ಚಿಕ್ಕಮಗಳೂರು ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಸ್ವಾತಂತ್ರ‍್ಯ ದಿನಾಚರಣೆ

ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು

ದೇಶವನ್ನು ನೂರಾರು ವರ್ಷದ ಆಳಿದ ಬ್ರಿಟೀಷರ ದೇಶವನ್ನು ಆಳುವ ಸಾಮರ್ಥ್ಯ ಭಾರತ ಇಂದು ಹೊಂದಿದೆ ಎಂದು ವಿಧಾನ ಪರಿಷತ್ ಸದಸ್ಯ ಡಾ.ಸಿ.ಟಿ.ರವಿ ಹೇಳಿದರು.

ಶನಿವಾರ ಚಿಕ್ಕಮಗಳೂರು ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಆಯೋಜಿಸಿದ್ದ 80ನೇ ಸ್ವಾತಂತ್ರ‍್ಯ ದಿನಾಚರಣೆಯಲ್ಲಿ ಮಾತನಾಡಿ ಬ್ರಿಟೀಷರ ಎಲ್ಲಾ ಆಕ್ರಮಣ ಸಮರ್ಥವಾಗಿ ಎದುರಿಸಿದ್ದ ಭಾರತ ಇಂದು ಎಲ್ಲಾ ಕ್ಷೇತ್ರಗಳಲ್ಲಿ ಹಿರಿಮೆ ಸಾಧಿಸಿದೆ. ಈಗ ಭಾರತಕ್ಕೆ ಬ್ರಿಟನ್ ದೇಶವನ್ನೇ ಆಳುವ ಸಾಮರ್ಥ್ಯ ಬಂದಿದೆ ಎಂದರು.

೧೮೫೭ ರ ಸ್ವಾತಂತ್ರ‍್ಯ ಸಂಗ್ರಾಮ ಬ್ರಿಟೀಷರನ್ನು ನಡುಗಿಸಿತ್ತು. ಇನ್ನೂ ಈ ದೇಶ ಆಳುವುದಕ್ಕೆ ಸಾಧ್ಯವಿಲ್ಲ ಎನ್ನುವಂತ ಮನಸ್ಥಿತಿಗೆ ಬಂದಿದ್ದರು. ಆಜಾದ್ ಹಿಂದ್ ಫೌಜ್ ನಂತ ಸೈನ್ಯ ಕಟ್ಟಿ ನೀವು ನನಗೆ ರಕ್ತ ಕೊಡಿ, ನಾನು ನಿಮಗೆ ಸ್ವಾತಂತ್ರ‍್ಯ ಕೊಡುತ್ತೇನೆ ಎಂದು ಹೇಳಿದ್ದ ಸುಭಾಷ್ ಚಂದ್ರ ಬೋಸ್ ಬ್ರಿಟೀಷರ ವಿರುದ್ಧ ನೇರ ಯುದ್ದವನ್ನೇ ಸಾರಿದ್ದರು. ಭಗತ್ ಸಿಂಗ್, ಚಂದ್ರಶೇಖರ್ ಆಜಾದ್, ರಾಮ್ ಪ್ರಸಾದ್ ಬಿಸ್ಮಿಲ್ ಈ ತರಹದ ಸಹಸ್ರಾರು ಜನ ಕ್ರಾಂತಿಕಾರಿಗಳು ಭಾರತದ ಸ್ವತಂತ್ರ ಬಿಡುಗಡೆಗೆ ಜೀವವನ್ನೇ ಅರ್ಪಿಸಿದ್ದಾರೆ ಎಂದರು. ಗಾಂಧೀಜಿ ಸರಳ, ಖಾದಿ ಮತ್ತು ಸ್ವದೇಶಿ ನೀತಿ ಜನ ಸಾಮಾನ್ಯರಿಗೂ ಮುಟ್ಟಿತ್ತು. ಖಾದಿ ಧರಿಸಿದರೆ ಸ್ವಾತಂತ್ರ‍್ಯ ಹೋರಾಟ ಗಾರರು ಎಂಬ ಭಾವನೆ ಮೂಡಿಸುವಂತಾಯಿತು. ಉಪ್ಪಿನ ಸತ್ಯಾಗ್ರಹ ದೊಡ್ಡ ಕ್ರಾಂತಿ ತರ ದಿದ್ದರೂ ಜನ ಸಾಮಾನ್ಯರಲ್ಲಿ ಉಪ್ಪಿನ ಉಪಯೋಗದ ಮಹತ್ವ ಸಾರಿತು. ಈ ಮೂಲಕ ಜನ ಸಾಮಾನ್ಯ ರಿಗೆ ನಾವು ಸ್ವಾತಂತ್ರ‍್ಯ ಹೋರಾಟದ ಭಾಗ ಎಂಬಂತಹ ಭಾವನೆ ಮುಟ್ಟಿಸುವಲ್ಲಿ ಯಶಸ್ವಿ ಯಾಯಿತು ಎಂದರು.ಒಂದು ಕಡೆ ಕ್ರಾಂತಿ ಕಾರಿಗಳು, ಇನ್ನೊಂದು ಕಡೆ ನೇರ ಯುದ್ದ ಸಾರಿದವರು. ಮತ್ತೊಂದು ಕಡೆ ಅಹಿಂಸಾ ಸತ್ಯಾಗ್ರಹದ ಮೂಲಕ ಜನ ಮಾನಸದಲ್ಲಿ ಸ್ವಾತಂತ್ರ‍್ಯದ ಕಿಚ್ಚಿಗೆ ಕಾರಣರಾದರು. ಇವರೆಲ್ಲರ ಸಂಗ್ರಾಮ ಹೋರಾಟ, ಬಲಿದಾನ, ರಕ್ತದ ಅರ್ಪಣೆ ಕಾರಣಕ್ಕೆ ದೇಶ ಸ್ವತಂತ್ರವಾಗಿದೆ ಎಂದರು.


