ಅರೆಭಾಷೆ ಅಕಾಡೆಮಿಯಲ್ಲಿ ಕೊಡಗಿನವರಿಗೆ ಅನ್ಯಾಯ: ಸೂದನ ಈರಪ್ಪ ಅಸಮಾಧಾನ

| Published : Mar 19 2024, 12:53 AM IST

ಅರೆಭಾಷೆ ಅಕಾಡೆಮಿಯಲ್ಲಿ ಕೊಡಗಿನವರಿಗೆ ಅನ್ಯಾಯ: ಸೂದನ ಈರಪ್ಪ ಅಸಮಾಧಾನ
Share this Article
  • FB
  • TW
  • Linkdin
  • Email

ಸಾರಾಂಶ

ಕಳೆದ ಅವಧಿಯಲ್ಲಿ ದಕ್ಷಿಣ ಕನ್ನಡದವರು ಅಧ್ಯಕ್ಷ ಸ್ಥಾನವನ್ನು ಅಲಂಕರಿಸಿ ಆಗಿದೆ. ಮತ್ತೆ ಈ ಬಾರಿ ಕೂಡ ಅದೇ ಜಿಲ್ಲೆಗೆ ಅಧ್ಯಕ್ಷ ಸ್ಥಾನ ನೀಡಿರುವ ಔಚಿತ್ಯವೇನು ಎಂದು ಪ್ರಶ್ನಿಸಿರುವ ಸೂದನ ಈರಪ್ಪ, ಸ್ವಾಭಿಮಾನವಿದ್ದರೆ ಕೊಡಗಿನ ಅರೆಭಾಷಿಕ ಕಾಂಗ್ರೆಸ್ಸಿಗರು ತಮ್ಮ ಹಕ್ಕನ್ನು ಪ್ರತಿಪಾದನೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಮಡಿಕೇರಿ

ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷರ ಆಯ್ಕೆ ಸಂದರ್ಭ ಈ ಬಾರಿ ಕೂಡ ಕೊಡಗಿನವರಿಗೆ ಅನ್ಯಾಯ ಮಾಡಲಾಗಿದೆ ಎಂದು ಚಿಂತಕ ಸೂದನ ಎಸ್.ಈರಪ್ಪ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಅರೆಭಾಷೆಯ ಸಾಹಿತ್ಯ-ಸಂಸ್ಕೃತಿ ಆಚಾರ-ವಿಚಾರಗಳನ್ನು ಪೂರ್ವಕಾಲದಿಂದಲೂ ಉಳಿಸಿ-ಬೆಳೆಸಿಕೊಂಡು ಬಂದಿರುವ ಕೊಡಗಿನ ಅರೆಭಾಷಿಕರನ್ನು ಕಡೆಗಣಿಸುವ ಸರ್ಕಾರದ ಪ್ರಯತ್ನ ಖಂಡನೀಯ ಎಂದು ತಿಳಿಸಿದ್ದಾರೆ.

ಕೊಡಗು ಜಿಲ್ಲೆಯಲ್ಲಿ ತಲೆತಲಾಂತರಗಳಿಂದ ಎಲ್ಲ ಭಾಷಿಕರೊಂದಿಗೆ ಸೌಹಾರ್ದತೆಯಿಂದ ನಡೆದುಕೊಳ್ಳುತ್ತಾ ಅರೆಭಾಷೆ ಮತ್ತು ಸಾಹಿತ್ಯವನ್ನು ಬೆಳೆಸುತ್ತಿರುವ ಅರೆಭಾಷಿಕರಿಗೆ ಅನ್ಯಾಯವಾಗಿದೆ. ಕಾಂಗ್ರೆಸ್ ಪಕ್ಷದಲ್ಲಿ ಕಳೆದ ಅನೇಕ ವರ್ಷಗಳಿಂದ ಸಕ್ರಿಯ ಕಾರ್ಯಕರ್ತರಾಗಿ ದುಡಿಯುತ್ತಿರುವ ಅರೆಭಾಷಿಕ ನಾಯಕರು, ಸರ್ಕಾರದ ಈ ಮಲತಾಯಿ ಧೋರಣೆಯನ್ನು ಸಹಿಸಿಕೊಂಡಿರುವುದು ಆಶ್ಚರ್ಯಕ್ಕೆ ಕಾರಣವಾಗಿದೆ. ಸುಮಾರು 25 ವರ್ಷಗಳ ನಂತರ ಜಿಲ್ಲೆಯಲ್ಲಿ ಇಬ್ಬರು ಕಾಂಗ್ರೆಸ್ ಶಾಸಕರ ಆಯ್ಕೆಯಾಗಿದೆ. ಇದಕ್ಕೆ ಪ್ರತಿಯಾಗಿ ಮತ್ತು ಅರೆಭಾಷಿಕ ಕಾರ್ಯಕರ್ತರ ಶ್ರಮಕ್ಕೆ ಪ್ರತಿಫಲವಾಗಿ ಅಕಾಡೆಮಿಯ ಅಧ್ಯಕ್ಷ ಸ್ಥಾನವನ್ನು ಕೊಡಗು ಜಿಲ್ಲೆಗೆ ನೀಡಬೇಕಾಗಿತ್ತು ಎಂದಿದ್ದಾರೆ.

