ಗಾಂಧೀಜಿಗಿಂತ ಮೊದಲೇ ಶಾಂತಿ ಬಯಸಿದ್ದ ಭಾರತ

| Published : Jun 08 2025, 01:24 AM IST / Updated: Jun 08 2025, 01:25 AM IST

ಸಾರಾಂಶ

ದಾವಣಗೆರೆ: ಮಹಾತ್ಮ ಗಾಂಧೀಜಿ ಶಾಂತಿ ಸಾರುವುದಕ್ಕೂ ಮೊದಲೇ ಶಾಂತಿ ಬಯಸುತ್ತಾ ಬಂದ ದೇಶ ನಮ್ಮದಾಗಿದ್ದು, ಈ ನೆಲದ ಗುಣವೇ ಶಾಂತಿ, ಸಹನೆ, ಸಹಬಾಳ್ವೆಯಾಗಿದೆ ಎಂದು ಹಿರಿಯ ಸಾಹಿತಿ, ಅಂಕಣಕಾರ ಪ್ರೊ.ಪ್ರೇಮಶೇಖರ ಉಡುಪಿ ತಿಳಿಸಿದರು.

ದಾವಣಗೆರೆ: ಮಹಾತ್ಮ ಗಾಂಧೀಜಿ ಶಾಂತಿ ಸಾರುವುದಕ್ಕೂ ಮೊದಲೇ ಶಾಂತಿ ಬಯಸುತ್ತಾ ಬಂದ ದೇಶ ನಮ್ಮದಾಗಿದ್ದು, ಈ ನೆಲದ ಗುಣವೇ ಶಾಂತಿ, ಸಹನೆ, ಸಹಬಾಳ್ವೆಯಾಗಿದೆ ಎಂದು ಹಿರಿಯ ಸಾಹಿತಿ, ಅಂಕಣಕಾರ ಪ್ರೊ.ಪ್ರೇಮಶೇಖರ ಉಡುಪಿ ತಿಳಿಸಿದರು.

ನಗರದ ಗುಂಡಿ ಮಹಾದೇವಪ್ಪ ಕಲ್ಯಾಣ ಮಂಟಪದಲ್ಲಿ ಶನಿವಾರ ಅಖಿಲ ಭಾರತ ಸಾಹಿತ್ಯ ಪರಿಷದ್‌ನ 4ನೇ ರಾಜ್ಯಮಟ್ಟದ ಎರಡು ದಿನಗಳ ಅಧಿವೇಶನ ಸಾಹಿತ್ಯದಲ್ಲಿ ಸ್ವತ್ವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸಿಂಧೂ ನಾಗರಿಕತೆಯ ನೆಲದ ಗುಣವೇ ಸಹನೆ, ಶಾಂತಿ, ಸಹಬಾಳ್ವೆಯಾಗಿದ್ದರಿಂದ ಇಲ್ಲಿ ಹಂಚಿ ತಿನ್ನುವ ಮನೋಭಾವದ ಜನರಿದ್ದಾರೆ ಎಂದರು.

ಯುದ್ಧ ಸಾರುವ ಮನಸ್ಥಿತಿಗಿಂದಲೂ ಶಾಂತಿ ಬಯಸುವ ಸ್ವಭಾವ ನಮ್ಮ ದೇಶದ್ದು, ನಮ್ಮ ಜನರದ್ದಾಗಿದೆ. ಭಾರತವು ಸದಾ ಶಾಂತಿಪ್ರಿಯ ರಾಷ್ಟ್ರವಾಗಿದ್ದು, ಸಿಂಧೂ, ಗಂಗಾ ನದಿಗಳ ವಿಶಾಲ ಬಯಲು ಪ್ರದೇಶವಾಗಿರುವುದರಿಂದ ಅಂತಹದ್ದೇ ವಿಶಾಲ ಮನೋಭಾವದ ನಾಗರಿಕತೆಯನ್ನೇ ಇಲ್ಲಿನ ನಾಗರಿಕರೂ ತಲ ತಲಾಂತರದಿಂದಲೂ ಮೈಗೂಡಿಸಿಕೊಂಡೇ ಬಂದಿದ್ದಾರೆ ಎಂದು ಹೇಳಿದರು.