ಇಷ್ಟು ದೊಡ್ಡ ಭಾರತ ಯಾಕೆ ಬ್ರಿಟೀಷರ ದಾಸ್ಯಕ್ಕೆ ತುತ್ತಾಯಿತು ಎಂಬುದಕ್ಕೆ ಮೂಲ ಕಾರಣ ನಮ್ಮೊಳಗಿನ ಒಡಕು ಎಂದು ಹೇಳಿದರು.ಈ ವೇಳೆ ನಗರ ಮಂಡಲ ಅಧ್ಯಕ್ಷ ಕೆ.ಎಸ್.ಪುಷ್ಪರಾಜ್, ರಾಜ್ಯ ಬಿಜೆಪಿ ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ಎಚ್.ಸಿ. ಕಲ್ಮರುಡಪ್ಪ, ಯುವ ಮೋರ್ಚಾ ಜಿಲ್ಲಾ ಅಧ್ಯಕ್ಷ ಸಂತೋಷ್ ಕೋಟ್ಯಾನ್, ಪ್ರಧಾನ ಕಾರ್ಯ ದರ್ಶಿ ಸಚಿನ್, ಶಶಿ ಆಲ್ದೂರು, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಕನಕರಾಜ ಅರಸ್, ವೀಣಾ ರತ್ನಾಕರ ಶೆಟ್ಟಿ, ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ರವೀಂದ್ರ ಬೆಳವಾಡಿ, ಡಾ.ನರೇಂದ್ರ, ಮಧುಕುಮಾರ ರಾಜ ಅರಸ್, ಹಿರಿಯ ಮುಖಂಡ ಕೋಟೆ ರಂಗನಾಥ್, ಎಚ್.ಎಸ್. ಪುಟ್ಟೇಗೌಡ, ಅನಿಲ್ ಕುಮಾರ್, ಜಿಪಂ ಮಾಜಿ ಉಪಾಧ್ಯಕ್ಷ ಬೀಕನಹಳ್ಳಿ ಸೋಮಶೇಖರ್, ಜಿಲ್ಲಾ ಬಿಜೆಪಿ ವಕ್ತಾರ ಹಿರೇಮಗಳೂರು ಪುಟ್ಟಸ್ವಾಮಿ ಸೇರಿದಂತೆ ಮೊದಲಾದವರಿದ್ದರು.