ಶಾಸಕ ಕೆ.ಎನ್.ರಾಜಣ್ಣನವರನ್ನು ರಾಜ್ಯ ಸಚಿವ ಸಂಪುಟಕ್ಕೆ ಮತ್ತೆ ಸೇರಿಸಿಕೊಳ್ಳುವ ಮೂಲಕ ಜಿಲ್ಲೆಯಲ್ಲಿ ಅಹಿಂದ ವರ್ಗಕ್ಕೆ ಆಗಿರುವ ಅನ್ಯಾಯವನ್ನು ಸರಿಪಡಿಸಬೇಕು ಎಂದು ಜಿಲ್ಲಾ ಅಹಿಂದ ಹೋರಾಟ ಸಮಿತಿಯ ಸಂಚಾಲಕ ಹಾಗೂ ಡಿ.ಸಿ.ಸಿ.ಬ್ಯಾಂಕ್ ನಿರ್ದೇಶಕ ಸಿಂಗದಹಳ್ಳಿ ರಾಜಕುಮಾರ್ ಒತ್ತಾಯಿಸಿದರು.

ಕನ್ನಡಪ್ರಭವಾರ್ತೆ ಹುಳಿಯಾರು

ಶಾಸಕ ಕೆ.ಎನ್.ರಾಜಣ್ಣನವರನ್ನು ರಾಜ್ಯ ಸಚಿವ ಸಂಪುಟಕ್ಕೆ ಮತ್ತೆ ಸೇರಿಸಿಕೊಳ್ಳುವ ಮೂಲಕ ಜಿಲ್ಲೆಯಲ್ಲಿ ಅಹಿಂದ ವರ್ಗಕ್ಕೆ ಆಗಿರುವ ಅನ್ಯಾಯವನ್ನು ಸರಿಪಡಿಸಬೇಕು ಎಂದು ಜಿಲ್ಲಾ ಅಹಿಂದ ಹೋರಾಟ ಸಮಿತಿಯ ಸಂಚಾಲಕ ಹಾಗೂ ಡಿ.ಸಿ.ಸಿ.ಬ್ಯಾಂಕ್ ನಿರ್ದೇಶಕ ಸಿಂಗದಹಳ್ಳಿ ರಾಜಕುಮಾರ್ ಒತ್ತಾಯಿಸಿದರು.

ಚಿಕ್ಕನಾಯಕನಹಳ್ಳಿ ಸಮೀಪದ ಜೆ.ಸಿ.ಪುರದ ಬಳಿ ಇರುವ ಬಿ.ಪಾಳ್ಯದಲ್ಲಿನ ಶ್ರೀ ಸಿದ್ದರಾಮೇಶ್ವರ ಶ್ರವಣ ದೋಷವುಳ್ಳ ಮಕ್ಕಳ ವಸತಿ ಶಾಲೆಯಲ್ಲಿ ಕೆ.ಎನ್.ರಾಜಣ್ಣನವರ 76ನೇ ಹುಟ್ಟು ಹಬ್ಬದ ಆಚರಿಸಿ ಮಕ್ಕಳಿಗೆ ಸಿಹಿ ಹಂಚಿ ಸಮವಸ್ತ್ರ ವಿತರಿಸಿ ಮಾತನಾಡಿದ ಅವರು, ಸಹಕಾರ ಖಾತೆಯನ್ನು ಸಮರ್ಥವಾಗಿ ನಿಭಾಯಿಸಿಕೊಂಡು ಹೋಗುತ್ತಿದ್ದ ರಾಜಣ್ಣನವರನ್ನು ಏಕಾಏಕಿ ಸಚಿವರ ಸ್ಥಾನದಿಂದ ಕೈ ಬಿಟ್ಟಿದ್ದು ಸಹಕಾರಿ ಕ್ಷೇತ್ರಕ್ಕೆ ಆದ ಅನ್ಯಾಯ ಹಾಗೂ ಅಹಿಂದ ವರ್ಗಕ್ಕೆ ಮಾಡಿದ ದ್ರೋಹ. ಅವರ ಮೇಲೆ ಇಲಾಖೆಯ ಮಟ್ಟದ್ದಲ್ಲಾಗಲಿ ಸಾರ್ವಜನಿಕ ಜೀವನದಲ್ಲಾಗಲಿ ಯಾವುದೇ ರೀತಿಯ ಹಗರಣಗಳಿಲ್ಲದ ಸಮಯದಲ್ಲಿ ಸಮರ್ಪಕ ಕಾರಣವನ್ನೂ ನೀಡದೆ ಯಾರದೋ ಕಿತಾಪತಿಗೆ ಇವರನ್ನು ಬಲಿಪಶು ಮಾಡಿದ್ದು ತಪ್ಪು. ಈ ತಪ್ಪನ್ನು ಅವರನ್ನು ಮತ್ತೆ ಮಂತ್ರಿ ಮಾಡುವ ಮೂಲಕ ಸರಿಪಡಿಸಿಕೊಂಡು ಸಮರ್ಥ ವ್ಯಕ್ತಿಯೊಬ್ಬರಿಗೆ ಪ್ರಮುಖ ಹುದ್ದೆಯನ್ನು ನೀಡಬೇಕೆಂದು ಒತ್ತಾಯಿಸಿದರು.

ಕಾರ್ಯಕ್ರಮದಲ್ಲಿ ಜಿ.ಪಂ.ಮಾಜಿ ಸದಸ್ಯೆ ಲೋಹಿತಾ ಬಾಯಿ, ದಲಿತ ಮುಖಂಡರುಗಳಾದ ಗೋ.ನಿ.ವಸಂತಕುಮಾರ್, ಕ್ಯಾತನಾಯಕನಹಳ್ಳಿ ರಂಗಸ್ವಾಮಿ, ತಾಲೂಕಿನ ವಿವಿಧ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಅಧ್ಯಕ್ಷರುಗಳಾದ ದೊಡ್ಡೇಣ್ಣೆಗೆರೆ ಲೋಕೇಶಯ್ಯ, ಪ್ರಸನ್ನ ಕುಮಾರ್, ಶೆಟ್ಟಿಕೆರೆ ನಾಗರಾಜ್, ಕುಪ್ಪೂರು ಯುವರಾಜ್, ಶ್ರೀ ಸಿದ್ದರಾಮೇಶ್ವರ ಶ್ರವಣ ದೋಷವುಳ್ಳ ಮಕ್ಕಳ ಶಾಲೆಯ ಸಂಸ್ಥಾಪಕರಾದ ಚಂದ್ರಮ್ಮ ಚಂದ್ರಶೇಖರಯ್ಯ, ಮುಖ್ಯೋಪಾಧ್ಯಾಯ ಸಿದ್ದೇಶ್, ಶಿಕ್ಷಕಿಯರಾದ ಸಂಜು ಶ್ರೀ, ರತ್ನಮ್ಮ, ಚೇತನಕುಮಾರಿ, ಶಮಂತ ಸೇರಿದಂತೆ ಹಲವರಿದ್ದರು.