ಸಾರಾಂಶ
ಮಣಿಪಾಲ ಬ್ರಹ್ಮಕುಮಾರೀಸ್ ಶಾಖೆ ವತಿಯಿಂದ ‘ಸಮಸ್ಯೆಗಳನ್ನು ಅವಕಾಶಗಳನ್ನಾಗಿ ಪರಿವರ್ತಿಸಿರಿ’ ಎಂಬ ಪ್ರವಚನ ಕಾರ್ಯಕ್ರಮ ನಡೆಯಿತು. ಮುಂಬೈಯಿಂದ ಡಾ. ಸಚಿನ್ ಪರಬ್ ಆಗಮಿಸಿ ಅನೇಕ ಸ್ಲೈಡ್ಸ್ ಮುಖಾಂತರ ಸಭಿಕರನ್ನು ಉದ್ದೇಶಿಸಿ ಮಾತನಾಡಿದರು.
ಕನ್ನಡಪ್ರಭ ವಾರ್ತೆ ಮಣಿಪಾಲ
ಇಲ್ಲಿನ ಬ್ರಹ್ಮಾ ಕುಮಾರೀಸ್ ಶಾಖೆ ವತಿಯಿಂದ ‘ಸಮಸ್ಯೆಗಳನ್ನು ಅವಕಾಶಗಳನ್ನಾಗಿ ಪರಿವರ್ತಿಸಿರಿ’ ಎಂಬ ಪ್ರವಚನ ಕಾರ್ಯಕ್ರಮ ನಡೆಯಿತು.ಮುಂಬೈಯಿಂದ ಡಾ. ಸಚಿನ್ ಪರಬ್ ಆಗಮಿಸಿ ಅನೇಕ ಸ್ಲೈಡ್ಸ್ ಮುಖಾಂತರ ಸಭಿಕರನ್ನು ಉದ್ದೇಶಿಸಿ, ಜೀವನದಲ್ಲಿ ಬರುವ ನಾನಾ ತರಹದ ಸಮಸ್ಯೆಗಳನ್ನು ಎದುರಿಸಿ ವಿಜಯಶಾಲಿಯಾಗಲು ಉಪಯುಕ್ತ ಸಲಹೆ - ಸೂಚನೆಗಳನ್ನು ವಿವರಿಸಿ ತಿಳಿಸಿಕೊಟ್ಟರು.
ಹೇಗೆ ಬೀಗಕ್ಕೆ ಒಂದು ಬೀಗದ ಕೈ ಇರುವುದೋ ಹಾಗೆ ಪ್ರತಿಯೊಂದು ಸಮಸ್ಯೆಗೂ ಪರಿಹಾರವು ಇದ್ದೇ ಇರುತ್ತದೆ. ಸೋಲೇ ಗೆಲುವಿಗೆ ಸೋಪಾನ. ಹಿಂಜರಿಯದೆ, ಹಿಮ್ಮೆಟ್ಟದೆ, ಸವಾಲುಗಳನ್ನು ಸ್ವೀಕರಿಸಿ ಸಕಾರಾತ್ಮಕವಾಗಿ ಎದುರಿಸಿದಾಗ ಗೆಲುವು ನಮ್ಮದಾಗಿಯೇ ಬಿಡುವುದು. ಜೀವನದಲ್ಲಿ ಛಲ ಮುಖ್ಯ, ಛಲವಿದ್ದಲ್ಲಿ ಬಲ ತನ್ನಷ್ಟಕ್ಕೆ ತಾನಾಗಿಯೇ ಒದಗಿಬರುವುದು. ಇಂತಹ ಅನೇಕ ಛಲವಾದಿಗಳಾದ ಥಾಮಸ್ ಅಲ್ವಾ ಎಡಿಸನ್, ಐಸಾಕ್ ನ್ಯೂಟನ್, ಅಬ್ದುಲ್ ಕಲಾಂ ಮುಂತಾದರ ಹೆಸರನ್ನು ಉದಾಹರಿಸಿ ತಿಳಿಸಿಕೊಟ್ಟರು.ಇದಲ್ಲದೆ ತಮ್ಮ ವಿದ್ಯಾರ್ಥಿ ಜೀವನದಲ್ಲಿ ಪಡೆದ ಕಡಿಮೆ ಅಂಕಗಳಿಗೆ ಅಂಜದೆ, ಅಳುಕದೆ, ಮುನ್ನುಗ್ಗಿ, ವೈದ್ಯಕೀಯ ವ್ಯಾಸಂಗದಲ್ಲಿಯೂ ಸಹ ಅನುಭವಿಸಿದ ಏಳು-ಬೀಳುಗಳನ್ನು ಲೆಕ್ಕಿಸದೆ ಈಗ ಎಲ್ಲವನ್ನೂ ಅವಕಾಶಗಳನ್ನಾಗಿ ಪರಿವರ್ತಿಸಿಕೊಂಡು ಅವುಗಳ ಬಗ್ಗೆ ಅಪಾರ ಅನುಭವಗಳನ್ನು ಹಂಚಿಕೊಂಡರು.
ಸುಮಾರು 100 ಜನರು ಆಗಮಿಸಿದ್ದು, ಸಭಿಕರೊಂದಿಗೆ ಪ್ರಶ್ನೋತ್ತರವೂ ಸಹ ಜರುಗಿತು. ತರುವಾಯ, ಮೆಡಿಟೇಶನ್ ಆಗಿ ಪ್ರತಿಜ್ಞಾ ವಿಧಿಯನ್ನು ತಿಳಿಸಿದರು. ರಾಜಯೋಗ ಧ್ಯಾನದಿಂದ ಅನೇಕ ಲಾಭಗಳು ಉಂಟು ಎಂಬುದನ್ನು ಮನದಟ್ಟು ಮಾಡಿಸಿದರು. ಕಾರ್ಯಕ್ರಮವು ಸಾತ್ವಿಕ ಭೋಜನದೊಂದಿಗೆ ಸಂಪನ್ನಗೊಂಡಿತು.