ಚನ್ನಗಿರಿ: ಭಾರತ ದೇಶವು ದೇವರು ಧರ್ಮದ ಆಧಾರದ ಮೇಲೆ ನಿಂತಿರುವ ಪ್ರದೇಶವಾಗಿದ್ದು, ಸಾವಿರಾರು ವರ್ಷಗಳಿಂದಲೂ ಈ ಹಿಂದೂ ಧರ್ಮದ ಮೇಲೆ ಅನ್ಯ ಧರ್ಮಿಯರು ಅತಿಕ್ರಮಣ ಮಾಡಿದರೂ ಸಹಾ ಇಂದಿಗೂ ಹಿಂದೂ ಧರ್ಮ ಗಟ್ಟಿತನದಲ್ಲಿ ನಿಂತಿದೆ ಎಂದು ಹಿರೇಮಠದ ಶ್ರೀ ಕೇದಾರಲಿಂಗ ಶಿವಶಾಂತವೀರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಶನಿವಾರ ತಾಲೂಕಿನ ವಿ.ರಾಮೇನಹಳ್ಳಿ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ಶ್ರೀ ಆಂಜನೇಯ ಸ್ವಾಮಿ ದೇವಾಯಲದಲ್ಲಿ ಶ್ರೀ ಆಂಜನೇಯಸ್ವಾಮಿಯ ನೂತನ ವಿಗ್ರಹದ ಪ್ರಾಣಪ್ರತಿಷ್ಠಾಪನೆ ನೆರವೇರಿಸಿ ಅವರು ಮಾತನಾಡಿದರು.ಹಿಂದೂ ಧರ್ಮದಲ್ಲಿ ದೇವರು ಮತ್ತು ಧರ್ಮ ಒಂದು ನಾಣ್ಯದ ಎರಡು ಮುಖಗಳಾಗಿದ್ದು, ಈ ಹಿಂದೂ ಧರ್ಮದ ಮೇಲೆ ಅನೇಕ ಅನ್ಯ ಧರ್ಮದ ರಾಜ-ಮಹಾರಾಜರು ಆಕ್ರಮಣ ಮಾಡಿದರೂ, ಹಿಂದೂ ಧರ್ಮ ತನ್ನ ಘಟ್ಟಿತನವನ್ನು ಇಂದಿಗೂ ಉಳಿಸಿಕೊಂಡಿದೆ ಎನ್ನುವುದಕ್ಕೆ ಈ ದೇವಾಲಯಗಳೇ ಸಾಕ್ಷಿಯಾಗಿವೆ ಎಂದರು.
ಪ್ರತಿಯೊಬ್ಬರ ಅಂತರಂಗದಲ್ಲಿ ಅಹಂಕಾರ, ಹಮ್ಮು, ಬಿನ್ನುಗಳನ್ನು ಆಳಿಯದಿದ್ದರೆ ಯಾರು ಪ್ರೀತಿ ಮಮತೆಯಿಂದ ಬಾಳಲು ಸಾಧ್ಯವಿಲ್ಲ. ಸುಖ ಸಂತಸ ಆರೋಗ್ಯ ಪೂರ್ಣತೆಯಿಂದ ಬಾಳಲು ಆಸ್ತಿ, ವಜ್ರ, ವೈಡೋರ್ಯ ಬೇಕಿಲ್ಲ ಎಂದರು.ದೇವಾಲಯಗಳನ್ನು ನಿರ್ಮಿಸಿದರೆ ಸಾಲದು. ಪ್ರತಿಯೊಬ್ಬರೂ ತಮ್ಮ ದೈನಂದಿನ ಕೆಲಸಗಳನ್ನು ಪ್ರಾರಂಭಿಸುವ ಮುನ್ನ ದೇವಾಲಯಕ್ಕೆ ಭೇಟಿನೀಡಿ ದೇವರ ದರ್ಶನವನ್ನು ಪಡೆದು ಹೋದಾಗ ಶ್ರೇಯಸ್ಸು, ಯಶಸ್ಸು ಲಭಿಸುವುದು ಎಂದು ತಿಳಿಸಿದರು.
ಧಾರ್ಮಿಕ ಕಾರ್ಯಕ್ರಮದ ಪೂಜಾ ಕೈಕರ್ಯವನ್ನು ಹೊದಿಗೆರೆಯ ಬೂದಿಸ್ವಾಮಿ ಅವರು ನಡೆಸಿಕೊಟ್ಟರು. ಗ್ರಾಮದ ಪ್ರಮುಖರಾದ ನಾಗರಾಜಪ್ಪ, ಸುರೇಶ್, ಹಾಲೇಶ್, ಮಂಜುನಾಥ್, ನಿತಿನ್ ಸೇರಿದಂತೆ ಗ್ರಾಮಸ್ಥರು ಹಾಜರಿದ್ದರು.