ಸಾರಾಂಶ
ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ
ಮಕ್ಕಳ ಮನಸ್ಸಿನಲ್ಲಿ ಬಾಲ್ಯದಿಂದಲೇ ದೇಶಪ್ರೇಮದ ಬೀಜ ಬಿತ್ತಿ ಅವರನ್ನು ಸತ್ಪ್ರಜೆಗಳನ್ನಾಗಿ ರೂಪಿಸುವ ಜವಾಬ್ದಾರಿ ಶಿಕ್ಷಕರು ಹಾಗೂ ಪಾಲಕರದಾಗಿದೆ ಎಂದು ಹಿರಿಯ ಸಾಹಿತಿ ಅಶೋಕ ಮಣಿ ನುಡಿದರು.ಪಟ್ಟಣದ ವಿದ್ಯಾನಗರ ಬಡಾವಣೆಯಲ್ಲಿರುವ ವಿದ್ಯಾಸ್ಫೂರ್ತಿ ಇಂಟರ್ನ್ಯಾಷನಲ್ ಶಾಲೆಯಲ್ಲಿ ನಡೆದ 79ನೇ ಸ್ವಾತಂತ್ರ್ಯೋತ್ಸವ ಧ್ವಜಾರೋಹಣ ನರೆವೇರಿಸಿದ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮಕ್ಕಳ ಕೈಯಲ್ಲಿ ಮೊಬೈಲ್ ಕೊಡಬೇಡಿ ಪುಸ್ತಕ ಕೊಡಿ. ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿ ಹುತಾತ್ಮರಾದ ಹೋರಾಟಗಾರರ ಬದುಕು ಬರಹ ಕುರಿತು ಬೆಳಕು ಚೆಲ್ಲುವ ವಿಷಯಗಳನ್ನು ಪಠ್ಯಪುಸ್ತಕದಲ್ಲಿ ಅಳವಡಿಸಬೇಕು. ಮಕ್ಕಳಲ್ಲಿ ರಾಷ್ಟ್ರಪ್ರೇಮ ಜಾಗೃತವಾಗುವಂತೆ ಸರ್ಕಾರ ಹಾಗೂ ಶಿಕ್ಷಣ ಇಲಾಖೆ ಮಾಡಬೇಕು ಎಂದರು.
ನಮ್ಮ ದೇಶ ಶೈಕ್ಷಣಿಕ, ವೈಜ್ಞಾನಿಕ, ಆರ್ಥಿಕ ಹಾಗೂ ಸೈನಿಕ ರಂಗದಲ್ಲಿ ಬಲಿಷ್ಟವಾಗಿ ಮುನ್ನುಗ್ಗುತ್ತಿದೆ. ಇದನ್ನು ಕೆಲವೊಂದು ರಾಷ್ಟ್ರಗಳು ಸಹಿಸುತ್ತಿಲ್ಲ. ಜಾತಿ ವಿಷಬೀಜ ಬಿತ್ತಿ, ನಮ್ಮ ಒಗ್ಗಟ್ಟು ಒಡೆಯಲು ನಿರಂತರ ಹುನ್ನಾರ ನಡೆಸುತ್ತಿವೆ. ಹೇಗಾದರೂ ಮಾಡಿ ಭಾರತದ ಕುಗ್ಗಿಸಲು ಆ ಕುತಂತ್ರಿ ರಾಷ್ಟ್ರಗಳು ಪ್ರಯತ್ನಿಸುತ್ತಲೇ ಇವೆ. ಆದರೆ ಭಾರತ ಆ ರಾಷ್ಟ್ರಗಳಿಗೆ ಜಗ್ಗುತ್ತಿಲ್ಲ, ಬಗ್ಗುತ್ತಿಲ್ಲ ಹಾಗೂ ಕುಗ್ಗುತ್ತಿಲ್ಲ. ದಿಟ್ಟ ಉತ್ತರ ಕೊಡುತ್ತಲೇ ಮುನ್ನಡೆದಿದೆ. ಭಾರತೀಯರಾದ ನಾವು ಜಾತಿ, ಮತ, ಪಂಥವೆಂಬ ಭೇದ ಭಾವ ಮಾಡದೇ ಒಂದಾಗಿ ಸದೃಢ ಭಾರತ ಕಟ್ಟಲು ಪಣತೊಡೋಣ ಎಂದು ನುಡಿದರು.ವಿದ್ಯಾಸ್ಫೂರ್ತಿ ಇಂಟರ್ನ್ಯಾಷನಲ್ ಶಾಲೆ ಅಧ್ಯಕ್ಷೆ ಬಸಮ್ಮ ಸಿದರಡ್ಡಿ ಮಾತನಾಡಿ, ಮಕ್ಕಳಿಗೆ ಶಿಕ್ಷಣದ ಜೊತೆಗೆ ಉತ್ತಮ ಸಂಸ್ಕಾರ ನೀಡಿ ಬೆಳೆಸುವುದು ಪ್ರತಿಯೊಬ್ಬ ತಂದೆ-ತಾಯಂದಿರ ಕರ್ತವ್ಯ. ಮಕ್ಕಳ ವಿದ್ಯಾಭ್ಯಾಸದ ಕಡೆಗೆ ನಿರ್ಲಕ್ಷ್ಯ ವಹಿಸುವುದು ಸಲ್ಲದೆಂದರು. ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಮಹಾಂತೇಶ ಸಿದರಡ್ಡಿ ಮಾತನಾಡಿ, ಮಕ್ಕಳಿಗೆ ಪರಿಸರ ಪ್ರಜ್ಞೆ ಮೂಡಿಸಬೇಕು. ಪರಿಸರ ಸಂರಕ್ಷಣೆ ಎಲ್ಲರ ಜವಾಬ್ದಾರಿ ಎಂದರು. ಮುಖ್ಯ ಅತಿಥಿಗಳಾಗಿ ಉದ್ದಿಮೆದಾರ ಸಂಜಯ ಓಸ್ವಾಲ ಆಗಮಿಸಿದ್ದರು. ಅತಿಥಿಗಳಾಗಿ ಹಿರಿಯ ಪತ್ರಕರ್ತ ಶಂಕರ ಹೆಬ್ಬಾಳ, ಮಾಜಿ ಸೈನಿಕ ಗೌಡಪ್ಪ ಚವನಭಾವಿ ಇದ್ದರು. ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮಗಳು ನೆರದ ಜನರ ಗಮನ ಸೆಳೆದವು. ದಂಡಮ್ಮ ಮಡಿವಾಳರ ಶಿಕ್ಷಕಿಯರು ಸ್ವಾಗತಿಸಿದರು. ಅರ್ಶಿಯಾ ಸಂಕನಾಳ ಶಿಕ್ಷಕಿಯರು ವಂದಿಸಿದರು. ಶೈಲಜಾ ಪಾಟೀಲ್ ಶಿಕ್ಷಕಿಯರು ಕಾರ್ಯಕ್ರಮ ನಿರೂಪಿಸಿದರು.