ಆಹಾರ, ನೀರಿಗೆ, ಬದುಕಿಗಂತೂ ಇಲ್ಲಿ ಎಂದಿಗೂ ಕೊರತೆಯಂತೂ ಇಲ್ಲ. ಹಾಗಾಗಿ ಇಲ್ಲಿನ ಜನರಲ್ಲಿ ಹಂಚುವ ಸ್ವಭಾವ ಸಹಜವಾಗಿಯೇ ಬೆಳೆದು ಬಂದಿದೆ. ಆದರೆ, ಪಶ್ಚಿಮ ಏಷ್ಯಾದ ರಾಷ್ಟ್ರಗಳಲ್ಲಿ ಎಲ್ಲದಕ್ಕೂ ಕೊರತೆಯೇ ಇರುವುದರಿಂದ ಯುದ್ಧ ಮಾಡಿಯೇ ಪಡೆದುಕೊಳ್ಳುವಂತಹ ಸ್ವಭಾವವನ್ನು ಮೈಗೂಡಿಸಿಕೊಂಡರು. ಭಾರತೀಯರಿಗೂ ಹಾಗೂ ಪಶ್ಚಿಮ ಏಷ್ಯಾದ ಜನರ ಮಧ್ಯೆ ಇರುವ ವ್ಯತ್ಯಾಸವೇ ಇದು ಎಂದು ವಿವರಿಸಿದರು.

ವಸುದೈವ ಕುಟುಂಬಕಂ ಎಂಬ ಮನೋಭಾವವನ್ನು ಭಾರತ ಹೊಂದಿರುವುದರಿಂದಲೇ ಮುಸ್ಲಿಂ, ಕ್ರೈಸ್ತ, ಜೈನ ಹೀಗೆ ಪ್ರತಿಯೊಬ್ಬರನ್ನೂ ಒಂದುಗೂಡಿಸಿಕೊಂಡು, ರಾಜಕೀಯವಾಗಿಯೂ ಅಂತಹವರಿಗೆ ಪಾಲು ಕೊಟ್ಟ ನೆಲ ಇದು. ಆದರೆ, ಪಶ್ಚಿಮ ಏಷ್ಯಾದ ದೇಶಗಳಾದ ಪಾಕಿಸ್ತಾನ, ಅರಬ್ ರಾಷ್ಟ್ರಗಳು ಹಾಗಲ್ಲ. ಯಾವಾಗ ತಮ್ಮ ಜನಸಂಖ್ಯೆ ಹೆಚ್ಚಾಗುವುದೋ ಅವಾಗಲೆಲ್ಲಾ ಇಂತಹವರು ಸಂಪನ್ಮೂಲವನ್ನು, ಪ್ರದೇಶವನ್ನು ಹಂಚಿಕೊಂಡಿರಲು ಒಪ್ಪದೇ, ಪ್ರತ್ಯೇಕತೆ ಬಯಸಿದಂತವರು ಎಂದು ತಿಳಿಸಿದರು.

ಶಾಂತಿಯನ್ನೇ ಭಾರತ ಬಯಸುವುದಾದರೆ ರಾಮಾಯಣ, ಮಹಾಭಾರತ ನಡೆದಿದ್ದೇ ಸುಳ್ಳು ಅಂತಾನಾ ಎಂಬ ಜಿಜ್ಞಾಸೆ ಮೂಡುವುದು ಸಹಜ. ಆದರೆ, ರಾಮಾಯಣ, ಮಹಾಭಾರತಗಳು ನಡೆದಿರುವುದು ನಿಜ. ಆರು ಸಾವಿರ ವರ್ಷಗಳ ಹಿಂದೆಯೇ ಭಾರತದಲ್ಲಿ ಮೊದಲ ಭೀಕರ ಯುದ್ಧ ನಡೆದಿದೆ. ರಾಮಾಯಣ, ಮಹಾಭಾರತ ನಡೆದ ನಂತರವೇ ಯುದ್ಧವಾಗದ ಹೊರತು ಶಾಂತಿ ನೆಲೆಸಲು ಸಾಧ್ಯವಿಲ್ಲವೆಂಬ ಸಂಗತಿಯೂ ಇಲ್ಲಿನ ಜನರಿಗೆ ಬಂದಿತು ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಅಧಿವೇಶನದ ಸಂಘಟಕ, ಸಾಹಿತಿ ಬಾಗಲಕೋಟೆಯ ಎಸ್.ಜಿ.ಕೋಟಿ ಮಾತನಾಡಿ, ದಾವಣಗೆರೆಯಲ್ಲಿ 5ನೇ ಅಧಿವೇಶನದಲ್ಲಿ ಸಾಹಿತ್ಯದಲ್ಲಿ ಸ್ವತ್ವ ಎಂಬುದೇ ವಿಷಯವಾಗಿದೆ. ಸ್ವತ್ವ ಅಂದರೆ ಅಸ್ಮಿತೆ, ಸ್ವಂತಿಕೆ ಎಂಬರ್ಥವಿದೆ. ಅಂದರೆ, ಯಾವುದೇ ವಿಷಯವಾದರೂ ಸರಿ ಅದು ನಕಲು ಆಗಿರಬಾರದು. ಆದಷ್ಟು ಅದು ಸ್ವಂತದ್ದೇ ಆಗಿರಬೇಕೆಂಬುದು ಅಧಿವೇಶನದ ವಿಷಯದಲ್ಲಿ ಅಡಗಿರುವ ಆಶಯವಾಗಿದೆ. ಸಾಹಿತ್ಯವೂ ಸ್ವಂತದ್ದೇ ಆಗಿರಬೇಕೆನ್ನುವುದು ಇದರ ಹಿಂದಿನ ಮೂಲ ಉದ್ದೇಶವಾಗಿದೆ ಎಂದು ತಿಳಿಸಿದರು.

