ಗುಜರಾತ ಮೂಲದ ಕಂಪೆನಿ ನುರಿತ ಕಾರ್ಮಿಕರು ಹಾಗೂ ಎಂಜಿನಿಯರ್ಗಳನ್ನು ಬಳಕೆ ಮಾಡಿಕೊಂಡು 18ನೇ ಕ್ರಸ್ಟ್ಗೇಟ್ ಅನ್ನು ಹೊಸದಾಗಿ ಅಳವಡಿಕೆ ಮಾಡಲಾಗಿದೆ.
ಹೊಸಪೇಟೆ: ತುಂಗಭದ್ರಾ ಜಲಾಶಯದ ಹೊಸ 18ನೇ ಕ್ರಸ್ಟ್ಗೇಟ್ ಅಳವಡಿಕೆ ಕಾರ್ಯ ಬುಧವಾರ ಯಶಸ್ವಿ ಆಗಿದ್ದು, ತುಂಗಭದ್ರಾ ಮಂಡಳಿ ಹಾಗೂ ನೀರಾವರಿ ಇಲಾಖೆ ಅಧಿಕಾರಿಗಳ ಮೊಗದಲ್ಲಿ ಹರ್ಷ ತಂದಿದೆ. ಈ ವಿಚಾರ ತಿಳಿದು ಜಲಾಶಯ ನೆಚ್ಚಿರುವ ರೈತರು ಕೂಡ ಸಂಭ್ರಮಿಸಿದ್ದಾರೆ.
ಜಲಾಶಯಕ್ಕೆ ಡಿ.24ರಿಂದ ಹೊಸದಾಗಿ 18ನೇ ಕ್ರಸ್ಟ್ಗೇಟ್ ನಿರ್ಮಾಣ ಕಾರ್ಯ ಆರಂಭಿಸಲಾಗಿತ್ತು. ಗುಜರಾತ ಮೂಲದ ಕಂಪೆನಿ ನುರಿತ ಕಾರ್ಮಿಕರು ಹಾಗೂ ಎಂಜಿನಿಯರ್ಗಳನ್ನು ಬಳಕೆ ಮಾಡಿಕೊಂಡು 18ನೇ ಕ್ರಸ್ಟ್ಗೇಟ್ ಅನ್ನು ಹೊಸದಾಗಿ ಅಳವಡಿಕೆ ಮಾಡಲಾಗಿದೆ. ಈ ಕಾರ್ಯವನ್ನು ವೈಜ್ಞಾನಿಕ ತಳಹದಿ ಹಾಗೂ ನಾಜೂಕಿನಿಂದ ಮಾಡಲಾಗಿದೆ. ಜಲಾಶಯದ ಎಲ್ಲ ಕ್ರಸ್ಟ್ಗೇಟ್ಗಳನ್ನು ತೆರವು ಮಾಡಿ ಹೊಸದಾಗಿ ಅಳವಡಿಕೆ ಮಾಡುವ ಕಾರ್ಯಕ್ಕೂ ಕೈ ಹಾಕಿದೆ. ಇನ್ನು ಹಳೇ ಮೂರು ಗೇಟ್ಗಳ ತೆರವು ಕಾರ್ಯವೂ ಯಶಸ್ವಿ ಆಗಿದೆ.ಏತನ್ಮಧ್ಯೆ, ಜಲಾಶಯದ 20ನೇ ಕ್ರಸ್ಟ್ ಗೇಟ್ ಮತ್ತು 27ನೇ ಕ್ರಸ್ಟ್ಗೇಟ್ ಅಳವಡಿಕೆ ಕಾರ್ಯ ಕೂಡ ಪ್ರಗತಿಯಲ್ಲಿದೆ. ಈ ಗೇಟ್ಗಳನ್ನು ಅಳವಡಿಸಿದರೆ ಮೂರು ಗೇಟ್ಗಳನ್ನು ಹೊಸದಾಗಿ ಅಳವಡಿಕೆ ಮಾಡಿದಂತಾಗಲಿದೆ ಎಂದು ತುಂಗಭದ್ರಾ ಮಂಡಳಿ ಅಧಿಕಾರಿಗಳು ತಿಳಿಸಿದ್ದಾರೆ.
ಮುಂಬರುವ ಜೂನ್ ತಿಂಗಳೊಳಗೆ ಎಲ್ಲ ಕ್ರಸ್ಟ್ ಗೇಟ್ಗಳನ್ನು ಅಳವಡಿಕೆ ಮಾಡುವ ಇರಾದೆಯೊಂದಿಗೆ ಕೆಲಸ ಆರಂಭಿಸಲಾಗಿದೆ. ಈಗ 18ನೇ ಕ್ರಸ್ಟ್ಗೇಟ್ ಅಳವಡಿಕೆ ಕಾರ್ಯ ಯಶಸ್ವಿ ಆಗಿದ್ದು, ಹಂತ ಹಂತವಾಗಿ ಉಳಿದ ಗೇಟ್ಗಳನ್ನು ಹೊಸದಾಗಿ ಅಳವಡಿಕೆ ಮಾಡಲಾಗುವುದು. 33 ಕ್ರಸ್ಟ್ಗೇಟ್ಗಳನ್ನು ಅಳವಡಿಕೆ ಮಾಡುವ ಕಾರ್ಯ ಮಾಡಲಾಗುತ್ತಿದೆ ಎಂದು ಮಂಡಳಿ ಕಾರ್ಯದರ್ಶಿ ಓಆರ್ಕೆ ರೆಡ್ಡಿ, ಅಧೀಕ್ಷಕ ಎಂಜನಿಯರ್ ನಾರಾಯಣ ನಾಯ್ಕ ತಿಳಿಸಿದ್ದಾರೆ.ಹೊಸಪೇಟೆಯ ತುಂಗಭದ್ರಾ ಜಲಾಶಯದ 18ನೇ ಕ್ರಸ್ಟ್ಗೇಟ್ ಅಳವಡಿಕೆ ಕಾರ್ಯ ಯಶಸ್ವಿಯಾಗಿ ಬುಧವಾರ ಪೂರ್ಣಗೊಂಡಿದೆ.