ಕನ್ನಡಪ್ರಭ ವಾರ್ತೆ ಬೆಂಗಳೂರು
ಬಾಹ್ಯಾಕಾಶಯಾನದಲ್ಲಿ ಅಡೆತಡೆಗಳು ಸಹಜ. ಆದರೆ, ಭಾರತವು ತನ್ನ ಸಾಮರ್ಥ್ಯದಿಂದಾಗಿ ಅವೆಲ್ಲವುಗಳನ್ನೂ ಮೀರಿ ಯಶಸ್ಸು ಸಾಧಿಸಿದೆ ಎಂದು ಗಗನಯಾತ್ರಿ ಶುಭಾಂಶು ಶುಕ್ಲಾ ಅಭಿಪ್ರಾಯಪಟ್ಟರು.ನಗರದ ಹೋಟೆಲ್ವೊಂದರಲ್ಲಿ ಯುಎಸ್-ಇಂಡಿಯಾ ಬಿಸಿನೆಸ್ ಫೋರಂನಿಂದ ಆಯೋಜಿಸಿದ್ದ ಬಾಹ್ಯಾಕಾಶ ಸಹಯೋಗ ಕುರಿತ ವಿದ್ಯಾರ್ಥಿಗ ಜೊತೆಗಿನ ಸಂವಾದದಲ್ಲಿ ಮಾತನಾಡಿ, ಅಮೆರಿಕಾ, ರಷ್ಯಾ, ಚೀನಾದ ನಂತರ ಭಾರತವು ಸ್ವತಂತ್ರವಾಗಿ ಬಾಹ್ಯಾಕಾಶಕ್ಕೆ ಮಾನವನನ್ನು ಕಳುಹಿಸಿದ ಹೆಗ್ಗಳಿಕೆಗೆ 2027ರಲ್ಲಿ ಪಾತ್ರವಾಗಲಿದೆ. ಬಾಹ್ಯಾಕಾಶ ಕ್ಷೇತ್ರದಲ್ಲಿ ಇದೊಂದು ಮೈಲುಗಲ್ಲಾಗಿದ್ದು, ನಾವೆಲ್ಲರೂ ಹೆಮ್ಮೆಪಡುವ ಸಂಗತಿಯಾಗಿದೆ. ವಿಕಸಿತ ಭಾರತದ ಪರಿಣಾಮದಿಂದ ಇದು ಸಾಧ್ಯವಾಗಲಿದೆ ಎಂದು ಬಣ್ಣಿಸಿದರು.
ಭೂಮಿಯೇ ಮನೆ:ನಾವು ಭೂಮಿಯಲ್ಲಿದ್ದಾಗ ಪೋಷಕರು, ಶಾಲೆ-ಕಾಲೇಜು, ನಾವು ವಾಸ ಮಾಡುವ ಪ್ರದೇಶದಿಂದ ಗುರುತಿಸಿಕೊಳ್ಳುತ್ತೇವೆ. ಆದರೆ, ಗಗನಯಾನದಲ್ಲಿ ಭೂಮಿಯೇ ನಮ್ಮ ಮನೆಯಾಗುತ್ತದೆ. ಅಲ್ಲಿ ನಾವು ಯಾವ ದೇಶಕ್ಕೆ ಸೇರಿದವರು ಎಂಬ ಪ್ರಶ್ನೆ ಉದ್ಭವಿಸುವುದಿಲ್ಲ. ಭೂ ಕಕ್ಷೆಯನ್ನು ಮೀರಿ ನಾವು ಚಂದ್ರ. ಮಂಗಳ ಗ್ರಹಗಳಲ್ಲಿ ಇರುವುದನ್ನು ಅನ್ವೇಷಿಸಲು ಪ್ರಾರಂಭಿಸುತ್ತೇವೆ. ಇದೊಂದು ಅದ್ಭುತ ಅನುಭವವಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಗಗನಯಾತ್ರಿ ಪ್ರಶಾಂತ್ ನಾಯರ್ ಮಾತನಾಡಿ, ದೇಶದ ಮಾನವಸಹಿತ ಗಗನಯಾನ ಯೋಜನೆ ವಿಳಂಬವಾಗುತ್ತಿದೆ ಎಂದು ಹೇಳಬೇಡಿ. ಏನು ಆಗಬೇಕೋ ಅದೆಲ್ಲಾ ಅಚ್ಚುಕಟ್ಟಾಗಿ ನಡೆಯುತ್ತಿದ್ದು, ಗಗನಯಾನವು ಯಶಸ್ವಿಯಾಗಿ ನಡೆಯಲಿದೆ. ಭಾರತ ಗಗನಯಾನ ಕೈಗೊಳ್ಳುತ್ತಿದೆ ಎಂದರೆ ಅದರಲ್ಲಿ ವಿಭಿನ್ನತೆ ಇರುತ್ತದೆ ಎಂದು ತಿಳಿಸಿದರು.
ಹಲವು ಕಾಲೇಜುಗಳ ವಿದ್ಯಾರ್ಥಿಗಳು ಸಂವಾದದಲ್ಲಿ ಪಾಲ್ಗೊಂಡಿದ್ದರು. ಚೆನ್ನೈನಲ್ಲಿರುವ ಅಮೆರಿಕಾ ಕಾನ್ಸುಲೇಟ್ ಜನರಲ್ ಎರಿಕ್ ಹಟ್ಟನ್ ಉಪಸ್ಥಿತರಿದ್ದರು.