ಸಾರಾಂಶ
ಕನ್ನಡಪ್ರಭ ವಾರ್ತೆ ಕೊರಟಗೆರೆ
ವಿಶ್ವದ ೧೪೫ ದೇಶಗಳಲ್ಲಿ ಭಾರತ ದೇಶದ ಯೋಗ ಪರಿಚಯಿಸಿ, ನಮ್ಮ ಸಂಸ್ಕೃತಿ ತಿಳಿಸುವ ಪ್ರಯತ್ನ ಮಾಡಿದ್ದೇನೆ. ಜೂ.೨೧ರಂದು ವಿಶ್ವದ ೧೭೫ ದೇಶಗಳಲ್ಲಿ ನಮ್ಮ ಯೋಗ ದಿನಾಚರಣೆ ಏಕಕಾಲದಲ್ಲೇ ನಡೆಯಲಿದೆ ಎಂದು ಅಂತಾರಾಷ್ಟ್ರೀಯ ಯೋಗಪಟು ಭಾಗೀರಥಿ ಕನ್ನಡತಿ ತಿಳಿಸಿದರು.ಕೊರಟಗೆರೆ ಪಟ್ಟಣದ ಶ್ರೀರಾಘವೇಂದ್ರ ಇಂಟರ್ ನ್ಯಾಷನಲ್ ಶಾಲೆಯ ಆವರಣದಲ್ಲಿ ಕೆಎಸ್ಆರ್ಪಿ ಘಟಕ, ಸಾರಂಗ ಅಕಾಡೆಮಿ, ಪ್ರಿಯದರ್ಶಿನಿ ಕಾಲೇಜು ಮತ್ತು ರಾಘವೇಂದ್ರ ಶಾಲೆಯ ಸಹಯೋಗದೊಂದಿಗೆ ಶುಕ್ರವಾರ ಏರ್ಪಡಿಸಲಾಗಿದ್ದ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಆರ್ಯುವೇದ ಮತ್ತು ಯೋಗದಲ್ಲಿ ೩ ಡಾಕ್ಟರೇಟ್ ಪದವಿ ಪಡೆದಿದ್ದೇನೆ. ೪ ಅಂತಾರಾಷ್ಟ್ರೀಯ ಡಾಕ್ಟರೇಟ್ ಪದವಿ ಬಂದಿವೆ. ಜಮ್ಮು ಕಾಶ್ಮೀರದಲ್ಲಿ ಸೈನಿಕರು ಮತ್ತು ಉನ್ನಟಮಟ್ಟದ ಪೊಲೀಸ್ ಅಧಿಕಾರಿಗಳಿಗೆ ಯೋಗದ ತರಬೇತಿ ನೀಡಿದ್ದೇನೆ. ಯೋಗವು ಮನುಷ್ಯನ ದೈಹಿಕ ಮತ್ತು ಮಾನಸಿಕ ಶಕ್ತಿ ವೃದ್ಧಿಸಲಿದೆ ಎಂದು ತಿಳಿಸಿದರು.ಸಾರಂಗ ಅಕಾಡೆಮಿಯ ಕಾರ್ಯದರ್ಶಿ ಅಜಯ್ಕುಮಾರ್ ಮಾತನಾಡಿ, ಯೋಗವು ಮನಸ್ಸು ಮತ್ತು ದೇಹವನ್ನು ಮಾತ್ರವಲ್ಲದೇ ಸಂಯಮ ಮತ್ತು ಸಾರ್ಥಕತೆಯನ್ನು ಒಗ್ಗೂಡಿಸಲಿದೆ. ವಿದ್ಯಾರ್ಥಿಗಳ ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಯೋಗ ಸಹಕಾರಿ ಆಗಲಿದೆ. ನಮ್ಮ ಶಾಲೆಗೆ ಅಂತಾರಾಷ್ಟ್ರೀಯ ಯೋಗಪಟು ಬಾಗೀರಥಿ ಕನ್ನಡತಿ ಬಂದಿರುವುದು ಹೆಮ್ಮೆಯ ವಿಷಯ ಎಂದು ಹೇಳಿದರು.
