ಪ್ರಭಾವಿ ಸಚಿವರು ಲೋಕಸಭಾ ಚುನಾವಣಾ ಕಣಕ್ಕೆ?

| Published : Jan 14 2024, 01:31 AM IST / Updated: Jan 14 2024, 05:27 PM IST

ಸಾರಾಂಶ

ಸಚಿವ ಈಶ್ವರ್ ಖಂಡ್ರೆ ಹೊರತುಪಡಿಸಿ ಉಳಿದ ಸಂಭವನೀಯ ಸಚಿವರಿಗೆ ಸ್ಥಾನ ಬಿಡಲು ಸ್ವಲ್ಪವು ಸಮ್ಮತಿಸುತ್ತಿಲ್ಲ. ಜೊತೆಗೆ ದೆಹಲಿ ರಾಜಕಾರಣವೂ ಬೇಡವೆಂದು ಈಗಾಗಲೇ ಹಲವಾರು ಭಾರಿ ಮಾಧ್ಯಮಗಳ ಮುಂದೆಯೇ ಸ್ವಷ್ಟಪಡಿಸಿದ್ದಾರೆ

ಕನ್ನಡಪ್ರಭ ವಾರ್ತೆ ಕೋಲಾರ

ಮುಂಬರಲಿರುವ ಲೋಕಸಭಾ ಚುನಾವಣೆಗೆ ಸಂಬಂಧಿಸಿ ರಾಜ್ಯದಲ್ಲಿ ಸಿದ್ದರಾಮಯ್ಯರ ಆಡಳಿತದ ಸಂಪುಟದಲ್ಲಿ ಕೆಲವು ಸಚಿವರನ್ನು ಚುನಾವಣೆಯ ಕಣಕ್ಕೆ ಇಳಿಸಬೇಕೆಂದು ರಾಜಕೀಯದ ಮಾರ್ಗದರ್ಶಿ ಕನ್ನಿಗೋಳಿ ಕಾಂಗ್ರೆಸ್‌ಗೆ ಸಲಹೆ ನೀಡಿದ್ದಾರೆ.

ಇದನ್ನು ಕಾಂಗ್ರೆಸ್ ಪಕ್ಷದ ವರಿಷ್ಠರು ಗಂಭೀರವಾಗಿ ಪರಿಗಣಿಸಿದ್ದು, ಯಾವ ಯಾವ ಸಚಿವರು ಆಗ್ನಿ ಪರೀಕ್ಷೆಗೆ ಒಳಪಡಲಿದ್ದಾರೆ ಎಂಬು ಕುತೂಹಲ ಮೂಡಿಸಿದೆ.

ಮುಂಬರಲಿರುವ ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದಿಂದ ಕನಿಷ್ಟ ೨೦ ಸ್ಥಾನ ಗಳಿಸಬೇಕೆಂಬುವುದು ಕಾಂಗ್ರೆಸ್ ಹೈಕಮಾಂಡ್ ಗುರಿಯಾಗಿದೆ. ಇದಕ್ಕಾಗಿ ರಾಜ್ಯದ ಸಚಿವರು ಪಕ್ಷಕ್ಕಾಗಿ ಯಾವುದೇ ತ್ಯಾಗಕ್ಕೂ ಸಿದ್ಧರಾಗಬೇಕೆಂದು ರಾಜ್ಯ ಉಸ್ತುವಾರಿ ಸುರ್ಜೇವಾಲ ಸೂಚಿಸಿದ್ದಾರೆ.

ಯಾರಿಗೆ ಯಾವ ಕ್ಷೇತ್ರ?
ಉನ್ನತ ಮೂಲದ ಪ್ರಕಾರ ತಮ್ಮದೇ ಆದ ವರ್ಚಸ್ಸು ಹೊಂದಿರುವಂತ ಸಚಿವರಲ್ಲಿ ಕೋಲಾರ ಮೀಸಲು ಕ್ಷೇತ್ರಕ್ಕೆ ಆಹಾರ ಖಾತೆ ಸಚಿವ ಕೆ.ಹೆಚ್.ಮುನಿಯಪ್ಪ ಮೊದಲ ಸ್ಥಾನದಲ್ಲಿದ್ದಾರೆ.

