ಇಂದಿನ ಮಕ್ಕಳಿಗೆ ಮಾಹಿತಿ ತಂತ್ರಜ್ಞಾನ ಅತಿ ಅವಶ್ಯಕ: ಟಿ.ಡಿ.ರಾಜೇಗೌಡ

| Published : Mar 02 2024, 01:47 AM IST

ಸಾರಾಂಶ

ಇಂದಿನ ಮಕ್ಕಳಿಗೆ ಕಂಪ್ಯೂಟರ್‌ ಶಿಕ್ಷಣ ಸೇರಿದಂತೆ ಮಾಹಿತಿ ತಂತ್ರಜ್ಞಾನ ಅತಿ ಅವಶ್ಯಕ ಎಂದು ಶಾಸಕ ಹಾಗೂ ಕರ್ನಾಟಕ ನವೀಕರಿಸಬಹುದಾದ ಇಂಧನ ನಿಗಮದ ಅಧ್ಯಕ್ಷ ಟಿ.ಡಿ.ರಾಜೇಗೌಡ ತಿಳಿಸಿದರು.

ಕುದುರೆಗುಂಡಿಯ ತಲಮಕ್ಕಿ ಸ.ಹಿ.ಪ್ರಾಥಮಿಕ ಶಾಲೆಯಲ್ಲಿ ವಿವಿಧ ಕಾಮಗಾರಿಗಳ ಉದ್ಘಾಟನೆ ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರ

ಇಂದಿನ ಮಕ್ಕಳಿಗೆ ಕಂಪ್ಯೂಟರ್‌ ಶಿಕ್ಷಣ ಸೇರಿದಂತೆ ಮಾಹಿತಿ ತಂತ್ರಜ್ಞಾನ ಅತಿ ಅವಶ್ಯಕ ಎಂದು ಶಾಸಕ ಹಾಗೂ ಕರ್ನಾಟಕ ನವೀಕರಿಸಬಹುದಾದ ಇಂಧನ ನಿಗಮದ ಅಧ್ಯಕ್ಷ ಟಿ.ಡಿ.ರಾಜೇಗೌಡ ತಿಳಿಸಿದರು.