ಕಳೆದ ಅವಧಿಯಲ್ಲಿ ದಕ್ಷಿಣ ಕನ್ನಡದವರು ಅಧ್ಯಕ್ಷ ಸ್ಥಾನವನ್ನು ಅಲಂಕರಿಸಿ ಆಗಿದೆ. ಮತ್ತೆ ಈ ಬಾರಿ ಕೂಡ ಅದೇ ಜಿಲ್ಲೆಗೆ ಅಧ್ಯಕ್ಷ ಸ್ಥಾನ ನೀಡಿರುವ ಔಚಿತ್ಯವೇನು ಎಂದು ಪ್ರಶ್ನಿಸಿರುವ ಸೂದನ ಈರಪ್ಪ, ಸ್ವಾಭಿಮಾನವಿದ್ದರೆ ಕೊಡಗಿನ ಅರೆಭಾಷಿಕ ಕಾಂಗ್ರೆಸ್ಸಿಗರು ತಮ್ಮ ಹಕ್ಕನ್ನು ಪ್ರತಿಪಾದನೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.

ವಿರಾಜಪೇಟೆ ಕ್ಷೇತ್ರದ ಶಾಸಕರು ಹಾಗೂ ಮಡಿಕೇರಿ ಕ್ಷೇತ್ರದ ಶಾಸಕರು ಜಿಲ್ಲೆಯ ಅರೆಭಾಷಿಕರಿಗೆ ಅಧ್ಯಕ್ಷ ಸ್ಥಾನ ಕಲ್ಪಿಸುವ ಕುರಿತು ಆಸಕ್ತಿ ತೋರಬೇಕಾಗಿತ್ತು. ಆದರೆ ಈ ನಿರೀಕ್ಷೆ ಹುಸಿಯಾಗಿದೆ, ಹಿಂದಿನ ಅರೆಭಾಷೆ ಅಕಾಡೆಮಿ ಆಡಳಿತ ರಚಿಸಿದ್ದ ‘ಶಬ್ದ’ ಕೋಶದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಗ್ರಾಮ ಹಾಗೂ ಮನೆಗಳ ಹೆಸರನ್ನು ಹಾಕಿ ಕೊಡಗಿನಲ್ಲಿರುವ ಗ್ರಾಮಗಳ ಹೆಸರನ್ನು ಕೈಬಿಟ್ಟಿರುವುದು ಗಮನಾರ್ಹ ಅಂಶವಾಗಿದೆ ಮತ್ತು ತಾರತಮ್ಯದ ಸಂಕೇತವಾಗಿದೆ ಎಂದು ಆರೋಪಿಸಿದ್ದಾರೆ.

1985ರಲ್ಲಿ ಪ್ರಪ್ರಥಮವಾಗಿ ನಾನು ಹಾಗೂ ಮಿತ್ರರು ಸೇರಿಕೊಂಡು ‘ಗೌಡ ಕನ್ನಡ’ದಲ್ಲಿ ‘ಗೌಡದೊನಿ’ ಎಂಬ ಸಂಕಲನ ರಚಿಸಿ ಭಾಷೆಗೊಂದು ರೂಪ ಕೊಟ್ಟು ವಿಶ್ವದೆಲ್ಲೆಡೆ ಪರಿಚಯಿಸಿದ್ದೆವು. ಮುಂದಿನ ಮೇ 10ರಂದು ಸಣ್ಣ ಪುಲಿಕೋಟು ಗ್ರಾಮದಲ್ಲಿ ಡಾ.ಕಾವೇರಿ ಮನೆ ಬೋಜಪ್ಪನವರ 94ನೇ ಜನ್ಮದಿನದಂದು ‘ಗೌಡ ಬಾಸೆ’ ಎಂಬ ಹೆಸರಿನ ಸುಮಾರು 12 ಸಾವಿರ ಶಬ್ದಗಳ ಪದಕೋಶವನ್ನು ಹೊರ ತರುತ್ತಿದ್ದೇವೆ. ನನ್ನದೇ ಸಂಪಾದಕೀಯದಲ್ಲಿ ಈ ಶಬ್ದಕೋಶದ ಸಂಗ್ರಹ ಕಾರ್ಯ 16 ವರ್ಷಗಳಿಂದ ನಡೆಯುತ್ತಿದೆ ಎಂದು ಸೂದನ ಈರಪ್ಪ ತಿಳಿಸಿದ್ದಾರೆ.