ಅಕ್ರಮ ಕಟ್ಟಡಗಳ ತೆರವಿಗೆ ನಿರ್ದಾಕ್ಷಿಣ್ಯ ಕ್ರಮ

| Published : Dec 21 2023, 01:15 AM IST

ಸಾರಾಂಶ

ಪುರಸಭೆ ಆಸ್ತಿ ಉಳಿಸಿಕೊಳ್ಳುವಲ್ಲಿ ಪುರಸಭೆ ಆಡಳಿತ ಸಂಪೂರ್ಣ ಬೆಂಬಲ ನೀಡಲಿದೆ. ಕಾನೂನುಗಳನ್ನು ಅನುಸರಿಸಿ ಕೆಲಸ ಮಾಡಲು ಯಾರೂ ಹಿಂದೆ ಸರಿಯುವುದು ಬೇಡ. ಅಕ್ರಮ ಕಟ್ಟಡಗಳು, ಕಾನೂನು ಬಾಹಿರವಾಗಿ ನಿರ್ಮಾಣವಾಗುತ್ತಿರುವ ಕಟ್ಟಡಗಳ ಸರ್ವೇ ನಡೆಸಿ ಸಾರ್ವಜನಿಕರಿಗೂ ತೊಂದರೆಯಾಗದಂತೆ ಕ್ರಮ ಜರುಗಿಸೋಣ. ಹಿಂದೆ ಆದ ಲೋಪಗಳ ಬಗೆಗೆ ಚರ್ಚಿಸುತ್ತಲೇ ಇರುವ ಕಾಲ ಇದಲ್ಲ. ಈಗ ಆಗಬೇಕಾದ ಕೆಲಸದ ಬಗೆಗೆ ಗಮನ ಹರಿಸೋಣ.

ಕನ್ನಡಪ್ರಭ ವಾರ್ತೆ ಹಾನಗಲ್ಲ

ಅಕ್ರಮ ಕಟ್ಟಡಗಳ ತೆರವಿಗೆ ನಿರ್ದಾಕ್ಷಿಣ್ಯವಾಗಿ ಎಲ್ಲ ಕಾನೂನು ಕ್ರಮಕ್ಕೆ ಪುರಸಭೆ ಬದ್ಧವಾಗಿದ್ದು, ಶೀಘ್ರ ಪ್ರಕ್ರಿಯೆ ಆರಂಭಿಸುವುದಾಗಿ ಸವಣೂರು ಉಪವಿಭಾಗಾಧಿಕಾರಿ, ಹಾನಗಲ್ಲ ಪುರಸಭೆ ಆಡಳಿತಾಧಿಕಾರಿ ಮೊಹಮ್ಮದ ಖಿಜರ್‌ ಭರವಸೆ ನೀಡಿದರು.

ಇಲ್ಲಿನ ಪುರಸಭೆಯಲ್ಲಿ ನಡೆದ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪುರಸಭೆ ಆಸ್ತಿ ಉಳಿಸಿಕೊಳ್ಳುವಲ್ಲಿ ಪುರಸಭೆ ಆಡಳಿತ ಸಂಪೂರ್ಣ ಬೆಂಬಲ ನೀಡಲಿದೆ. ಕಾನೂನುಗಳನ್ನು ಅನುಸರಿಸಿ ಕೆಲಸ ಮಾಡಲು ಯಾರೂ ಹಿಂದೆ ಸರಿಯುವುದು ಬೇಡ. ಅಕ್ರಮ ಕಟ್ಟಡಗಳು, ಕಾನೂನು ಬಾಹಿರವಾಗಿ ನಿರ್ಮಾಣವಾಗುತ್ತಿರುವ ಕಟ್ಟಡಗಳ ಸರ್ವೇ ನಡೆಸಿ ಸಾರ್ವಜನಿಕರಿಗೂ ತೊಂದರೆಯಾಗದಂತೆ ಕ್ರಮ ಜರುಗಿಸೋಣ. ಹಿಂದೆ ಆದ ಲೋಪಗಳ ಬಗೆಗೆ ಚರ್ಚಿಸುತ್ತಲೇ ಇರುವ ಕಾಲ ಇದಲ್ಲ. ಈಗ ಆಗಬೇಕಾದ ಕೆಲಸದ ಬಗೆಗೆ ಗಮನ ಹರಿಸೋಣ. ಪಟ್ಟಣದಲ್ಲಿ ನಿರ್ಮಿಸಲು ಆಯೋಜಿಸಲಾದ ಶೌಚಾಲಯ ನಿರ್ವಹಣೆ ಬಗೆಗೆ ಗಂಭೀರವಾಗಿ ಚಿಂತನೆ ನಡೆಸಬೇಕು. ಅವುಗಳ ಸ್ವಚ್ಛತೆಗೆ ಗಮನ ನೀಡದಿದ್ದರೆ ಅವು ನಿರುಪಯುಕ್ತವಾಗುವ ಸಂದರ್ಭಗಳೇ ಹೆಚ್ಚು. ಅನಧಿಕೃತ ನಳಗಳನ್ನೂ ಶೋಧ ಮಾಡಿ ಕಾನೂನು ಕ್ರಮಕ್ಕೆ ಮುಂದಾಗಬೇಕು ಎಂದು ಅಧಿಕಾರಿಗಳಿಗೆ ಸಲಹೆ ನೀಡಿದರು.