 ಚಾಮರಾಜನಗರ ಮೀಸಲು ಕ್ಷೇತ್ರಕ್ಕೆ ಡಾ.ಹೆಚ್.ಸಿ.ಮಹಾದೇವಪ್ಪ, ಬೆಳಗಾವಿ ಕ್ಷೇತ್ರಕ್ಕೆ ಸತೀಶ್ ಜಾರಕಿಹೊಳಿ, ಹಾವೇರಿ ಕ್ಷೇತ್ರಕ್ಕೆ ಹೆಚ್.ಕೆ.ಪಾಟೀಲ್, ಚಿತ್ರದುರ್ಗ ಮೀಸಲು ಕ್ಷೇತ್ರಕ್ಕೆ ಕೆ.ಎನ್.ರಾಜಣ್ಣ, ಬೀದರ್ ಕ್ಷೇತ್ರಕ್ಕೆ ಈಶ್ವರ್ ಖಂಡ್ರೆ, ಮಂಡ್ಯ ಕ್ಷೇತ್ರಕ್ಕೆ ಚೆಲುವರಾಯಸ್ವಾಮಿ ಸೇರಿದಂತೆ ೧೦ ಸಚಿವರನ್ನು ಹೆಸರಿಸಲಾಗಿದೆ. 

ಅಲ್ಲದೆ ಕೆಲವು ವರ್ಚಸ್ಸಿನ ಹಿರಿಯ ಶಾಸಕರನ್ನು ನಿರ್ದಿಷ್ಟ ಕ್ಷೇತ್ರಗಳಲ್ಲಿ ಕಣಕ್ಕಿಳಿಸಿದರೆ ಪಕ್ಷಕ್ಕೆ ಲಾಭವಾಗಲಿದೆ ಎಂಬ ಸಲಹೆ ನೀಡಿದ್ದಾರೆ. ಕೋಲಾರಕ್ಕೆ ಕೆ.ಎಚ್‌ ಮುನಿಯಪ್ಪ ಸಾಧ್ಯತೆ

ಕೋಲಾರ ಮೀಸಲು ಕ್ಷೇತ್ರಕ್ಕೆ ಸಂಬಂಧಿಸಿದಂತೆ ಆಹಾರ ಖಾತೆ ಸಚಿವ ಕೆ.ಹೆಚ್.ಮುನಿಯಪ್ಪ ಹಾಗೂ ಮಾಜಿ ಸಭಾಪತಿ ರಮೇಶ್‌ಕುಮಾರ್ ಸೇರಿದಂತೆ ಜಿಲ್ಲಾ ವರಿಷ್ಟರನ್ನು ಕರೆಸಿಕೊಂಡು ಮಾತುಕತೆ ನಡೆಸಿದ್ದಾರೆ. ಈ ಹಿಂದಿನ ಘಟಬಂಧನ್ ಕಾರ್ಯಾಚರಣೆಗಳನ್ನು ಮರೆತು ಎಲ್ಲರೂ ಕಾಂಗ್ರೆಸ್ ಪಕ್ಷದ ಸಂಘಟನೆಗೆ ದುಡಿದು ಕೇಂದ್ರದಲ್ಲಿ ಅಧಿಕಾರಕ್ಕೆ ತರುವುದು ಮುಖ್ಯ ಗುರಿಯಾಗಬೇಕೆಂದು ಖಡಕ್ ಸೂಚನೆ ನೀಡಿದ್ದಾರೆ ಎನ್ನಲಾಗಿದೆ. 

ಅರಣ್ಯ ಇಲಾಖೆ ಖಾತೆ ಸಚಿವ ಈಶ್ವರ್ ಖಂಡ್ರೆ ಹೊರತುಪಡಿಸಿ ಉಳಿದ ಸಂಭವನೀಯ ಸಚಿವರಿಗೆ ಸ್ಥಾನ ಬಿಡಲು ಸ್ವಲ್ಪವು ಸಮ್ಮತಿಸುತ್ತಿಲ್ಲ. ಜೊತೆಗೆ ದೆಹಲಿ ರಾಜಕಾರಣವೂ ಬೇಡವೆಂದು ಈಗಾಗಲೇ ಹಲವಾರು ಭಾರಿ ಮಾಧ್ಯಮಗಳ ಮುಂದೆಯೇ ಸ್ವಷ್ಟಪಡಿಸಿದ್ದಾರೆ. ಕನಿಗೋಳಿ ನೀಡಿರುವ ವರದಿಯಂತೆ ಚುನಾವಣಾ ಕಣಕ್ಕಿಳಿಯಲು ತಮಗೆ ವರಿಷ್ಠರು ತಾಕೀತು ಮಾಡಿದರೆ ಹೇಗೆ ತಪ್ಪಿಸಿಕೊಳ್ಳುವುದು ಎಂಬ ಚಿಂತೆ ಕಾಡುತ್ತಿದ್ದು ಲೋಕಸಭಾ ಚುನಾವಣೆಯು ರಾಜ್ಯದ ಸಚಿವರುಗಳಿಗೆ ಆಗ್ನಿಪರೀಕ್ಷೆಯಾಗಿದೆ.