ರೋಸ್ಟರ ಪದ್ಧತಿ ಅನ್ವಯ ಬಿ ಮತ್ತು ಸಿ ವರ್ಗದ ಅಭ್ಯರ್ಥಿಗಳಿಗೆ ಬಹುದೊಡ್ಡ ಅನ್ಯಾಯವಾಗಲಿದೆ

ಕುಷ್ಟಗಿ: ಅವೈಜ್ಞಾನಿಕ ಒಳಮೀಸಲಾತಿ ಜಾರಿಯಿಂದ ಕೊಲಂಬೊ (ಕೊರಚ,ಲಂಬಾಣಿ, ಭೋವಿ) ಸಮುದಾಯಕ್ಕೆ ಬಹುದೊಡ್ಡ ಅನ್ಯಾಯವಾಗುತ್ತಿದ್ದು, ಇದನ್ನು ರದ್ದುಗೊಳಿಸುವಂತೆ ಒತ್ತಾಯಿಸಿ ಮಾ. 24ರಂದು ಬೆಂಗಳೂರು ಚಲೋ ಹೋರಾಟ ಹಮ್ಮಿಕೊಳ್ಳಲಾಗಿದೆ ಎಂದು ಕೊಲಂಬೊ ಸಮುದಾಯದ ತಾಲೂಕಾಧ್ಯಕ್ಷ ಪರಸಪ್ಪ ಅಮರಾವತಿ ಹೇಳಿದರು.

ಪಟ್ಟಣದ ಹಳೆ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರ ನಾಗಮೋಹನದಾಸ ಆಯೋಗ ವರದಿ ಪ್ರಕಾರ ಒಳಮೀಸಲಾತಿ ಜಾರಿಗೆ ತಂದು ಉದ್ಯೋಗ ನೇಮಕಾತಿಗೆ ಮುಂದಾಗಿರುವುದು ಖಂಡನೀಯ. ಈ ನೇಮಕಾತಿಯ ರೋಸ್ಟರ ಪದ್ಧತಿಯು ಸಂಪೂರ್ಣ ಅವೈಜ್ಞಾನಿಕವಾಗಿದ್ದು ಇದನ್ನು ಕೈಬಿಟ್ಟು ಹಳೆ ಮೀಸಲಾತಿ ಪದ್ಧತಿಯಲ್ಲಿ ನೇಮಕಾತಿ ಮಾಡಲು ಮುಂದಾಗಬೇಕು ಎಂದರು.

ರೋಸ್ಟರ ಪದ್ಧತಿ ಅನ್ವಯ ಬಿ ಮತ್ತು ಸಿ ವರ್ಗದ ಅಭ್ಯರ್ಥಿಗಳಿಗೆ ಬಹುದೊಡ್ಡ ಅನ್ಯಾಯವಾಗಲಿದೆ, ಇದರ ವಿರುದ್ಧ ಮಾ. 24ರಂದು ಕೊರಚ, ಲಂಬಾಣಿ, ಭೋವಿ ಸೇರಿದಂತೆ 101 ಜಾತಿಗಳ ದಮನಿತ ಸಮುದಾಯದವರು ಸುಮಾರು 6 ಲಕ್ಷಕ್ಕೂ ಅಧಿಕ ಜನರು ಬೆಂಗಳೂರು ಪ್ರೀಡಂ ಪಾರ್ಕನಲ್ಲಿ ಬೃಹತ್ ಹೋರಾಟ ಹಮ್ಮಿಕೊಂಡಿದ್ದೇವೆ ಎಂದರು.

ಈ ಮೀಸಲಾತಿ ಪದ್ಧತಿಯಿಂದ ನಮ್ಮ ದಮನಿತ ಸಮುದಾಯಗಳು ಸುಮಾರು ಮೂವತ್ತು ವರ್ಷಗಳ ಹಿಂದಕ್ಕೆ ಹೋಗುವಂತಾಗಿದೆ. ಇದರಲ್ಲಿ ಅನೇಕ ಲೋಪದೋಷ ಇದ್ದು ಇದುವರೆಗೂ ಇನ್ನೂ ತಾರ್ಕಿಕ ಅಂತ್ಯ ಕಂಡಿಲ್ಲ, ಎಬಿಸಿ ಜಾತಿ ಪ್ರಮಾಣ ಪತ್ರ ನಿಯಮದಿಂದ ಅನೇಕರು ಸೌಲಭ್ಯ ವಂಚಿತರಾಗಿದ್ದಾರೆ. ಸಾಮಾನ್ಯ ಕ್ಷೇತ್ರದಲ್ಲಿ ಪೈಪೋಟಿ ಮಾಡಬೇಕಿದೆ ಈ ಮೀಸಲಾತಿ ಪದ್ಧತಿಯು ನಮಗೆ ಮರಣ ಶಾಸನವಾಗಲಿದೆ ಎಂದರು.

ಸುಮಾರು 101 ದಮನಿತ ಸಮುದಾಯದ ಅಭಿವೃದ್ಧಿಗಾಗಿ ಸರ್ಕಾರ ನ್ಯಾಯ ಸಮ್ಮತವಾಗಿ ಒಳಮೀಸಲಾತಿ ಜಾರಿಗೆ ತರುವ ಮೂಲಕ ನಮಗೆ ರಾಜಕೀಯ,ಶೈಕ್ಷಣಿಕ ಸಾಮಾಜಿಕವಾಗಿ ಅಭಿವೃದ್ಧಿ ಮಾಡುವತ್ತ ಚಿಂತನೆ ನಡೆಸಬೇಕು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಕೊಲಂಬೋ ಸಮುದಾಯದ ಮುಖಂಡರಾದ ಮಂಜುನಾಥ ಭಜಂತ್ರಿ, ಅಮರೇಶ ರಾಠೋಡ. ಹನಮೇಶ ಭೋವಿ, ನಾಗರಾಜ ಭೋವಿ, ಹನಮಂತಪ್ಪ, ಈಶಪ್ಪ ಭೋವಿ, ಸೇರಿದಂತೆ ಅನೇಕರು ಇದ್ದರು.