ಶುಕ್ರವಾರ ಕುದುರೆಗುಂಡಿ ತಲಮಕ್ಕಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ರಂಗಮಂದಿರ ಸಭಾಂಗಣ, ಕಾಪೌಂಡು, ಆಟದ ಮೈದಾನ ಸೇರಿದಂತೆ ವಿವಿಧ ಕಾಮಗಾರಿಗಳ ಉದ್ಘಾಟನೆ ಹಾಗೂ ಶಾರದಾ ಪೂಜೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಹಿಂದಿನ ಕಾಲದಲ್ಲಿ ಮಕ್ಕಳು ಉನ್ನತ ಶಿಕ್ಷಣ ಪಡೆಯದಿದ್ದರೂ ಬದುಕು ನಡೆಸುವುದು ಕಷ್ಟವಿರಲಿಲ್ಲ. ಆದರೆ, ಈಗಿನ ಸ್ಪರ್ಧಾತ್ಮಕ ಯುಗದಲ್ಲಿ ಉನ್ನತ ಶಿಕ್ಷಣ ಅತಿ ಅಗತ್ಯವಾಗಿದೆ. ನಾನು ಶಾಸಕನಾದ ಮೇಲೆ ಶಿಕ್ಷಣಕ್ಕೆ ಅತಿ ಹೆಚ್ಚು ಅನುದಾನ ನೀಡಿದ್ದು ರಾಜ್ಯದ 12 ಶಾಸಕರ ಪಟ್ಟಿಯಲ್ಲಿ ಪೈಕಿ ನಾನು ಸೇರಿದ್ದೇನೆ. ಎಸ್‌.ಎಂ.ಕೃಷ್ಣ, ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗಲೂ ಶಿಕ್ಷಣಕ್ಕೆ ಒತ್ತು ನೀಡಿದ್ದರು. ಹಿಂದಿನ ಬಾರಿ ಸಿದ್ದರಾಮಯ್ಯ ಮುಖ್ಯ ಮಂತ್ರಿ ಯಾಗಿದ್ದಾಗ ಹೆಚ್ಚು ವಸತಿ ಶಾಲೆ ಪ್ರಾರಂಭಿಸಿದ್ದರು ಎಂದರು. ಪ್ರಸ್ತುತ ಸರ್ಕಾರ ಶಿಕ್ಷಣಕ್ಕೆ ಕೋಟ್ಯಂತರ ರು. ವೆಚ್ಚ ಮಾಡುತ್ತಿದೆ. ಮಕ್ಕಳು ಈ ದೇಶದ ಆಸ್ತಿಯಾಗಬೇಕು ಎಂದು ಕರೆ ನೀಡಿದರು. ನಾನು ಕರ್ನಾಟಕ ನವೀಕರಿಸಬಹುದಾದ ಇಂದನ ನಿಗಮದ ಅಧ್ಯಕ್ಷನಾಗಿ ನೇಮಕಗೊಂಡಿದ್ದೇನೆ. ಇಂದನ ನಿಗಮದಿಂದ ಕೊಪ್ಪ ಡಿಗ್ರಿ ಕಾಲೇಜು ಇಂಡೋ ಗ್ರೌಂಡ್‌ ಗೆ 1 ಕೋಟಿ ರು. ಅನುದಾನ ಬಿಡುಗಡೆ ಮಾಡಿದ್ದೇನೆ. ಕೊಪ್ಪ ಡಯಾಲಿಸೀಸ್‌ ಕೇಂದ್ರಕ್ಕೆ 8 ಲಕ್ಷ, ಕೊಪ್ಪ ಪಿಸಿಎಆರ್‌ಡಿ ಬ್ಯಾಂಕಿಗೆ 25 ಲಕ್ಷ, ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ 3 ಕೋಟಿ ನೀಡಿದ್ದೇನೆ ಎಂದರು. ಕೊಪ್ಪ ಕ್ಷೇತ್ರ ಶಿಕ್ಷಣಾಧಿಕಾರಿ ಜ್ಯೋತಿ ಮಾತನಾಡಿ, ಶಾಲೆಯ ಮಕ್ಕಳಿಗೆ ಬೌತಿಕ ಶಿಕ್ಷಣ ಹಾಗೂ ಶೈಕ್ಷಣಿಕ ಅಭಿವೃದ್ಧಿಯೂ ಮುಖ್ಯ. ಶಾಲೆ ಅಭಿವೃದ್ಧಿಗೆ ಶಿಕ್ಷಕರ ಜೊತೆಗೆ ಪೋಷಕರು, ಶಾಲೆ ಎಸ್‌ಡಿಎಂಸಿ, ಜನಪ್ರತಿನಿಧಿಗಳ ಸಹಕಾರವೂ ಅತಿ ಮುಖ್ಯವಾಗಿದೆ. ಪ್ರಸ್ತುತ ಕುದುರೆಗುಂಡಿ ತಲಮಕ್ಕಿ ಸರ್ಕಾರಿ ಶಾಲೆಗೆ ಇಂದು 8 ಕಾಮಗಾರಿಗಳ ಉದ್ಘಾಟನೆಯಾಗಿದೆ. ಈ ಶಾಲೆಯಲ್ಲಿ 131 ಮಕ್ಕಳಿದ್ದು ಮುಂದೆ ದಾಖಲಾತಿ ಹೆಚ್ಚಿಸುವ ಗುರಿ ಹೊಂದಿದ್ದಾರೆ ಎಂದರು.

ಇದೇ ಸಂದರ್ಭದಲ್ಲಿ ಶಾಸಕ ಟಿ.ಡಿ.ರಾಜೇಗೌಡ, ಕುದುರೆಗುಂಡಿ ಸಮುದಾಯ ಆರೋಗ್ಯಾಧಿಕಾರಿ ಮುಖೆಶ್ ಕುಮಾರ್‌, ವಾಟರ್‌ ಮ್ಯಾನ್‌ ಸಾದು, ದೈಹಿಕ ಶಿಕ್ಷಕ ಮೋಹನ್‌, ದಾನಿ ಸುನೀತ್‌ ಹೆಗ್ಡೆ ಅವರನ್ನು ಸನ್ಮಾನಿಸಲಾಯಿತು. ಮುಖ್ಯ ಅತಿಥಿಗಳಾಗಿ ಬಿಂತ್ರವಳ್ಳಿ ಗ್ರಾಪಂ ಅಧ್ಯಕ್ಷೆ ವಿದ್ಯಾ ಚಂದ್ರಶೇಖರ್‌, ಉಪಾಧ್ಯಕ್ಷ ಕೆ.ಎನ್‌. ಗಣೇಶ್‌, ಸದಸ್ಯರಾದ ಹೇಮಂತ್‌ ಕುಮಾರ್, ಕವಿತ,ಅಂಬಿಕ, ಶಾಲಾ ಎಸ್.ಡಿ.ಎಂ.ಸಿ.ಅಧ್ಯಕ್ಷೆ ದೀಪ್ತಿ ದಿನೇಶ್‌, ಕುದುರೆಗುಂಡಿ ಕಾಫಿ ಬೆಳೆಗಾರ ದೀಪಕ್, ಕೊಪ್ಪ ಬಗರ್‌ ಹುಕುಂ ಸಮಿತಿ ಸದಸ್ಯ ನುಗ್ಗಿ ಮಂಜುನಾಥ್‌, ಎಸ್.ಡಿ.ಎಂ.ಸಿ. ಉಪಾಧ್ಯಕ್ಷ ಲಕ್ಷ್ಮಣ, ಸದಸ್ಯರಾದ ಚಂದ್ರಶೇಖರ, ಕುಸುಮ, ವಿಜೇಂದ್ರ, ಸವಿಕುಮಾರ್‌, ಮೋಹನ್‌,ಶಾಲಾ ಮುಖ್ಯೋಪಾಧ್ಯಾಯಿನಿ ಲೀನಾ ಡಿ.ಕಾಸ್ಟಾ, ಕೊಪ್ಪ ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಛಲವಾದಿ, ಶಿಕ್ಷಣ ಸಂಯೋಜಕ ರವೀಂದ್ರ, ಕೊಪ್ಪ ತಾಲೂಕು ಪ್ರಾ.ಶಾ.ಶಿ. ಸಂಘದ ಅಧ್ಯಕ್ಷ ಮಂಜುನಾಥ್‌ ಮತ್ತಿತರರು ಇದ್ದರು. --- ಬಾಕ್ಸ್‌ --- ಮುಂದಿನ ದಿನಗಳಲ್ಲಿ ಕರ್ನಾಟಕ ನವೀಕರಿಸಬಹುದಾದ ಇಂಧನ ನಿಗಮದಿಂದ ರಾಜ್ಯಾದ್ಯಂತ ರೈತರಿಗೆ ಶೇ. 80 ರಷ್ಟು ಸಬ್ಸಿಡಿ ದರದಲ್ಲಿ ಸೋಲಾರ್‌ ಪಂಪ್‌ಸೆಟ್, ಸೋಲಾರ್ ಲೈಟ್‌ ನೀಡುವ ಚಿಂತನೆ ಮಾಡಿದ್ದೇನೆ. ಖಾಸಗಿಯವರ ಬರಡು ಭೂಮಿ ಇದ್ದರೆ ಅಲ್ಲಿ ಸೋಲಾರ್‌ ಯೂನಿಟ್‌ ಅಳವಡಿಸುವ ಚಿಂತನೆ ಮಾಡಲಾಗಿದೆ. ಪಾವಗಡದಲ್ಲಿ 8,500 ಎಕ್ರೆ ಜಾಗದಲ್ಲಿ ಸೋಲಾರ್‌ ಯೂನಿಟ್ ಅಳವಡಿಸಿ ದಿನಕ್ಕೆ 2 ಸಾವಿರ ಮೆಗಾವಿಟ್‌ ವಿದ್ಯುತ್‌ ಉತ್ಪಾದನೆ ಮಾಡುವ ಚಿಂತನೆ ನಡೆಸಿದ್ದೇನೆ ಎಂದು ಶಾಸಕ ರಾಜೇಗೌಡ ತಿಳಿಸಿದರು.