ಹೋರಾಟ ಹತ್ತಿಕ್ಕುವ ಹುನ್ನಾರ: ಆರೋಪ

ಕನ್ನಡಪ್ರಭ ವಾರ್ತೆ ಹುಳಿಯಾರು

ಅಹೋ ರಾತ್ರಿಯ ಧರಣಿಯನ್ನು ಹತ್ತಿಕ್ಕುವ ಹುನ್ನಾರ ನಡೆದಿದೆ. ಇದಕ್ಕೆ ಕಾಣದ ಕೈಗಳು ಕೆಲಸ ಮಾಡುತ್ತಿವೆ ಎಂದು ರಾಜ್ಯ ರೈತ ಸಂಘದ ಹೊಸಳ್ಳಿ ಚಂದ್ರಣ್ಣ ಹೇಳಿದರು. ಪಟ್ಟಣದ ಪಂಚಾಯಿತಿ ಮುಂದೆ ಸಂತೆ ಸ್ಥಳಾಂತರ, ಮೂಲಸೌಕರ್ಯ ಹಾಗೂ ಕಸ ವಿಲೇವಾರಿ ಘಟಕ ಸ್ಥಾಪನೆಗಾಗಿ ಕಳೆದ 35 ದಿನಗಳಿಂದ ನಡೆಯುತ್ತಿರುವ ಹೋರಾಟದಲ್ಲಿ ಅವರು ಮಾತನಾಡಿದರು. ಶಾಂತಿಯುತವಾಗಿ ಅಹೋ ರಾತ್ರಿ ಧರಣಿ ನಡೆಸುತ್ತಿದ್ದು ಬೆಳಗಿನ ಸಮಯದಲ್ಲಿ ಧರಣಿ ಸ್ಥಳದಲ್ಲಿ ಹಾಡು ಭಜನೆ ಮಾಡುತ್ತಿದ್ದೇವೆ. ಇಷ್ಟು ದಿನದಿಂದ ಸುಮ್ಮನಿದ್ದ ಪಟ್ಟಣ ಪಂಚಾಯತಿ ಅಧಿಕಾರಿಗಳು ಇಂದು ನಮಗೆ ಕಿರಿಕಿರಿಯಾಗುತ್ತಿದೆ ಎಂದು ಪೊಲೀಸರಿಗೆ ದೂರು ನೀಡಿದ್ದು ಅವರ ಮುಖಾಂತರ ನಮ್ಮನ್ನು ಹತ್ತಿಕ್ಕಲು ಮುಂದಾಗಿದ್ದಾರೆ. ನಾವು ಬಿಸಿಲು, ಮಳೆ, ಚಳಿ ಲೆಕ್ಕಿಸದೆ ನಮ್ಮ ಹೆಂಡತಿ ಮಕ್ಕಳನ್ನು ಬಿಟ್ಟು ಬಂದು ರಸ್ತೆ ಮಧ್ಯೆ ಮಲಗಿ ನಮ್ಮ ಹಕ್ಕನ್ನು ಪಡೆಯಲು ಅಹೋ ರಾತ್ರಿ ಧರಣಿ ನಡೆಸುತ್ತಿದ್ದೇವೆ ಶಾಶ್ವತ ಪರಿಹಾರಗಳು ದೊರಕುವವರೆಗೂ ಹೋರಾಟವನ್ನು ನಿಲ್ಲಿಸುವುದಿಲ್ಲವೆಂದು ತಿಳಿಸಿದರು.