಗದ್ಗುರು ಸಿದ್ದಲಿಂಗ ರಾಜದೇಶಿ ಕೇಂದ್ರ ಶಿವಾಚಾರ್ಯ ಭಗವತ್ಪಾದ ಸ್ವಾಮೀಜಿ ಹೇಳಿದರು.ಸಮೀಪದ ಎಮ್ಮೆಹಟ್ಟಿ ಗ್ರಾಮದ ಶ್ರೀ ಉಜ್ಜಿಯಿನಿ ಮರುಳ ಸಿದ್ದೇಶ್ವರ ದೇವಸ್ಥಾನ ಸಮಿತಿ ವತಿಯಿಂದ ಸೋಮವಾರ ನೂತನ ಕಲ್ಲಿನ ದೇವಾಲಯ ಉದ್ಘಾಟನೆ ಹಾಗೂ ವಿಗ್ರಹ ಪ್ರಾಣ ಪ್ರತಿಸ್ಥಾಪನೆ ಮತ್ತು ಕಳಸಾರೋಹಣ ಪ್ರಯುಕ್ತ ಹಮ್ಮಿಕೊಂಡಿದ್ದ ಧರ್ಮಸಭೆಯನ್ನು ಉದ್ದೇಶಿಸಿ ಮಾತನಾಡಿ, ಪಾಶ್ಚಮಾತ್ಯ ದೇಶದ ಜನ ದೇವರಿಗಿಂತ ತಮ್ಮ ದೇಹವನ್ನು ಹೆಚ್ಚು ಪ್ರೀತಿಸುತ್ತಾರೆ. ಇಡೀ ಜಗತ್ತಿನಲ್ಲಿ ದೇವರಿಗಾಗಿ ಜಾತ್ರಾ ಮಹೋತ್ಸವ, ಪೂಜೆ, ಪುನಸ್ಕಾರ, ಉರುಳುಸೇವೆ, ಪಾದಯಾತ್ರೆ, ಉಪವಾಸ ಸೇರಿದಂತೆ ಹಲವು ಕಾರ್ಯಗಳನ್ನು ಮಾಡುವ ದೇಶವೆಂದರೆ ಅದು ಭಾರತ. ಮಠ, ಮಂದಿರಗಳಿಂದಾಗಿ ದೇಶದಲ್ಲಿ ಅಪರಾಧ ಸಂಖ್ಯೆಗಳು ಕಡಿಮೆಯಿದೆ. ಹಿಂದಿನ ಕಾಲದಲ್ಲಿ ಮಾತೇ ದೊಡ್ಡದು. ಆದರೆ, ಇತ್ತೀಚಿನ ದಿನಗಳಲ್ಲಿ ರಾಜಕಾರಣಿಗಳಿಂದಾಗಿ ಸುಳ್ಳು ಪ್ರವೃತ್ತಿ ಹೆಚ್ಚಾಗಿದೆ, ಮಠ ಮಂದಿರಗಳಲ್ಲಿ ಕಡಿಮೆ ಇದೆ ಎಂದರು.
ನಮ್ಮ ದೇಶದಲ್ಲಿ ಹೆಣ್ಣಿಗೆ ಹೆಚ್ಚಿನ ಮಹತ್ವ ನೀಡುವುದರ ಮೂಲಕ ದೇಶವನ್ನು ಭಾರತಾಂಬೆ ಎಂದು ಕರೆಯುತ್ತೇವೆ. ಹಿಂದಿನ ಕಾಲದಿಂದಲೂ ಮಹಿಳೆಯನ್ನು ತಾಯಿ ರೂಪದಲ್ಲಿ ನೋಡುವುದೇ ಭಾರತೀಯರ ಸಂಸ್ಕೃತಿ. ಮಹಿಳೆಯರಿಗೆ ಕಾನೂನಿಗಿಂತಲೂ ಹೆಚ್ಚಿನ ಮಹತ್ವವನ್ನು ಹಿಂದೂ ಸಮಾಜದಲ್ಲಿ ನೀಡಲಾಗುತ್ತಿದೆ. ದೇಶದಲ್ಲಿರುವ ಪ್ರತಿಯೊಂದು ನದಿಗೂ ಮಹಿಳೆಯರ ಹೆಸರನ್ನು ಇಡಲಾಗಿದೆ ಎಂದರು.ಬೆಂಗಳೂರಿನ ಗೋಸಾಯಿ ಮಠದ ಮರಾಠ ಜಗದ್ಗುರು ಮಂಜುನಾಥ ಭಾರತೀ ಸ್ವಾಮೀಜಿ ಮಾತನಾಡಿ, ಛತ್ರಪತಿ ಶಿವಾಜಿ ಮಾಹರಾಜರು ಕೇವಲ ಒಂದು ಸಮಾಜಕ್ಕೆ ಮಾತ್ರ ಸಿಮೀತವಲ್ಲ. ಸ್ವಾತಂತ್ರ್ಯ ಪೂರ್ವದಲ್ಲಿ ದೇಶದ ದೇವಸ್ಥಾನಗಳನ್ನು ಉಳಿಸಿದ ಕಿರ್ತಿ ಶಿವಾಜಿಗೆ ಸಲ್ಲುತ್ತದೆ. ಪ್ರತಿಯೊಬ್ಬರು ಸಮಾಜದ ಸಂಘಟನೆಗೆ ಮುಂದಾಗಬೇಕು. ಧರ್ಮದ ಸಿದ್ದಾಂತಗಳನ್ನು ಮೊದಲಾಗಿ ನಡವಳಿಕೆಗೆ ತರಬೇಕಿದೆ ಎಂದರು.
ದೇವಾಲಯ ಉದ್ಘಾಟನೆ ಪ್ರಯುಕ್ತ ಶ್ರೀ ಉಜ್ಜಿಯಿನಿ ಮರುಳ ಸಿದ್ದೇಶ್ವರ ದೇವಸ್ಥಾನ ಸಮಿತಿ ಹಾಗೂ ರೋಟರಿ ಕ್ಲಬ್ ವತಿಯಿಂದ ರಕ್ತದಾನ ಶಿಬಿರ ನಡೆಯಿತು. ಸುಮಾರು 88 ಜನ ರಕ್ತದಾನ ಮಾಡಿದರು.
ಸಂಸದ ಬಿ.ವೈ.ರಾಘವೇಂದ್ರ, ಶಾಸಕಿ ಶಾರದ ಪೂರ್ಯಾನಾಯ್ಕ್, ಮರಿಯೋಜಿರಾವ್, ಯಶವಂತರಾವ್ ಘೋರ್ಪಡೆ, ಡಾ. ಶ್ರೀನಿವಾಸ ಕರಿಯಣ್ಣ ಮಲ್ಲೇಶಪ್ಪ, ಆರ್. ಉಮೇಶ್, ಸಚಿನ್ ಸಿಂದ್ಯೆ, ದೇವೋಜಿರಾವ್, ಮುರಾರಿರಾವ್, ಕೃಷ್ಣಪ್ಪ, ಬಸವರಾಜ್ ಯು. ಮಲ್ಲೇಶರಾವ್ (ಕಗ್ಗಿ) ಪರಶುರಾಮ್, ತಿಪ್ಪೇಶ್ ರಾವ್, ಮಂಜುನಾಥ್, ನಾಗರಾಜ್, ಮಂಜುನಾಥ, ಸತೀಶ್, ಶೇಖರಪ್ಪ ಸೇರಿದಂತೆ ಎಮ್ಮೆಹಟ್ಟಿ ಗ್ರಾಮಸ್ಥರು ಇದ್ದರು.