ಭಾಷಾ ವಿಜ್ಞಾನಿ, ಸಂಶೋಧಕ ಡಾ.ಸಂಗಮೇಶ ಸವದತ್ತಿ ಮಠ, ಡಾ.ನಾ.ಮೊಗಸಾಲೆ, ಕಾಂತಾವರ, ರಾಜಸ್ಥಾನದ ಆರೆಸ್ಸೆಸ್‌ ಪ್ರಚಾರಕ ಮನೋಜಕುಮಾರ ಮತ್ತಿತರರಿದ್ದರು.

ಇದೇ ವೇಳೆ ವಿವಿಧ ಲೇಖಕರ ಸ್ವಹಿತ, ಸ್ವತ್ವ, ಸಹಿತ ವ್ಯಕ್ತ, ಸ್ವತ್ವ ಶಕ್ತಿ ಅಹಲ್ಯ ಹಾಗೂ ಅವಲೋಕನ ಪುಸ್ತಕಗಳನ್ನು ಲೋಕಾರ್ಪಣೆಗೊಳಿಸಲಾಯಿತು. ಬಳಿಕ ಮಧ್ಯಾಹ್ನದ ಚರ್ಚಾ ಗೋಷ್ಠಿ, ಸಂಜೆ ನಮ್ಮ ಕಟ್ಟೆ ನಮ್ಮ ಹಾಗೂ ಪ್ರತಿಭಾ ಅಭಿವ್ಯಕ್ತಿ ಕಾರ್ಯಕ್ರಮ ನಡೆದವು.

ಕೇವಲ 2 ಸಾವಿರ ಜನಸಂಖ್ಯೆ ಇರುವಂತಹ ಪುಟ್ಟ ಗ್ರಾಮದಲ್ಲಿ ನೂರಾರು ಸೈನಿಕರು ಭಾರತೀಯ ಸೇನೆಯಲ್ಲಿರುವ ಹೆಮ್ಮೆಯ ಊರು ದಾವಣಗೆರೆ ತಾಲೂಕಿನ ತೋಳಹುಣಸೆ ಗ್ರಾಮ ಎನ್ನಲು ಹೆಮ್ಮೆಯಾಗುತ್ತದೆ. ಮನೆಗೊಬ್ಬ ಯೋಧ, ಮನೆಗೊಬ್ಬ ಸೈನಿಕ ಎಂಬಂತೆ ತೋಳಹುಣಸೆ ಗ್ರಾಮದಲ್ಲಿ ದಶಕಗಳಿಂದಲೂ ಕನಿಷ್ಠ 2 ಮನೆಗಳಲ್ಲಿ ಒಬ್ಬಬಾರದೂ ಭಾರತೀಯ ಸೇನಾ ಪಡೆಗಳಲ್ಲಿ ಸೇವೆ ಸಲ್ಲಿಸುತ್ತಿರುವುದು ಇತರರಿಗೂ ಪ್ರೇರಣೆಯಾಗಿದೆ.

- ಎಸ್.ಜಿ.ಕೋಟಿ ಬಾಗಲಕೋಟಿ ಹಿರಿಯ ಸಾಹಿತಿ