ಆನಂದಪುರ: ಶನಿವಾರ ರಾತ್ರಿ ಆನಂದಪುರ ಠಾಣೆಯ ಪಿಎಸ್ಐ ಪ್ರವೀಣ್ ಅವರು ತಮ್ಮ ವ್ಯಾಪ್ತಿಯಲ್ಲಿ ರಾತ್ರಿ ಸಂಚರಿಸುವ ಬಸ್ಗಳನ್ನು ತಪಾಸಣೆ ನಡೆಸಿದರು.
ಇತ್ತೀಚಿನ ದಿನಗಳಲ್ಲಿ ಖಾಸಗಿ ಬಸ್ಗಳಲ್ಲಿ ಬೆಂಕಿ ಅವಗಡ ಸಂಭವಿಸಿದ ಘಟನೆಯಿಂದ ಆನಂದಪುರದ ರಾಷ್ಟ್ರೀಯ ಹೆದ್ದಾರಿಯಲ್ಲಿ ರಾತ್ರಿ ವೇಳೆ ಸಂಚರಿಸುವ ಖಾಸಗಿ ಹಾಗೂ ಸರ್ಕಾರಿ ಬಸ್ಗಳಲ್ಲಿ ಪ್ರಯಾಣಿಕರ ಸುಖಕರ ಪ್ರಯಾಣಕ್ಕೆ ಉತ್ತಮ ವ್ಯವಸ್ಥೆ ಇರಬೇಕು ಹಾಗೆ ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಪ್ರಯಾಣಿಕರು ಸುರಕ್ಷಿತವಾಗಿ ನಿರ್ಗಮಿಸಲು ಕಿಟಕಿ ಮತ್ತು ನಿರ್ಗಮನ ದ್ವಾರಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿವೆಯೇ ಎಂಬುದನ್ನು ಪರಿಶೀಲನೆ ನಡೆಸಿದರು.ರಾತ್ರಿ ಸಂಚರಿಸುವ ಬಸ್ನಲ್ಲಿ ಅಗ್ನಿ ಅವಘಡ ಅಥವಾ ಅಪಘಾತದಂತಹ ತುರ್ತು ಸಂದರ್ಭಗಳಲ್ಲಿ ಪ್ರಯಾಣಿಕರ ಸುರಕ್ಷತೆಯ ದೃಷ್ಟಿಯಿಂದ ತುರ್ತು ನಿರ್ಗಮನ ವ್ಯವಸ್ಥೆಗಳು ಸುಗಮವಾಗಿ ತೆರೆಯುವಂತೆ ಇರಬೇಕು. ಯಾವುದೇ ಅಡಚಣೆ ಉಂಟಾಗದಂತೆ ನೋಡಿಕೊಳ್ಳಬೇಕು. ಅಲ್ಲದೆ ಬಸ್ನಲ್ಲಿ ಸ್ಪೋಟಗೊಳ್ಳುವಂತಹ ವಸ್ತುಗಳನ್ನು ರವಾನೆ ಮಾಡದಂತೆ ಸೂಚನೆ ನೀಡಿದರು.
ಬಸ್ ಪರಿಶೀಲನೆ ವೇಳೆ ಕೆಲವು ಬಸ್ಗಳಲ್ಲಿ ಸಣ್ಣಪುಟ್ಟ ದೋಷಗಳು ಕಂಡುಬಂದಿದ್ದು, ಅವುಗಳನ್ನು ತಕ್ಷಣ ಸರಿಪಡಿಸಲು ಮಾಲೀಕರು ಮತ್ತು ಸಿಬ್ಬಂದಿಗೆ ಸೂಚಿಸಲಾಯಿತು. ನಿಯಮ ಉಲ್ಲಂಘನೆ ಮಾಡಿದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು. ರಾತ್ರಿ ವೇಳೆ ಸಂಚರಿಸುವ ಬಸ್ಸುಗಳು ಬಸ್ ನಿಲ್ದಾಣವನ್ನು ಬಿಡುವ ಮೊದಲು ಒಮ್ಮೆ ಎಲ್ಲವನ್ನು ಚಾಲಕ ಹಾಗೂ ನಿರ್ವಾಹಕರು ಪರಿಶೀಲನೆ ನಡೆಸಬೇಕು. ಪ್ರಯಾಣಿಕರ ಜೀವಭದ್ರತೆಯ ದೃಷ್ಟಿಯಿಂದ ಎಲ್ಲಾ ಬಸ್ ಮಾಲೀಕರು, ಚಾಲಕರು ಮತ್ತು ನಿರ್ವಾಹಕರು ಸುರಕ್ಷತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದರು.