ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಮಕ್ಕಳಲ್ಲಿ ಕಲಿಕೆಯ ಹಂತದಲ್ಲಿಯೇ ವೈಜ್ಞಾನಿಕ ಸಂಶೋಧನೆಗಳ ಬಗ್ಗೆ ಆಸಕ್ತಿ ಮೂಡಿಸುವ ಕೆಲಸ ಆಗಬೇಕೆಂದು ಆದಿ ಚುಂಚನಗಿರಿ ಹೇಮಗಿರಿ ಶಾಖಾ ಮಠದ ಗೌರವ ಕಾರ್ಯದರ್ಶಿ ಡಾ.ಜೆ.ಎನ್.ರಾಮಕೃಷ್ಣೇಗೌಡ ಅಭಿಪ್ರಾಯಪಟ್ಟರು.ತಾಲೂಕಿನ ಹೇಮಗಿರಿಯ ಬಿಜಿಎಸ್ ಕೇಂದ್ರೀಯ ಪಠ್ಯ ಕ್ರಮದ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಶಾಲೆ ವತಿಯಿಂದ ಆಯೋಜಿಸಿದ್ದ ವಿಜ್ಞಾನ ವಸ್ತು ಪ್ರದರ್ಶನ ಮತ್ತು ಕಲಾ ಪ್ರದರ್ಶನ ಮೇಳವನ್ನು ಉದ್ಘಾಟಿಸಿ ಮಾತನಾಡಿದರು.
ಮಾನವನ ಕಾರ್ಯ ಚಟುವಟಿಕೆ ಇಂದು ಭೂಮಿಯಿಂದ ಬಾಹ್ಯಾಕಾಶದವರೆಗೆ ವಿಸ್ತರಿಸಿದೆ. ಕಂಪ್ಯೂಟರ್ ಯುಗ ಆರಂಭವಾಗಿದ್ದು ನಮ್ಮ ಅಂಗೈನಲ್ಲಿಯೇ ಸರ್ವ ಜಗತ್ತನ್ನು ಸಂಪರ್ಕಿಸುವ ಮಟ್ಟಕ್ಕೆ ನಮ್ಮ ತಂತ್ರಜ್ಞಾನ ಬೆಳೆದಿದೆ ಎಂದರು.ಇಂದು ಎಐ (ಕೃತಕ ಬುದ್ದಿಮತ್ತೆ) ಎಲ್ಲಾ ಕ್ಷೇತ್ರಗಳನ್ನು ಆವರಿಸಿಕೊಳ್ಳುತ್ತಿದೆ. ಈ ಹೊತ್ತಿನಲ್ಲಿ ವಿಜ್ಞಾನ ಕ್ಷೇತ್ರದ ಬಗ್ಗೆ ಮಕ್ಕಳಲ್ಲಿ ಆಸಕ್ತಿ ಮೂಡುವಂತೆ ಮಾಡುವುದು ಪೋಷಕರ ಕರ್ತವ್ಯ. ಚಿಕ್ಕ ವಯಸ್ಸಿನಲ್ಲೇ ಮಕ್ಕಳು ವಿಜ್ಞಾನದತ್ತ ಆಕರ್ಷಿತರಾಗುವಂತೆ ಮಾಡಬೇಕು. ವಿಜ್ಞಾನದ ಬಗ್ಗೆ ಕುತೂಹಲ ಮೂಡುವಂತೆ ಮಾಡಿದಾಗ ಕಲಿಕೆ ಮತ್ತು ಸಂಶೋಧನೆ ಕಡೆಗೆ ಮಕ್ಕಳು ಆಸಕ್ತಿ ವಹಿಸುವರು ಎಂದು ಹೇಳಿದರು.
ಮಕ್ಕಳಲ್ಲಿರುವವ ವಿಶೇಷ ಪ್ರತಿಭೆಯನ್ನು ಹೊರತರುವ ಉದ್ದೇಶದಿಂದ ಬಿಜಿಎಸ್ ಶಿಕ್ಷಣ ಸಂಸ್ತೆಗೆ ಸೇರಿದ ಎಲ್ಲಾ 27 ಶಾಲೆಗಳಲ್ಲೂ ವಿಜ್ಞಾನ ವಸ್ತು ಪ್ರದರ್ಶನವನ್ನು ಆಯೋಜನೆ ಮಾಡಲಾಗಿದೆ. ವಿಜ್ಞಾನವಸ್ತು ಪ್ರದರ್ಶನದಲ್ಲಿ ಮಕ್ಕಳು ತಮ್ಮ ಪರಿಕಲ್ಪನೆಯಲ್ಲಿ ಹತ್ತು ಹಲವಾರು ವಿಜ್ಞಾನ ಮಾದರಿಗಳನ್ನು ತಯಾರಿಸಿ ಪ್ರದರ್ಶಿಸಿದ್ದಾರೆ ಎಂದು ಶ್ಲಾಘಿಸಿದರು.
ಮಕ್ಕಳು ತಯಾರಿಸಿಕೊಂಡು ಬಂದಿರುವ ಮಾದರಿಗಳನ್ನು ಅತಿಥಿಗಳೊಂದಿಗೆ ಸೇರಿ ವೀಕ್ಷಿಸಿದ ರಾಮಕೃಷ್ಣೇಗೌಡರು ಪೌರಾಣಿಕ ವೇಷಭೂಷಣಗಳನ್ನು ಧರಿಸಿ ಸಂಸ್ಕೃತಿಯ ಪರಿಚಯ ಮಾಡಿದ ಮಕ್ಕಳನ್ನು ಅಭಿನಂಧಿಸಿದರು. ಮನುಷ್ಯನ ಅಂಗಾಂಗಗಳು ಕೆಲಸ ಮನು ಮಾಡುವ ಬಗ್ಗೆ, ಪರಿಸರ, ಕೃಷಿ, ತಂತ್ರಜ್ಞಾನ, ಬಾಹ್ಯಾಕಾಶದ ಸಂಶೋಧನೆಗಳು, ಡ್ಯಾಂ, ವಿದ್ಯುತ್ ಉತ್ಪಾದನೆ, ಮಾದರಿ ಕೃಷಿ, ಮಾದರಿ ನಗರ, ಟೆಕ್ನಾಲಜಿಗಳು ಹೀಗೆ ಹಲವಾರು ಮಾದರಿಯನ್ನು ಪ್ರದರ್ಶನ ಮಾಡುವ ಮೂಲಕ ಮಕ್ಕಳು ಗಮನ ಸೆಳೆದರು.
ಕಾರ್ಯಕ್ರಮದಲ್ಲಿ ರಾಜ್ಯ ಆರ್.ಟಿ.ಓ ಅಧಿಕಾರಿಗಳ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ್, ಪುರಸಭೆ ಮಾಜಿ ಅಧ್ಯಕ್ಷೆ ಪಂಕಜಪ್ರಕಾಶ್, ತಾಲೂಕು ಕಸಾಪ ಮಾಜಿ ಅಧ್ಯಕ್ಷರಾದ ಎಂ.ಕೆ.ಹರಿಚರಣತಿಲಕ್, ಕೆ.ಆರ್.ನೀಲಕಂಠ, ಹಿರಿಯ ಪತ್ರಕರ್ತ ಬಿ.ಎ.ಮಂಜುನಾಥ್ ಸೇರಿದಂತೆ ನೂರಾರು ಮಕ್ಕಳ ಪೋಷಕರು ಇದ್ದರು.