ಸಾರಾಂಶ
ಕನ್ನಡಪ್ರಭ ವಾರ್ತೆ ಧಾರವಾಡ
ಭಾರತದ ಆರ್ಥಿಕತೆಯನ್ನು ಐದು ಟ್ರಿಲಿಯನ್ಗೆ ಒಯ್ಯುವ ಗುರಿ ಇದ್ದು, ಅದಕ್ಕಾಗಿ ಯುವಕರು ತಮ್ಮ ವಿದ್ಯೆ ಹಾಗೂ ಶ್ರಮವನ್ನು ಮತ್ತಷ್ಟು ಹೆಚ್ಚಿಸಬೇಕಿದೆ ಎಂದು ಇಂಡೋ ಫ್ರೆಂಚ್ ಸೆಂಟರ್ ಫಾರ್ ಪ್ರಮೋಷನ್ ಆಫ್ ಅಡ್ವಾನ್ಸಡ್ ರಿಸರ್ಚ್ ನಿರ್ದೇಶಕ ಪ್ರೊ. ನಿತಿನ್ ಸೇಠ್ ಹೇಳಿದರು.ಕರ್ನಾಟಕ ವಿಶ್ವವಿದ್ಯಾಲಯದ ಗಾಂಧೀ ಭವನದಲ್ಲಿ ಸೋಮವಾರ ನಡೆದ 73ನೇ ವಾರ್ಷಿಕ ಘಟಿಕೋತ್ಸವದಲ್ಲಿ ಭಾಷಣ ಮಾಡಿದ ಅವರು, ಪ್ರಸ್ತುತ ಭಾರತ ಕೃಷಿ ಮತ್ತು ವೈದ್ಯಕೀಯ ಕ್ಷೇತ್ರದಲ್ಲಿ ಮೊದಲ ಸ್ಥಾನದಲ್ಲಿದೆ. ಹೀಗೆ, ಎಲ್ಲ ಕ್ಷೇತ್ರಗಳಲ್ಲೂ ವಿಶ್ವಗುರುವಾಗಬೇಕಿದೆ. ಅದಕ್ಕಾಗಿ ಯುವ ಜನತೆ ತಾವು ಕಲಿತ ವಿದ್ಯೆಯನ್ನು ಪ್ರಭಾವಿಯಾಗಿ ಬಳಸಬೇಕು ಎಂದರು.
ಮಹತ್ವಾಕಾಂಕ್ಷೆಯ ಮತ್ತು ಸ್ವಾವಲಂಬಿ ಭಾರತವನ್ನು ನಿರ್ಮಿಸುವಲ್ಲಿ ವಿದ್ಯಾರ್ಥಿಗಳು ಪ್ರಮುಖ ಪಾತ್ರವಹಿಸಲಿದ್ದಾರೆ ಎನ್ನುವ ವಿಶ್ವಾಸವಿದೆ. ಮೇಕ್-ಇನ್-ಇಂಡಿಯಾ ನಿಂದ ಮೇಡ್-ಬೈ-ಇಂಡಿಯಾಗೆ ಭಾರತದ ಪರಿವರ್ತನೆಗಾಗಿ ಪ್ರತಿಯೊಬ್ಬರು ಶ್ರಮಿಸಬೇಕು. ಘಟಿಕೋತ್ಸವ ಸಮಾರಂಭ ಶೈಕ್ಷಣಿಕ ಜಗತ್ತಿನಲ್ಲಿ ಹೆಚ್ಚಿನ ಪ್ರಾಮುಖ್ಯತೆಯನ್ನು ಹೊಂದಿದೆ. ಇದು ವಿದ್ಯಾರ್ಥಿಗಳಿಗೆ ಮಾತ್ರವಲ್ಲದೆ ಪೋಷಕರು, ಕುಟುಂಬ ಮತ್ತು ಶಿಕ್ಷಕರು, ಪ್ರತಿಯೊಬ್ಬರಿಗೂ ವರ್ಷಗಳ ಕಠಿಣ ಪರಿಶ್ರಮ ಮತ್ತು ಸಮರ್ಪಣೆಯ ಪರಾಕಾಷ್ಠೆಯನ್ನು ಸಂಕೇತಿಸುತ್ತದೆ. ಇದು ಸಂಭ್ರಮಾಚರಣೆ, ಮನ್ನಣೆ ಮತ್ತು ಸಾಧನೆಯ ಕ್ಷಣವಾಗಿದೆ ಎಂದರು.ನಾವು ಹೆಮ್ಮೆಪಡುವ ವಿದ್ಯಾರ್ಥಿಗಳು ಸೇರಿದಂತೆ ರೈತರು, ಶಿಕ್ಷಕರು, ವೈದ್ಯರು, ವಿಜ್ಞಾನಿಗಳು ತಮ್ಮ ಜ್ಞಾನ, ಕಠಿಣ ಪರಿಶ್ರಮ ಮತ್ತು ನಿರಂತರ ಪ್ರಯತ್ನಗಳು ನಿಮ್ಮನ್ನು ಎಲ್ಲಿಗೆ ಕೊಂಡೊಯ್ಯುತ್ತವೆ ಎಂಬುದನ್ನು ಲೆಕ್ಕಿಸದೆ, ಜೀವನದಲ್ಲಿ ಉದಾರ ಮತ್ತು ಗೌರವಾನ್ವಿತರಾಗಿರಲು ಮರೆಯದಿರಿ. ಈ ರಾಷ್ಟ್ರದ ಬೆಳವಣಿಗೆ ಮತ್ತು ಅಭಿವೃದ್ಧಿಯಲ್ಲಿ ವಿದ್ಯಾರ್ಥಿಗಳು ತಮ್ಮ ಹೆಜ್ಜೆಯನ್ನು ಇರಿಸಬೇಕು. ವಿಶ್ವವಿದ್ಯಾಲಯಕ್ಕೆ ಮತ್ತು ದೇಶಕ್ಕೆ ಕೀರ್ತಿ ತರಬೇಕು. ಯಶಸ್ಸು ಮತ್ತು ವೈಫಲ್ಯದ ಬಾಂಧವ್ಯವನ್ನು ತ್ಯಜಿಸಿ, ನಿಮ್ಮ ಕರ್ತವ್ಯ ನಿರ್ವಹಣೆಯಲ್ಲಿ ದೃಢವಾಗಿರಬೇಕು. ಅಂತಹ ಸಮಚಿತ್ತತೆಯನ್ನು ಯೋಗ ಎಂದು ಕರೆಯಲಾಗುತ್ತದೆ ಎಂದರು.