ಸಾರಂಗ ಅಕಾಡೆಮಿಯ ಸಿಇಒ ರುದ್ರೇಶ್.ಕೆ.ಎನ್ ಮಾತನಾಡಿ, ಭಾರತ ದೇಶದ ಸಂಸ್ಕೃತಿ ಯೋಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಆಚರಣೆ ಆಗುತ್ತಿರುವುದು ಹೆಮ್ಮೆಯ ವಿಷಯ. ಉತ್ತರಾರ್ಧ ಗೋಳದಲ್ಲಿ ಅತ್ಯಂತ ಹೆಚ್ಚು ಹಗಲು ಇರುವ ದಿನವಾದ ಜೂ.೨೧ರಂದೇ ವಿಶ್ವದಾದ್ಯಂತ ಯೋಗ ದಿನಾಚರಣೆ ನಡೆಯಲಿದೆ. ನಮ್ಮ ದೇಶದ ಸಂಸ್ಕೃತಿಯನ್ನು ವಿಶ್ವಕ್ಕೆ ಇನ್ನಷ್ಟು ತಿಳಿಸುವುದು ನಮ್ಮೆಲ್ಲರ ಕರ್ತವ್ಯ ಎಂದರು.ಕಾರ್ಯಕ್ರಮದಲ್ಲಿ ಯೋಗ ಉಪನ್ಯಾಸಕಿ ಜಮೀಲಾ ಬೇಗಂ, ರಾಘವೇಂದ್ರ, ಪ್ರಾಂಶುಪಾಲರಾದ ಬೆನ್ನಿ, ಉಪನ್ಯಾಸಕರಾದ ಅಂಜುವನ, ಸಿಂಧುಶ್ರೀ, ನೂರ್ ಆಸಿಯಾ, ಮೇಘಶ್ರೀ, ನೂರ್ ಸಾಧೀಯಾ, ವೆಂಕಟೇಶ್, ಜಯಂತ್, ರೇಣುಕೇಶ್, ಮಲ್ಲಿ, ಕಾಂತರಾಜು ಸೇರಿ ಇತರರು ಇದ್ದರು.
೧೫ಕ್ಕೂ ಅಧಿಕ ಯೋಗಾಸನ:ಪ್ರಿಯದರ್ಶಿನಿ ಕಾಲೇಜು ಮತ್ತು ರಾಘವೇಂದ್ರ ಶಾಲೆಯ ೨೦೦ಕ್ಕೂ ಅಧಿಕ ಮಕ್ಕಳಿಗೆ ಅಂತಾರಾಷ್ಟ್ರೀಯ ಯೋಗಪಟು ಭಾಗೀರಥಿ ಕನ್ನಡತಿ ೧೫ಕ್ಕೂ ಅಧಿಕ ಯೋಗಾಸನಗಳನ್ನು ತರಬೇತಿಯ ಮೂಲಕ ತಿಳಿಸಿಕೊಟ್ಟರು. ಪ್ರತಿನಿತ್ಯದ ಯೋಗ ಆರೋಗ್ಯದ ಜೊತೆ ಶೈಕ್ಷಣಿಕ ಶಕ್ತಿಯನ್ನು ನೀಡಲಿದೆ ಎಂದು ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಿದರು.
ವಿದ್ಯಾರ್ಥಿಗಳಿಗೆ ಯೋಗ ಶಿಕ್ಷಣದ ಬಗ್ಗೆ ಅರಿವು ಅತ್ಯಗತ್ಯ. ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಯೋಗ ಅತ್ಯಂತ ಉಪಯುಕ್ತ. ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಜೂ.೨೧ಕ್ಕೆ ಮಾತ್ರ ಸೀಮಿತವಾಗದೇ ನಮ್ಮ ದೇಶದ ಪ್ರತಿ ಶಾಲೆಯಲ್ಲೂ ಪ್ರತಿನಿತ್ಯವೂ ಯೋಗ ತರಬೇತಿ ಅವಶ್ಯ.ಹಮ್ಜಾ ಹುಸೇನ್, ೧೨ನೇ ಕೆಎಸ್ಆರ್ಪಿ ಕಮಾಡೆಂಟ್ ಎಸ್ಪಿ. ತುಂಬುಗಾನಹಳ್ಳಿ