ಸಮೃದ್ಧಿ-೨ ಯೋಜನೆಯಲ್ಲಿ ಪಟ್ಟಣದ ಕುಡಿಯುವ ನೀರಿಗಾಗಿ ₹೩೫.೫೪ ಕೋಟಿ ವೆಚ್ಚದಲ್ಲಿ ಕರ್ನಾಟಕ ನಗರ ಮತ್ತು ಪಟ್ಟಣ ನೀರು ಸರಬರಾಜು ನಿಗಮದಿಂದ ಯೋಜನೆ ಮಂಜೂರಾಗಿ ಟೆಂಡರ್ ಹಂತದಲ್ಲಿದೆ. ಧರ್ಮಾ ಜಲಾಶಯದಿಂದ ೧೮ ಕಿಮೀ ಪೈಪ್‌ಲೈನ್ ಮೂಲಕ ಹಾನಗಲ್ಲಿಗೆ ಕುಡಿಯುವ ನೀರೊದಗಿಸುವ ಯೋಜನೆ ಇದಾಗಿದೆ ಎಂದು ನಿಗಮದ ಅಧಿಕಾರಿ ಕುಮಾರ ಸಭೆಗೆ ತಿಳಿಸಿದರು.

ಸ್ಲಂಬೋರ್ಡ್ ಮನೆ ನಿರ್ಮಾಣದಲ್ಲಿ ಹಲವು ಗೊಂದಲಗಳಿವೆ. ಪುರಸಭೆ ಪರವಾನಗಿ ಬೇಕು ಬೇಡ ಎಂಬ ವಿಷಯ, ಮನೆಯ ಅಳತೆ, ನಿರ್ಮಾಣದ ಕಾಲಾವಧಿ, ಹಕ್ಕುಪತ್ರ ಹೀಗೆ ಹಲವು ಸಮಸ್ಯೆಗಳ ನಡುವೆ ಸ್ಲಂಬೋರ್ಡ್ ಮನೆ ನಿರ್ಮಾಣ ನಡೆಯುತ್ತಿದ್ದು, ಸಾರ್ವಜನಿಕರಿಗೆ ತೊಂದರೆಯಾಗದಂತೆ ಕೂಡಲೇ ಸಮಸ್ಯೆ ಬಗೆಹರಿಸಿ ಮುಖ್ಯಾಧಿಕಾರಿಗಳು ಕ್ರಮ ಜರುಗಿಸಬೇಕು ಎಂದು ಸದಸ್ಯರಾದ ವಿಕಾಸ ನಿಂಗೋಜಿ, ನಾಗಪ್ಪ ಸೌದತ್ತಿ, ಪರಶುರಾಮ ಖಂಡೂನವರ, ಎಸ್.ಕೆ. ಪೀರಜಾದೆ ಆಗ್ರಹಿಸಿದರು.

ಸ್ಮಂಬೋರ್ಡ್‌ ಹಾಗೂ ಇತರ ಯೋಜನೆಗಳಲ್ಲಿ ಮನೆ ನಿರ್ಮಿಸಿಕೊಳ್ಳುತ್ತಿರುವವರಿಗೆ ಪುರಸಭೆ ಹೆಚ್ಚಿನ ಕರ ವಿಧಿಸುತ್ತಿರುವುದು ಅವರಿಗೆ ಭಾರವಾಗುತ್ತಿದೆ. ಇದರಿಂದ ಬಡವರು ಮನೆ ಕಟ್ಟಿಕೊಳ್ಳಲು ಅನಾನುಕೂಲ ಆಗುತ್ತಿದೆ. ನಿಯಮ ಮೀರಿ ಮನೆ ಕಟ್ಟಿಕೊಳ್ಳುತ್ತಿರುವವರಿಗೆ ನೋಟೀಸ್‌ ನೀಡಿ ಕಾಲ ಕಾಲಕ್ಕೆ ಎಚ್ಚರಿಸಿದ್ದರೆ ಹೀಗೇ ಆಗುತ್ತಿರಲಿಲ್ಲ. ಮನೆ ನಿರ್ಮಾಣ ಮುಗಿಯುವ ಹಂತಕ್ಕೆ ಬಂದಾಗ ಒತ್ತಡ ಹಾಕಿ ಸಮಸ್ಯೆ ಮಾಡುವುದು ಸರಿ ಅಲ್ಲ. ಈ ಬಗ್ಗೆ ಮನೆ ನಿರ್ಮಿಸಿಕೊಳ್ಳುವವರಿಗೆ ತೊಂದರೆಯಾಗದಂತೆ ಅಧಿಕಾರಿಗಳು ಲಕ್ಷ್ಯವಹಿಸಬೇಕು ಎಂದು ಸದಸ್ಯ ಜಮೀರ ಶೇಖ ಗಮನ ಸೆಳದರು.

