ಜಾತಿ ಹೆಸರಿನಲ್ಲಿ ಮಹನೀಯರಿಗೆ ನಿಂದನೆ

| Published : Jun 21 2025, 12:49 AM IST

ಸಾರಾಂಶ

ಬ್ರಾಹ್ಮಣರು ಸಣ್ಣ ಉದ್ಯೋಗದ ಹಿಂದೆ ಬೀಳುವವರಲ್ಲ. ಅವರ ವಿದ್ಯೆಯಿಂದ ದೊಡ್ಡಮಟ್ಟದಲ್ಲಿ ಕೆಲಸ ಮಾಡುತ್ತಾರೆ. ಅದರಂತೆ ಲಿಂಗಾಯತರು ಶ್ರಮ ಪಡಬೇಕು. ಯಾರು ಸಮತವಾದಿಗಳಾಗಿರುತ್ತೋ ಅವರೇಲ್ಲರೂ ಲಿಂಗಾಯತರು. ನನಗೆ ಯಾವುದೇ ಜಾತಿ ಇಲ್ಲ.

ಕುಕನೂರು:

ದೇಶದಲ್ಲಿ ಇಂದು ಶರಣರು, ಮಹನೀಯರು ಹಾಗೂ ಹೋರಾಟಗಾರರನ್ನು ಜಾತಿ ಹೆಸರಿನಲ್ಲಿ ಅಳಿಯುತ್ತಿದ್ದಾರೆಂದು ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಬೇಸರ ವ್ಯಕ್ತಪಡಿಸಿದರು.

ಪಟ್ಟಣದ ಎಪಿಎಂಸಿ ಗೇಟ್‌ ಪಕ್ಕದಲ್ಲಿ ತಾಲೂಕು ಲಿಂಗಾಯತ ಪಂಚಮಸಾಲಿ ಸಮಾಜದ ವತಿಯಿಂದ ಶುಕ್ರವಾರ ಜರುಗಿದ ವೀರರಾಣಿ ಕಿತ್ತೂರು ಚೆನ್ನಮ್ಮ ಮೂರ್ತಿ ಪ್ರತಿಷ್ಠಾಪನೆಯ ಭೂಮಿ ಪೂಜೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಚೆನ್ನಮ್ಮ ಪಂಚಮಸಾಲಿ ಸಮಾಜಕ್ಕೆ ಸೀಮಿತವಲ್ಲ. ಮಾನವ ಕುಲಕ್ಕೆ ಬೆಳಕಾದವರು. ಅವರ ಆದರ್ಶವನ್ನು ಎಲ್ಲರೂ ಮೈಗೂಡಿಸಿಕೊಳ್ಳಬೇಕು ಎಂದ ಅವರು, ಚೆನ್ನಮ್ಮಳ ಕಂಚಿನ ಮೂರ್ತಿಗೆ ನಮ್ಮ ಕುಟುಂಬಸ್ಥದಿಂದ ₹ ೫ ಲಕ್ಷ ದೇಣಿಗೆ ನೀಡುತ್ತೇನೆ ಎಂದರು.

ಬ್ರಾಹ್ಮಣರು ಸಣ್ಣ ಉದ್ಯೋಗದ ಹಿಂದೆ ಬೀಳುವವರಲ್ಲ. ಅವರ ವಿದ್ಯೆಯಿಂದ ದೊಡ್ಡಮಟ್ಟದಲ್ಲಿ ಕೆಲಸ ಮಾಡುತ್ತಾರೆ. ಅದರಂತೆ ನಾವು ಶ್ರಮ ಪಡಬೇಕಿದೆ ಎಂದ ರಾಯರಡ್ಡಿ, ಯಾರು ಸಮತವಾದಿಗಳಾಗಿರುತ್ತೋ ಅವರೇಲ್ಲರೂ ಲಿಂಗಾಯತರು. ನನಗೆ ಯಾವುದೇ ಜಾತಿ ಇಲ್ಲ ಎಂದು ಹೇಳಿದರು.

ರಾಜ್ಯ ಸರ್ಕಾರಿ ಜನಗಣತಿಯನ್ನು ಮರು ಸರ್ವೇ ಮಾಡುತ್ತಿದೆ. ಕಾಂತರಾಜ್ ವರದಿ ಬಗ್ಗೆ ನನಗೆ ಯಾವುದೇ ತಕರಾರಿಲ್ಲ. ಆದರೆ, ಕೆಲವು ತಿದ್ದುಪಡಿ ಆಗಬೇಕೆಂದು ಮುಖ್ಯಮಂತ್ರಿಗೆ ಹೇಳಿದ್ದೆ. ಅದರಂತೆ ಸರ್ಕಾರ ಸಾಮಾಜಿಕ, ಶೈಕ್ಷಣಿಕ ಸ್ಥಿತಿಗತಿ ಅರಿಯಲು ಸರ್ವೇ ಮಾಡಿಸಲಿದೆ. ಆಗ ಲಿಂಗಾಯತರೆಲ್ಲರೂ ಮೂಲ ಜಾತಿ ಬರೆಸಬೇಕು. ಲಿಂಗಾಯತರು ೧.೨೦ ಕೋಟಿ ಇದ್ದು ನಾವು ಯಾರಿಗಿಂತ ಕಡಿಮೆ ಇಲ್ಲ. ಲಿಂಗಾಯತ ಸಮಾಜದಲ್ಲಿ ಉದ್ಯೋಗ, ಶೈಕ್ಷಣಿಕ ಸರ್ವೇಯನ್ನು ಕಾನೂನು ಮತ್ತು ಬದ್ಧತೆಯಲ್ಲಿ ಮಾಡಲಾಗುತ್ತದೆ ಎಂದರು.

