ಸಾರಾಂಶ
ಹನೂರು ತಾಲೂಕಿನ ಅಜ್ಜೀಪುರ ಗ್ರಾಮದ ಬಳಿ ನಡೆಯುತ್ತಿರುವ ಸೇತುವೆ ಕಾಮಗಾರಿ ಬಳಿ ಯಾವುದೇ ಸೂಚನಾ ಫಲಕಗಳು ಇಲ್ಲದೆ ಅಪಾಯಕ್ಕೆ ಆಹ್ವಾನ ನೀಡುತ್ತಿರುವ ಕಾಮಗಾರಿ ಸ್ಥಳ.
ಕನ್ನಡಪ್ರಭ ವಾರ್ತೆ ಹನೂರು
ತಾಲೂಕಿನ ಅಜ್ಜೀಪುರ ರಸ್ತೆಯಲ್ಲಿ ನಡೆಯುತ್ತಿರುವ ಸೇತುವೆ ಕಾಮಗಾರಿ ಬಳಿ ನಾಮಫಲಕಗಳನ್ನು ಮುನ್ನೆಚ್ಚರಿಕೆ ಕ್ರಮವಾಗಿ ಗುತ್ತಿಗೆದಾರರು ಅಳವಡಿಸಬೇಕು ಎಂದು ವಾಹನ ಸವಾರರು ಒತ್ತಾಯಿಸಿದ್ದಾರೆ.ಹನೂರು ಪಟ್ಟಣದಿಂದ ಅರ್ಜಿಪುರ ಮಾರ್ಗವಾಗಿ ತೆರಳುವ ಮಾರ್ಗದಲ್ಲಿ ಅರಣ್ಯ ಪ್ರದೇಶದಿಂದ ಗ್ರಾಮ ಅಂಚಿನ ಈ ರಸ್ತೆಯಲ್ಲಿ ತೀವ್ರ ತಿರುವು ಇದ್ದು, ನಾಮಫಲಕಗಳನ್ನು ಕಾಮಗಾರಿ ನಡೆಸುತ್ತಿರುವ ಗುತ್ತಿಗೆದಾರರು ಅಳವಡಿಸದೆ ಇರುವುದರಿಂದ ಅರ್ಜಿಪುರದಿಂದ ಹನೂರು ಕಡೆಗೆ, ಹನೂರಿನಿಂದ ಅಜ್ಜೀಪುರ, ರಾಮಪುರ, ಮಾರ್ಟಳ್ಳಿ, ಮಿಣ್ಣೆಂ, ಗಾಜನೂರು ಕೊಪ್ಪ ಗಡಿಯಂಚಿನ ಹೂಗ್ಯಂ ಸೇರಿದಂತೆ ನಾಲ್ರೋಡ್ ಮಾರ್ಗವಾಗಿ ಗರಿಗೆ ಖಂಡಿ ರಸ್ತೆಯಲ್ಲಿ ತಮಿಳುನಾಡಿಗೆ ಸರಕು ಸಾಗಾಣಿಕೆ ವಾಹನಗಳು ಸಂಚರಿಸುವುದರಿಂದ ಈ ರಸ್ತೆಯಲ್ಲಿ ನಡೆಯುತ್ತಿರುವ ಸೇತುವೆ ಕಾಮಗಾರಿಗಳ ಬಳಿ ಸೂಚನಾ ನಾಮಫಲಕಗಳು ಮುನ್ನೆಚ್ಚರಿಕೆ ಕ್ರಮ ಅನುಸರಿಸದೇ ಅವೈಜ್ಞಾನಿಕವಾಗಿ ನಿರ್ಮಾಣ ಮಾಡಲಾಗುತ್ತಿದೆ.ರಸ್ತೆಯಲ್ಲಿ ನಡೆಯುತ್ತಿರುವ ಸೇತುವೆ ಕಾಮಗಾರಿ ಸ್ಥಳದಲ್ಲಿ ಯಾವುದೇ ಮುನ್ನೆಚ್ಚರಿಕೆ ಸೂಚನಾ ನಾಮಫಲಕಗಳು ಪ್ರಯಾಣಿಕರಿಗೆ ಅಳವಡಿಸದಿರುವುದರಿಂದ ರಾತ್ರಿ ಹಗಲು ತೊಂದರೆ ಅನುಭವಿಸಬೇಕಾಗಿದೆ. ಸಂಬಂಧಪಟ್ಟ ಪಿಡಬ್ಲ್ಯೂಡಿ ಇಲಾಖೆ ಇತ್ತ ಗಮನ ಹರಿಸಿ ಮುಂದೆ ಹಾಕುವ ಅನಾಹುತವನ್ನು ತಪ್ಪಿಸಲು ವಾಹನ ಸವಾರರಿಗೆ ಸೂಚನಾ ಫಲಕವನ್ನು ಅಳವಡಿಸುವಂತೆ ಪ್ರಯಾಣಿಕರು ಹಾಗೂ ಈ ಭಾಗದಲ್ಲಿ ಸಂಚರಿಸುವ ವಾಹನ ಸವಾರರು ಒತ್ತಾಯಿಸಿದ್ದಾರೆ.ತಮಿಳುನಾಡಿಗೆ ಗರಿಕೆ ಕಡ್ಡಿ ಮೂಲಕ ತೆರಳುವ ಮುಖ್ಯರಸ್ತೆ ಸಂಚರಿಸಲಾಗದಷ್ಟು ಗುಂಡಿಮಯವಾಗಿದೆ. ಸೇತುವೆ ಕಾಮಗಾರಿಗಳ ಬಳಿ ಯಾವುದೇ ಸೂಚನಾ ಫಲಕಗಳು ಇಲ್ಲದೆ ವೇಗವಾಗಿ ಬರುವ ವಾಹನಗಳು ಅಪಘಾತಕ್ಕೆ ಒಳಗಾಗುವ ಮುನ್ನ ಸಂಬಂಧ ಪಟ್ಟ ಇಲಾಖೆ ಗಮನ ಹರಿಸಿ ಕಾಮಗಾರಿ ನಡೆಯುವ ಸ್ಥಳಗಳಲ್ಲಿ ಮುನ್ನೆಚ್ಚರಿಕೆ ಸೂಚನಾ ಫಲಕಗಳನ್ನು ಅಳವಡಿಸಬೇಕು. ಇಲ್ಲದಿದ್ದರೆ ಮುಂದೆ ಆಗುವ ಅನಾಹುತಕ್ಕೆ ಗುತ್ತಿಗೆದಾರರು ಹಾಗೂ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳೇ ಹೊಣೆ ಆಗುತ್ತಾರೆ.
ಅಮ್ಜದ್ ಖಾನ್, ಕರ್ನಾಟಕ ರಾಜ್ಯ ರೈತ ಸಂಘ ತಾಲೂಕು ಘಟಕ