ಅಕ್ರಮ ಕಟ್ಟಡ ನಿರ್ಮಾಣದ ವಿಷಯಕ್ಕೆ ಪುರಸಭೆ ಮುಖ್ಯಾಧಿಕಾರಿಗಳ ಗಮನ ಸೆಳೆದರೂ ನಿರ್ಲಕ್ಷ ವಹಿಸಿದ್ದೇ ಇದು ದೊಡ್ಡ ಸಮಸ್ಯೆಯಾಗಲು ಕಾರಣವಾಗಿದೆ. ಸಾಕ್ಷ್ಯ ಸಹಿತ ಮಾಹಿತಿ ನೀಡಿದರೂ ನಿರ್ಲಕ್ಷ ಏಕೆ. ಇವುಗಳ ಬಗೆಗೆ ಕ್ರಮ ಜರುಗಿಸುವುದು ಯಾವಾಗ. ಜನಪ್ರತಿನಿಧಿಗಳು ವಾರ್ಡ್‌ನಲ್ಲಿ ಸಾರ್ವಜನಿಕರಿಂದ ಅಹವಾಲು ಕೇಳುವುದೇ ಆಗಿದೆ. ಪರಿಹಾರ ಸಾಧ್ಯವಾಗುತ್ತಿಲ್ಲ. ಪಟ್ಟಣದ ಸ್ವಚ್ಛತೆಯ ವಿಷಯದಲ್ಲಿ ತೀರ ನಿರ್ಲಕ್ಷ ಆಗಿದೆ ಎಂದು ಸದಸ್ಯೆ ವೀಣಾ ಗುಡಿ ಸಭೆಯ ಗಮನ ಸೆಳೆದರು.

ಪುರಸಭೆ ಕಾರು ಬಾಡಿಗೆ ಹಣ ವ್ಯಯ ಹೆಚ್ಚಾಯಿತು. ರಾಷ್ಟೀಯ ಹಬ್ಬಗಳ ಹೆಸರಿನಲ್ಲಿ ಹೆಚ್ಚು ಹಣ ಖರ್ಚು ಹಾಕಲಾಗಿದೆ. ಬಸ್ ನಿಲ್ದಾಣದ ಬಳಿ ಪಾರ್ಕಿಂಗ್‌ಗೆ ಜಾಗೆ ಇಲ್ಲ. ಮಳಿಗೆ ಹರಾಜು ಹಾಗೂ ಹರಾಜಾದ ಮಳಿಗೆ ಬಾಡಿಗೆ ತೆಗೆದುಕೊಂಡವರಿಗೆ ಹಸ್ತಾಂತರವಿಲ್ಲ, ಇದರಿಂದ ಪುರಸಭೆ ಆದಾಯ ಕುಂಠಿತ. ಮುಂತಾದ ವಿಷಯಗಳ ಕುರಿತು ಸದಸ್ಯರಾದ ಹಸೀನಾಬಿ ನಾಯ್ಕನವರ, ಮಮತಾ ಆರೆಗೊಪ್ಪ, ಶೋಭಾ ಉಗ್ರಣ್ಣನವರ ಗಮನ ಸೆಳೆದರು.

ಸಭೆಯಲ್ಲಿ ಸದಸ್ಯರು ತಮ್ಮ ಅಸಮಾಧಾನ ವ್ಯಕ್ತಪಡಿಸಿದಾಗೆಲ್ಲ, ಪರಿಶೀಲಿಸಿ ಕ್ರಮ ಜರುಗಿಸುತ್ತೇವೆ. ನೀವು ಹೇಳುವ ಸಮಸ್ಯೆ ನಮ್ಮ ಗಮನಕ್ಕೆ ಬಂದಿಲ್ಲ. ಈಗಾಗಲೇ ಕ್ರಮ ಜರುಗಿಸಿದ್ದೇವೆ ಎಂದು ಮುಖ್ಯಾಧಿಕಾರಿ ವೈ.ಕೆ. ಜಗದೀಶ, ಎಂಜಿನಿಯರ್ ಮಿರ್ಜಿ ವಿವರಿಸುತ್ತಿದ್ದರು. ಇದರಿಂದ ಸಮಸ್ಯೆಗೆ ಪರಿಹಾರವಿಲ್ಲ ಎಂದು ಸದಸ್ಯರು ಮುಖ್ಯಾಧಿಕಾರಿಗಳಿಗೆ ತಮ್ಮ ಅಭಿಪ್ರಾಯ ಹೇಳಿದಾಗಲೂ ಕಾದು ನೋಡುವುದು ಮಾತ್ರ ಸದಸ್ಯರ ಪಾಲಿಗೆ ಉಳಿಯಿತು.