ಮಾಜಿ ಸಂಸದ ಸಂಗಣ್ಣ ಕರಡಿ ಮಾತನಾಡಿ, ಚೆನ್ನಮ್ಮ ದೇಶಕ್ಕೋಸ್ಕರ ತಮ್ಮ ಜೀವನ ತ್ಯಜಿಸಿದ್ದು ಅವರ ಮೂರ್ತಿ ಸ್ಥಾಪನೆಗೆ ₹ 2 ಲಕ್ಷ ನೀಡುತ್ತೇನೆ ಎಂದರು.

ಸಾನ್ನಿಧ್ಯ ವಹಿಸಿದ್ದ ಕೂಡಲಸಂಗಮದ ಬಸವಜಯ ಮೃತ್ಯುಂಜಯ್ಯ ಸ್ವಾಮೀಜಿ ಮಾತನಾಡಿ, ರಾಜ್ಯದ ಶೇ.40ರಷ್ಟು ಗ್ರಾಮಗಳಲ್ಲಿ ಚೆನ್ನಮ್ಮನ ಮೂರ್ತಿಗಳಿವೆ. ಆ ಮೂರ್ತಿ ನೋಡುವುದರಿಂದ ನಮಗೆ ಸ್ಫೂರ್ತಿ ಬರಲಿದೆ ಎಂದರು.

ಪಂಚಮಸಾಲಿ ಸಮಾಜಕ್ಕೆ ೨ಎ ಮೀಸಲಾತಿ ಪ್ರಮಾಣಪತ್ರ ಸಿಗುವವರೆಗೂ ಹೋರಾಟ ಮಾಡುತ್ತೇವೆ. ಮುಂದಿಟ್ಟ ಹೆಜ್ಜೆಯನ್ನು ಹಿಂದಕ್ಕೆ ಸರಿಸುವ ಮಾತೆ ಇಲ್ಲ. ನನ್ನ ಜೋಳಿಗೆಯಿಂದ ಮೂರ್ತಿ ನಿರ್ಮಾಣಕ್ಕೆ ₹ ೫೦ ಸಾವಿರ ನೀಡುತ್ತೇನೆ ಎಂದರು.

ಈ ವೇಳೆ ಸಮಾಜದ ರಾಜ್ಯಾಧ್ಯಕ್ಷ ಸೋಮನಗೌಡ ಪಾಟೀಲ್, ಬಿಜೆಪಿ ಮುಖಂಡ ಬಸವರಾಜ ಕ್ಯಾವಟರ್, ವೀರಣ್ಣ ಹುಬ್ಬಳ್ಳಿ, ಬಸವರಾಜ ದಿಂಡೂರ, ಅಶೋಕ ತೋಟದ ಮಾತನಾಡಿದರು. ಜಿಲ್ಲಾಧ್ಯಕ್ಷ ಬಸವನಗೌಡ ತೊಂಡಿಹಾಳ, ತಾಲೂಕಾಧ್ಯಕ್ಷ ವೀರಣ್ಣ ಅಣ್ಣಿಗೇರಿ, ಅಂದಪ್ಪ ಜವಳಿ, ಕಳಕಪ್ಪ ಕಂಬಳಿ, ವಿನಾಯಕ ಬೆನ್ನಳ್ಳಿ, ಉಮಾ ಆರೇರ, ಗವಿಸಿದ್ದಪ್ಪ ಆರೇರ, ಈಶಪ್ಪ ಆರೇರ, ಕೆರೆಬಸಪ್ಪ ನಿಡಗುಂದಿ, ಹನುಮಂತಗೌಡ ಚಂಡೂರು, ಸಂತೋಷ ಬನ್ನಿಕೊಪ್ಪ, ಪಪಂ ಉಪಾಧ್ಯಕ್ಷ ಪ್ರಶಾಂತ್ ಆರುಬೆರಳ್ಳಿನ್, ಪಪಂ ಸದಸ್ಯೆ ಲಕ್ಷ್ಮೀ ವೀರೇಶ ಸಬರದ್, ಚಂದ್ರು ಬಗನಾಳ, ರಾಮನಗೌಡ ಹುಚನೂರು, ಮಲ್ಲಿಕಾರ್ಜುನ ಕುಡ್ಲೂರು, ಮಂಜುನಾಥ ಸೋಂಪೂರ ಇದ್ದರು.