ಕನ್ನಡಪ್ರಭ ವಾರ್ತೆ ಮದ್ದೂರು

ನಗರ ವ್ಯಾಪ್ತಿಗೆ ಬರುವ ಗೆಜ್ಜಲಗೆರೆ ಮತ್ತು ಸೋಮನಹಳ್ಳಿ ವಿವಿಧ ಕೈಗಾರಿಕೆ ಕಂಪನಿಗಳ ಸಿಎಸ್‌ಆರ್ ನಿಧಿಯಿಂದ ಹಲವು ಕ್ಷೇತ್ರಗಳಿಗೆ ಮೂಲ ಸೌಕರ್ಯಗಳನ್ನು ಒದಗಿಸಲಾಗುವುದು ಎಂದು ಶಾಸಕ ಕೆ.ಎಂ.ಉದಯ್ ಹೇಳಿದರು.

ಸೋಮನಹಳ್ಳಿ ಕೈಗಾರಿಕಾ ಪ್ರದೇಶದ ಶಿವಂ ಮತ್ತು ಶಿವಶಕ್ತಿ ಫ್ಲೈವುಡ್ ಕಂಪನಿಗಳ ಸಿಎಸ್‌ಆರ್ ನಿಧಿಯಿಂದ ನಗರಸಭೆ ಕಚೇರಿಗೆ ಕಂಪ್ಯೂಟರ್‌ಗಳನ್ನು ಹಸ್ತಾಂತರ ಮಾಡಿ ಮಾತನಾಡಿದರು.

ನಗರಸಭಾ ವ್ಯಾಪ್ತಿಗೆ ಒಳಪಟ್ಟಿರುವ ಗೆಜ್ಜಲಗೆರೆ, ಸೋಮನಹಳ್ಳಿ ಎರಡು ಕೈಗಾರಿಕಾ ಪ್ರದೇಶಗಳಲ್ಲಿ ಅಂದಾಜು 15 ಕೋಟಿ ರು.ಗೂ ಹೆಚ್ಚಿನ ಅನುದಾನದಲ್ಲಿ ರಸ್ತೆ, ಚರಂಡಿ ಹಾಗೂ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಲಾಗಿದೆ ಎಂದರು.

ಈಗಾಗಲೇ ತಾಲೂಕಿನ ಕೈಗಾರಿಕೋದ್ಯಮಿಗಳ ಸಭೆಯನ್ನು ಆಯೋಜಿಸಿ ಅವರಲ್ಲಿ ಕ್ಷೇತ್ರದ ಅಭಿವೃದ್ಧಿಗೆ ಕೈಗಾರಿಕೆಗಳ ಸಹಕಾರವು ಅತ್ಯಗತ್ಯವಾಗಿದೆ. ಹೀಗಾಗಿ ಸಿಎಸ್‌ಆರ್ ನಿಧಿಯಿಂದ ವಿವಿಧ ಕ್ಷೇತ್ರಗಳಿಗೆ ಮೂಲ ಸೌಕರ್ಯ ಒದಗಿಸುವಂತೆ ಮನವಿ ಮಾಡಲಾಗಿತ್ತು ಎಂದರು.


ಸೋಮನಹಳ್ಳಿಯ ಶಿವಂ ಮತ್ತು ಶಿವಶಕ್ತಿ ಪ್ಲೈವುಡ್ ಕಂಪನಿಗಳು ನಗರಸಭೆ ಕಚೇರಿಗೆ ಕಂಪ್ಯೂಟರ್ ಗಳನ್ನು ವಿತರಿಸಿವೆ. ಮುಂದಿನ ದಿನಗಳಲ್ಲಿ ಶಿಕ್ಷಣ, ಆರೋಗ್ಯ, ಕುಡಿಯುವ ನೀರು ಘಟಕ ಹಾಗೂ ಬಸ್ ನಿಲ್ದಾಣಗಳನ್ನು ನಿರ್ಮಾಣ ಮಾಡಲು ಅಗತ್ಯ ಸಹಕಾರ ನೀಡುವಂತೆ ಮನವಿ ಮಾಡಲಾಗಿದೆ ಎಂದರು.

ತಾಲೂಕಿನ ಎರಡು ಕಡೆ ಬೃಹತ್ ಕೈಗಾರಿಕಾ ಪ್ರದೇಶವಿದೆ. ರಾಜ್ಯದ ಉದ್ಯಮಿಗಳು ಕೈಗಾರಿಕೆಗಳನ್ನು ನಿರ್ಮಾಣ ಮಾಡುವುದಾದರೆ ನಮ್ಮ ಸರ್ಕಾರ ಮೂಲ ಸೌಕರ್ಯದ ಜತೆಗೆ ಅಗತ್ಯ ಸಹಕಾರ ನೀಡಲಾಗುವುದು ಎಂದರು.

ಈ ವೇಳೆ ಉದ್ಯಮಿಗಳಾದ ದರ್ಶನ್ ಪಟೇಲ್, ಹಿತೇಶ್ ಪಟೇಲ್, ನಗರಸಭಾ ಪೌರಾಯುಕ್ತೆ ರಾಧಿಕಾ, ವ್ಯವಸ್ಥಾಪಕ ಶ್ರೀಧರ್, ಪರಿಸರ ಅಭಿಯಂತರ ಅರ್ಚನಾ ಆರಾಧ್ಯ, ರಾಜಸ್ವ ನಿರೀಕ್ಷಕರಾದ ಪುಟ್ಟಸ್ವಾಮಿ, ಲೋಕೇಶ್, ಆರೋಗ್ಯ ನಿರೀಕ್ಷಕ ಕೀರ್ತಿ ಕುಮಾರ್. ಮತ್ತಿತರರು ಇದ್ದರು.