ದೇಶದ ಪ್ರಗತಿಗೆ ಕೃಷಿಯಂತೆ ಕೈಗಾರಿಕೆಯೂ ಮುಖ್ಯ: ಶ್ರೀನಿವಾಸ ಗುಪ್ತ

| Published : Nov 30 2024, 12:48 AM IST

ದೇಶದ ಪ್ರಗತಿಗೆ ಕೃಷಿಯಂತೆ ಕೈಗಾರಿಕೆಯೂ ಮುಖ್ಯ: ಶ್ರೀನಿವಾಸ ಗುಪ್ತ
Share this Article
  • FB
  • TW
  • Linkdin
  • Email

ಸಾರಾಂಶ

ಕೃಷಿಯಂತೆ ಕೈಗಾರಿಕೆಗಳಿಗೂ ಸಾಕಷ್ಟು ಮಹತ್ವ ನೀಡಬೇಕು. ನಮ್ಮ ಪಕ್ಕದ ರಾಷ್ಟ್ರವಾಗಿರುವ ಚೀನಾದಲ್ಲಿ ಕೃಷಿಗೆ ನೀಡಿದಷ್ಟೇ ಪ್ರಾಧಾನ್ಯವನ್ನು ಕೈಗಾರಿಕೆಗೂ ನೀಡಿರುವುದರಿಂದ ಸಾಕಷ್ಟು ಅಭಿವೃದ್ಧಿ ಸಾಧ್ಯವಾಗಿದೆ ಎಂದು ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಶ್ರೀನಿವಾಸ್ ಗುಪ್ತ ಹೇಳಿದರು.

ಕೊಪ್ಪಳ: ರೈತ ದೇಶದ ಬೆನ್ನೆಲುಬು. ಅದೇ ರೀತಿ ಕೈಗಾರಿಕೆಗಳು ಸಹ ದೇಶದ ಅಭಿವೃದ್ಧಿಗೆ ಮುಖ್ಯ ಎಂದು ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಹಾಗೂ ಕೊಪ್ಪಳ ಚೇಂಬರ್ ಆಫ್ ಕಾಮರ್ಸ್‌ನ ಅಧ್ಯಕ್ಷ ಶ್ರೀನಿವಾಸ್ ಗುಪ್ತ ಹೇಳಿದರು.

ನಗರದ ಡಿಐಸಿ ಸಭಾಭವನದಲ್ಲಿ ಎಂಎಸ್ಎಂಇ ಕಾಂಪಿಟೇಟಿವ್ ಸ್ಕೀಮ್ ಬಗ್ಗೆ ಎಂಎಸ್ಎಂಇ ಹಾಗೂ ಡಿಐಸಿ ಜತೆಗೆ ರಿಫಾ ಚೇಂಬರ್ ಆಫ್ ಕಾಮರ್ಸ್ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಒಂದು ದಿನದ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಕೈಗಾರಿಕೆಗಳು ಪರಿಣಾಮಕಾರಿಯಾದ ಪಾತ್ರ ವಹಿಸುತ್ತವೆ. ಕೈಗಾರಿಕೆಗಳಿಗೂ ಸಾಕಷ್ಟು ಮಹತ್ವ ನೀಡಬೇಕು. ನಮ್ಮ ಪಕ್ಕದ ರಾಷ್ಟ್ರವಾಗಿರುವ ಚೀನಾದಲ್ಲಿ ಕೃಷಿಗೆ ನೀಡಿದಷ್ಟೇ ಪ್ರಾಧಾನ್ಯವನ್ನು ಕೈಗಾರಿಕೆಗೂ ನೀಡಿರುವುದರಿಂದ ಸಾಕಷ್ಟು ಅಭಿವೃದ್ಧಿ ಸಾಧ್ಯವಾಗಿದೆ ಎಂದು ಹೇಳಿದರು. ನಮ್ಮ ದೇಶದಲ್ಲಿ ಕೈಗಾರಿಕೆಗಳ ಅಭಿವೃದ್ಧಿಗೆ ಸಾಕಷ್ಟು ಪ್ರೋತ್ಸಾಹ ಇದೆ. ಯುವಕರು ಕೇವಲ ಉದ್ಯೋಗ ಅರಿಸಿಕೊಂಡು ಹೋಗುವವರಾಗದೆ ಉದ್ಯೋಗ ನೀಡುವಂಥವರಾಗಬೇಕು, ಉದ್ಯಮಶೀಲರಾಗಬೇಕು. ಸರ್ಕಾರ ಸಹ ಕಚ್ಚಾ ವಸ್ತುಗಳನ್ನು ರಫ್ತು ಮಾಡಲು ಅವಕಾಶ ನೀಡದೆ ಕಚ್ಚಾ ವಸ್ತುಗಳಿಂದ ಉತ್ಪನ್ನ ತಯಾರಿಸಿ ಮಾರಾಟ ಮಾಡಲು ಅವಕಾಶ ನೀಡಿದರೆ ಇಲ್ಲಿಯೇ ಸಾಕಷ್ಟು ಉದ್ಯೋಗಗಳನ್ನು ಸೃಷ್ಟಿಸಬಹುದು. ನಮ್ಮಲ್ಲಿ ಸಾಕಷ್ಟು ಯುವಶಕ್ತಿ ಇದೆ, ಜತೆಗೆ ತಾಂತ್ರಿಕತೆ ಸೇರಿಕೊಂಡರೆ ನಿಜವಾಗಿಯೂ ಉತ್ತಮವಾದ ಉತ್ಪನ್ನಗಳನ್ನು ತಯಾರಿಸಬಹುದು. ಈ ನಿಟ್ಟಿನಲ್ಲಿ ಸರ್ಕಾರದ ಸವಲತ್ತುಗಳನ್ನು ಉಪಯೋಗಿಸಿಕೊಂಡು ಕೈಗಾರಿಕೆಗಳನ್ನು ಸ್ಥಾಪಿಸಬೇಕು ಎಂದು ಕರೆ ನೀಡಿದರು. ಕಾರ್ಯಕ್ರಮದಲ್ಲಿ ಎಂಎಸ್ಎಂಇ ಸಹಾಯಕ ನಿರ್ದೇಶಕ ದೋಣಿ ಕಿರಣ್ ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು.

ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಸೋಮಶೇಖರ ಹಾಗೂ ಸಹಾಯಕ ನಿರ್ದೇಶಕ ಎಸ್.ಎಂ. ಚವಾಣ್, ಚೇಂಬರ್ ಆಫ್ ಕಾಮರ್ಸ್‌ನ ಜಿಲ್ಲಾಧ್ಯಕ್ಷ ಶಾಹಿದ್ ಕವಲೂರ್, ರುಡ್‌ಸೆಟ್‌ನ ರಾಯೇಶ್ವರ್ ಪೈ., ಪವಿತ್ರಾ ಮತ್ತು ಕಾವ್ಯಾ ಪಾಲ್ಗೊಂಡಿದ್ದರು. ಇಂದಿರಾ ಸ್ವಾಗತಿಸಿದರು. ಪ್ರಮೀಳಾಬಾಯಿ ವಂದನಾರ್ಪಣೆ ಮಾಡಿದರು.