ಕನ್ನಡಪ್ರಭ ವಾರ್ತೆ ಅಥಣಿ

ಇಂದಿನ ಯಾಂತ್ರಿಕ ಬದುಕಿನಲ್ಲಿ ಜೋಡೆತ್ತಿನ ಕೃಷಿಕರ ಸಂಖ್ಯೆ ಕಡಿಮೆಯಾಗುತ್ತಿದ್ದು, ಇದರಿಂದ ಫಲವತ್ತಾದ ಭೂಮಿ ಸತ್ವವನ್ನು ಕಳೆದುಕೊಳ್ಳುತ್ತಿದೆ. ನೀರು ಮತ್ತು ಗಾಳಿ ಕಲುಷಿತಗೊಳ್ಳುತ್ತಿವೆ. ಆರೋಗ್ಯವಂತ ಸಮಾಜಕ್ಕಾಗಿ ಜೋಡೆತ್ತಿನ ಕೃಷಿ ರೂಢಿಸಿಕೊಳ್ಳುವುದು ಇಂದಿನ ಅಗತ್ಯವಾಗಿದೆ ಎಂದು ಮೋಟಗಿ ಮಠದ ಪ್ರಭು ಚನ್ನಬಸವ ಸ್ವಾಮೀಜಿ ಹೇಳಿದರು. ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಯಡೂರ ವೀರಭದ್ರೇಶ್ವರ ದೇವಸ್ಥಾನದಿಂದ ಶ್ರೀಶೈಲದವರಿಗೆ ಜೋಡೆತ್ತಿನ ಮಹತ್ವ ಸಾರುವ ನಂದೀರಥ ಯಾತ್ರೆಗೆ ಸ್ವಾಗತ ಕೋರಿ ಮಾತನಾಡಿದರು. ಶ್ರೀಶೈಲ ಜಗದ್ಗುರುಗಳ ಮಾರ್ಗದರ್ಶನದಲ್ಲಿ ಸಿದ್ದೇಶ್ವರ ಸ್ವಾಮೀಜಿಗಳ ಪ್ರೇರಣೆಯಿಂದ ಸೋಮಲಿಂಗ ಅಜ್ಜನವರ ಹಾಗೂ ಬಸವರಾಜ ಬಿರಾದಾರ ನೇತೃತ್ವದಲ್ಲಿ ನಡೆಯುತ್ತಿರುವ ಈ ನಂದಿ ರಥಯಾತ್ರೆ ಯಶಸ್ವಿಯಾಗಲಿ. ಅಲ್ಲಲ್ಲಿ ರೈತ ಸಮಾವೇಶಗಳನ್ನು ನಡೆಸುವ ಮೂಲಕ ರೈತರಿಗೆ ಜೋಡೆತ್ತಿನ ಕೃಷಿ ಮಹತ್ವ ಮತ್ತು ಗೋ ಸಂಪತ್ತು ಉಳಿಸಿ ಬೆಳೆಸುವ ಜಾಗೃತಿ ಅಭಿಯಾನ ಸಂಕಲ್ಪ ಮಾಡಿರುವುದು ಅತ್ಯಂತ ಶ್ಲಾಘನೀಯ ಎಂದರು.ಹಿರಿಯ ವಕೀಲ ಬಿ.ಎಲ್.ಪಾಟೀಲ ಮಾತನಾಡಿ, ಲಿಂ.ಸಿದ್ದೇಶ್ವರ ಸ್ವಾಮೀಜಿ ಅವರು ರೈತರ ಕಾರ್ಯಗಳಿಗೆ ಪ್ರಮುಖ ಆದ್ಯತೆ ನೀಡುತ್ತಿದ್ದರು. ಆ ಗುರುಗಳು ಹಾಕಿಕೊಟ್ಟ ಮಾರ್ಗದಲ್ಲಿ ಜೋಡೆತ್ತಿನ ಕೃಷಿಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ನಮ್ಮ ರೈತರನ್ನ ಜಾಗೃತಗೊಳಿಸಬೇಕು. ಅತಿಯಾದ ರಾಸಾಯನಿಕ ಗೊಬ್ಬರ ಮತ್ತು ಕೀಟನಾಶಕಗಳ ಬಳಕೆಯಿಂದ ಫಲವತ್ತಾದ ಮಣ್ಣು ಸತ್ವ ವನ್ನು ಕಳೆದುಕೊಳ್ಳುತ್ತಿದೆ. ಸಾವಯುವ ಕೃಷಿಗೆ ಹೆಚ್ಚು ಉತ್ತೇಜನ ನೀಡುವ ಮೂಲಕ ಮಣ್ಣಿನ ಸತ್ವವನ್ನು ಉಳಿಸಲು ನಾವೆಲ್ಲರೂ ಶ್ರಮಿಸಬೇಕು ಎಂದು ಕರೆ ನೀಡಿದರು.ಪುರಸಭೆ ಅಧ್ಯಕ್ಷ ಶಿವಲೀಲಾ ಬೂಟಾಳಿ ಮಾತನಾಡಿ, ನಂದಿ ಕೂಗು ಅಭಿಯಾನ ಹಾಗೂ ನಂದಿ ಸೇನೆ ಸಂಘಟನೆಯ ಅಡಿಯಲ್ಲಿ 10 ದಿನಗಳ ಕಾಲ ಸಾಗುವ ಮಾರ್ಗದಲ್ಲಿ ಬರುವ ಪ್ರಮುಖ ಸ್ಥಳಗಳಲ್ಲಿ ರೈತ ಸಮಾವೇಶಗಳನ್ನು ನಡೆಸುತ್ತಿರುವುದು ಒಳ್ಳೆಯ ಬೆಳವಣಿಗೆ ಎಂದರು.ನಂದಿರಥ ಯಾತ್ರೆ ಅಭಿಯಾನದ ರೂವಾರಿ ಬಸವರಾಜ ಬಿರಾದಾರ ಮಾತನಾಡಿದರು. ಶೆಟ್ಟರ ಮಠದ ಮರುಳುಸಿದ್ದ ಸ್ವಾಮೀಜಿ, ಮಾಜಿ ಶಾಸಕ ಶಹಜಾನ ಡೊಂಗರಗಾವ, ಕಾಂಗ್ರೆಸ್ ಮುಖಂಡ ಗಜಾನನ ಮಂಗಸೂಳಿ, ಬಿಜೆಪಿ ಮುಖಂಡ ಸಂಪತ್ ಕುಮಾರಶೆಟ್ಟಿ, ನ್ಯಾಯವಾದಿಗಳ ಸಂಘದ ಅಧ್ಯಕ್ಷ ಎ.ಎ.ಹುದ್ದಾರ, ರೈತ ಮುಖಂಡರಾದ ಗಿರೀಶ್ ಬುಟಾಳಿ, ಶಿವಾನಂದ ದಿವಾನಮಳ, ಮಹದೇವ ಮಡಿವಾಳ, ಸದಾಶಿವ ಬುಟಾಳಿ, ಪ್ರಶಾಂತ ತೋಡ್ಕರ, ಮುರುಗೇಶ ಬಾನೆ, ನ್ಯಾಯವಾದಿ ಸುಭಾಷ ನಾಯಕ, ಎಸ್.ಎಸ್.ಪಾಟೀಲ, ಅಶೋಕ ಐಗಳಿ, ಸಿದ್ದು ಪಾಟೀಲ, ಮಲ್ಲಿಕಾರ್ಜುನ ಅಂದಾನಿ, ಮಲ್ಲಪ್ಪಾ ಹಂಚಿನಾಳ, ಶಿವಾನಂದ ಐಗಳಿ, ಡಾ.ಪ್ರಕಾಶ್ ಕುಮಟಳ್ಳಿ, ಡಾ.ಮಹೇಶ್ ಕಾಪಸೆ, ಅಣ್ಣಾಸಾಬ ತೆಲಸಂಗ, ಉದಯ ಮಾಕಾಣಿ, ಸಿದ್ದು ಹಂಡಗಿ, ಜಗನ್ನಾಥ ಬಾಮನಿ, ಸೌರಭ ಮಾಶ್ಯಾಳ ಸೇರಿ ಅನೇಕರು ಉಪಸ್ಥಿತರಿದ್ದರು