ಅಂಬೇಡ್ಕರ್ ಮೂರ್ತಿಗೆ ಅವಮಾನ: ಆರೋಪಿಗಳ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹ

| Published : Jan 26 2024, 01:47 AM IST

ಅಂಬೇಡ್ಕರ್ ಮೂರ್ತಿಗೆ ಅವಮಾನ: ಆರೋಪಿಗಳ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹ
Share this Article
  • FB
  • TW
  • Linkdin
  • Email

ಸಾರಾಂಶ

ಬಂಧನಕ್ಕೊಳಗಾದ ಕಿಡಿಗೇಡಿಗಳಿಗೆ ಕಠಿಣ ಶಿಕ್ಷೆ ವಿಧಿಸುವ ಮೂಲಕ ಈ ತರಹದ ಘಟನೆಗಳು ಮರುಕಳಿಸದಂತೆ ಕ್ರಮ ವಹಿಸಬೇಕು ಎಂದು ಭೀಮ್ ಆರ್ಮಿ ಮತ್ತು ಎಲ್ಲ ಪ್ರಗತಿಪರ ಸಂಘಟಕರ ಆಗ್ರಹವಾಗಿದೆ.

ಕಂಪ್ಲಿ: ಡಾ. ಬಿ.ಆರ್. ಅಂಬೇಡ್ಕರ್ ಮೂರ್ತಿಗೆ ಅವಮಾನಿಸಿ ಬಂಧನಕ್ಕೊಳಗಾದ ದುಷ್ಕರ್ಮಿಗಳಿಗೆ ಕಠಿಣ ಶಿಕ್ಷೆ ವಿಧಿಸಲು ಆಗ್ರಹಿಸಿ ಭೀಮ್ ಆರ್ಮಿ ಭಾರತ್ ಏಕತ್ ಮಿಷನ್ ಜಿಲ್ಲಾ ಹಾಗೂ ತಾಲೂಕು ವಿದ್ಯಾರ್ಥಿ ಘಟಕದ ವತಿಯಿಂದ ತಹಸೀಲ್ದಾರ್‌ ಶಿವರಾಜ ಶಿವಪುರ ಅವರ ಮುಖಾಂತರ ಗೃಹ ಸಚಿವ ಜಿ. ಪರಮೇಶ್ವರ ಅವರಿಗೆ ಗುರುವಾರ ಮನವಿ ಸಲ್ಲಿಸಲಾಯಿತು.

ಭೀಮ್ ಆರ್ಮಿ ಭಾರತ್ ಏಕತ್ ಮಿಷನ್ ಬಳ್ಳಾರಿ ಜಿಲ್ಲಾಧ್ಯಕ್ಷ ರವಿ ಮಣ್ಣೂರ ಮಾತನಾಡಿ, ಜ. 22ರಂದು ರಾತ್ರಿ ಸಮಯದಲ್ಲಿ ಕಲಬುರಗಿ ನಗರ ವ್ಯಾಪ್ತಿಯಲ್ಲಿ ಸ್ಥಾಪಿತವಾಗಿರುವ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಮೂರ್ತಿಗೆ ಕಿಡಿಗೇಡಿಗಳ ಗುಂಪು ಅಪಮಾನಗೊಳಿಸಿದೆ.

ಎಲ್ಲ ಜಾತಿ, ಧರ್ಮ ಪಂಥಗಳಿಗೆ ಯಾವುದೇ ರೀತಿಯ ತಾರತಮ್ಯ ಮಾಡದೇ ದೇಶದಲ್ಲಿ ಎಲ್ಲರೂ ಸಮಾನತೆ, ಸ್ವತಂತ್ರ, ಸ್ವಾಭಿಮಾನದಿಂದ ಬದುಕಲು ಸಂವಿಧಾನ ರೂಪಿಸಿಕೊಟ್ಟ ವಿಶ್ವದ ಮಹಾನಾಯಕ ಡಾ. ಬಿ.ಆ‌ರ್. ಅಂಬೇಡ್ಕರ್ ಮೂರ್ತಿಗೆ ಅಪಮಾನಗೊಳಿಸಿರುವುದು ಖಂಡನೀಯ.

ಘಟನೆಯಲ್ಲಿ ಭಾಗಿಯಾಗಿದ್ದ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಬಂಧನಕ್ಕೊಳಗಾದ ಕಿಡಿಗೇಡಿಗಳಿಗೆ ಕಠಿಣ ಶಿಕ್ಷೆ ವಿಧಿಸುವ ಮೂಲಕ ಈ ತರಹದ ಘಟನೆಗಳು ಮರುಕಳಿಸದಂತೆ ಕ್ರಮ ವಹಿಸಬೇಕು ಎಂದು ಭೀಮ್ ಆರ್ಮಿ ಮತ್ತು ಎಲ್ಲ ಪ್ರಗತಿಪರ ಸಂಘಟಕರ ಆಗ್ರಹವಾಗಿದೆ ಎಂದರು.

ಕರ್ನಾಟಕ ರಾಜ್ಯ ಅಸ್ಪೃಶ್ಯ ವಿಮೋಚನಾ ಸಮಿತಿಯ ರಾಜ್ಯ ಉಪಾಧ್ಯಕ್ಷ ಕೆ. ಲಕ್ಷ್ಮಣ, ಭೀಮ್ ಆರ್ಮಿ ಕಂಪ್ಲಿ ತಾಲೂಕು ಅಧ್ಯಕ್ಷ ಸಣ್ಣೆಪ್ಪ ತಳವಾರ, ಕರ್ನಾಟಕ ಜನಶಕ್ತಿ ಸಂಘದ ವಸಂತರಾಜ ಕಹಳೆ, ಮುಖಂಡರಾದ ಸಣಾಪುರ ಮರಿಯಪ್ಪ, ಬಸವರಾಜ್ ದನಕಾಯೋ, ರುದ್ರಪ್ಪ, ಹುಸೇನಪ್ಪ ಅಂಗಜಲ, ಟಿ.ಎಚ್. ರಾಜಕುಮಾರ, ಮುತ್ತಣ್ಣ, ಚನ್ನಬಸಪ್ಪ, ನೀಲಪ್ಪ ಪೇಂಟರ್ ಇತರರಿದ್ದರು.